ಭಯ ಹುಟ್ಟಿಸುವುದೇ ನಿಜವಾದ ಭಯೋತ್ಪಾದನೆ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಗೋಧ್ರಾ ಮಾದರಿಯ ಗಲಾಟೆ ಸೃಷ್ಟಿಸುವ ಹುನ್ನಾರವಿದೆ ಎನ್ನುವ ಕೇಂದ್ರ ಮಾಜಿ ಸಚಿವ ಬಿ.ಕೆ.ಹರಿಪ್ರಸಾದ ಹೇಳಿಕೆಯೇ ಭಯ ಹುಟ್ಟಿಸುವಂತಹದ್ದು. ಹೀಗೆ ಮಾತನಾಡುವುದು ಸಾಧುವಲ್ಲ. ಇವರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು.

ಕನ್ನಡಪ್ರಭ ವಾರ್ತೆ ವಿಜಯಪುರಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ವಿದೇಶಿಗರು ಸಹ ದೇಣಿಗೆ ನೀಡಿದ್ದಾರೆ, ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಂದಿರ ಪರಿಸರ ಇಕ್ಕಟ್ಟಾದ ಕಾರಣ ಎಲ್ಲರೂ ಭಾಗವಹಿಸಲು ಸಾಧ್ಯವಿಲ್ಲ. ಹೀಗಾಗಿ ಸೀಮಿತವಾಗಿ ಧಾರ್ಮಿಕ ನೆಲೆಯಲ್ಲಿ ಮಾತ್ರ ಕಾರ್ಯಕ್ರಮ ನಡೆಯಲಿದೆ ಎಂದು ಪೇಜಾವರ ಅಧೋಕ್ಷ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ಹೇಳಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರು ತಮಗೆ ಕರೆದಿಲ್ಲ ಎಂದು ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು. ಭಕ್ತರು ತಮ್ಮ ಗ್ರಾಮ ಮಂದಿರದಲ್ಲಿ ಬೃಹತ್ ಎಲ್‌ಇಡಿ ಪರದೆಯಲ್ಲಿ ಮಂದಿರ ಲೋಕಾರ್ಪಣೆ ಕ್ಷಣ ಕಣ್ತುಂಬಿಕೊಳ್ಳಬೇಕು. ಈ ವೇಳೆ ಪೂಜೆ, ಪಾರಾಯಣ, ಯಜ್ಞ, ಪ್ರಸಾದ ವಿತರಣೆ ಎಲ್ಲೆಡೆ ನಡೆಯಬೇಕು. ಆ ಮೂಲಕ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಮುರಳಿ ಮನೋಹರ ಜೋಶಿ ಅವರಿಗೆ ಆಹ್ವಾನ ಹೋಗಿದೆ ಎಂದು ಅವರು ಸ್ಪಷ್ಟಪಡಿಸಿದರು.ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಇಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರಿಗೂ ತೊಂದರೆಯಾಗಬಾರದು ಎಂಬ ಕಳಕಳಿಯಿಂದ ಸೀಮಿತವಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ. ಇಂಥ ನಡವಳಿಕೆ ಸರಿಯಲ್ಲ. ರಾಮ ರಾಜಕೀಯ ವಸ್ತುವಲ್ಲ, ಶ್ರೀರಾಮ ಮಂದಿರ ವ್ಯಾಜ್ಯ ಜನ್ಮತಾಳಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ‍್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

ಅಡ್ಡಗಾಲು ಹಾಕುತ್ತಾರೆ:

ಶ್ರೀರಾಮ ಮಂದಿರ ನಿರ್ಮಿಸಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ನೀವು ಮಾಡಲಿಲ್ಲ, ಯಾರಾದರೂ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆ. ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರಿಂದ ಏನು ಇವಾಗ ಎಂದರು.ರಾಮ ರಾಜ್ಯ ಮಾಡದೆ ಇರೋ ಅಪವಾದವನ್ನು ಅವರು ಹಂಚಿಕೊಳ್ಳಲು ತಯಾರಿದ್ದಾರಾ ಎಂದು ಪ್ರಶ್ನಿಸಿದ ಶ್ರೀಗಳು, ಲಾಭ ಇದ್ದರೆ ನಮಗೆ, ತಪ್ಪುಗಳಿದ್ದರೆ ಅವರಿಗೆ ಮಾತ್ರ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಾತನಾಡುವುದೇ ಭಯೋತ್ಪಾದನೆ:

ಗೋಧ್ರಾ ಮಾದರಿಯ ಗಲಾಟೆ ಸೃಷ್ಟಿಸುವ ಹುನ್ನಾರವಿದೆ ಎನ್ನುವ ಕೇಂದ್ರ ಮಾಜಿ ಸಚಿವ ಬಿ.ಕೆ.ಹರಿಪ್ರಸಾದ ಹೇಳಿಕೆಯೇ ಭಯ ಹುಟ್ಟಿಸುವಂತಹದ್ದು. ಹೀಗೆ ಮಾತನಾಡುವುದು ಸಾಧುವಲ್ಲ. ಇವರ ಬಳಿ ಮಾಹಿತಿ ಇದ್ದರೆ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಅದು ಬಿಟ್ಟು ಹೀಗೆ ಭಯ ಹುಟ್ಟಿಸುವ ಮಾತನಾಡಬಾರದು. ಹೀಗೆ ಮಾಡುವುದೇ ನಿಜವಾದ ಭಯೋತ್ಪಾದನೆ ಎಂದು ವಾಗ್ದಾಳಿ ನಡೆಸಿದರು.ಕೆಲವು ಯುವಕರು ರಾಮ ಮಂದಿರ ಕೆಡುವುದಾಗಿ ಹೇಳಿಕೆ ನೀಡಿದ್ದಾರೆ. ತಪ್ಪು ದಾರಿ ತುಳಿಯುತ್ತಿರುವ ಇಂತಹವರಿಗೆ ಬುದ್ಧಿವಾದ ಹೇಳಬೇಕು. ಸರ್ಕಾರ ಬದಲಾದ ನಂತರ ರಾಮಮಂದಿರ ಕೆಡವುತ್ತೇವೆ ಎಂದು ಕೆಲವು ಯುವಕರು ಹೇಳಿಕೆ ಹರಿಬಿಟ್ಟಿದ್ದಾರೆ. ಹೀಗಾಗಿ ದಾರಿ ತಪ್ಪಿದ ಯುವಕರಿಗೆ ಆಯಾ ಸಮಾಜದ ಹಿರಿಯರು ಬುದ್ಧಿವಾದ ಹೇಳಬೇಕು. ಹಿಂದುಗಳು ಸಂವಿಧಾನಕ್ಕೆ ಬದ್ಧರಾಗಿ ನಡೆಸಿದ ಹೋರಾಟ, ಸುಪ್ರೀಂಕೋರ್ಟ್ ತೀರ್ಪಿನ ಫಲವಾಗಿ ಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ವಿರೋಧ ಇದೆ ಎಂದು ನನಗೆ ತೋರಿಲ್ಲ ಎಂದರು.

----------

ಬಾಕ್ಸ್....ಈ ಸಮಯದಲ್ಲಿ ಹುಬ್ಬಳ್ಳಿ ವಿವಾದ ಬೇಕಿರಲಿಲ್ಲಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ತಪ್ಪಿತಸ್ಥನಾಗಿದ್ದರೆ ಶಿಕ್ಷಿಸುವುದು ತಪ್ಪಲ್ಲ. ಆದರೆ, ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಂಧಿಸಿರುವುದು ತಪ್ಪು ಸಂದೇಶ ಕೊಡುತ್ತದೆ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀ ಹೇಳಿದರು.ಇಲ್ಲಿನ ಜ್ಞಾನ ಯೋಗಾಶ್ರಮಕ್ಕೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ಲೋಕಾರ್ಪಣೆ ಸಮಯದಲ್ಲಿ ಈ ಪ್ರಹಸನ ಸೃಷ್ಟಿ ಮಾಡಿರುವುದು ಸರಿಯಲ್ಲ. ೧೦ ಕೋಟಿ ಧನ ಸಂಗ್ರಹಿಸಿ ರಾಮ ಮಂದಿರಕ್ಕೆ ಕೊಟ್ಟಿದ್ದೇವೆ. ಆದರೂ ನಮಗೆ ಆಹ್ವಾನ ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶ್ರೀಗಳು, ದೊಡ್ಡ ಮೊತ್ತದ ದೇಣಿಗೆ ಕೊಟ್ಟವರು ಬಹಳ ಮಂದಿ ಇದ್ದಾರೆ. ಅಷ್ಟು ಮಂದಿಯನ್ನು ಕರೆದು ಕೂಡಿಸುವ ವ್ಯವಸ್ಥೆ ಅಲ್ಲಿಲ್ಲ. ಕೆಲವರನ್ನು ಕರೆದರೆ ಮಾತ್ರ ಕಾರ್ಯಕ್ರಮ ನಡೆಸಲು ಸಾಧ್ಯ ಆಗಲಿದೆ. ಆ ದಿನ ಬರಲು ಅವಕಾಶ ಸಿಗದವರಿಗೆ ಮುಂದಿನ ದಿನ ಬರಲಿಕ್ಕೆ ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಹೇಳಿದರು.-------------

ಕೋಟ್

ನಾವು ಹಿಂದುಗಳು. ಹೀಗಾಗಿ ಭಾರತ ಹಿಂದು ದೇಶ ಎಂದು ಹೇಳಿಕೊಳ್ಳಲು ಸಂಕೋಚವೇಕೆ ? ಹಿಂದು ರಾಷ್ಟ್ರದಲ್ಲಿ ಎಲ್ಲರೂ ಇದ್ದಾರೆ, ಎಲ್ಲರಿಗೂ ಆಶ್ರಯ ನೀಡಲಾಗಿದೆ. ಸರ್ವೇ ಜನ ಸುಖಿನೋ ಭವಂತು ಎನ್ನುವ ದೇಶ ನಮ್ಮದು. ಇಲ್ಲಿ ಸೌಹಾರ್ದತೆ ಇದೆ. ರಾಮ ಮಂದಿರ ಸಂವಿಧಾನ ಬದ್ಧವಾಗಿಯೇ ನಿರ್ಮಾಣವಾಗಿದೆ.

-ಪೇಜಾವರ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ

Share this article