ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟನೆ
ಬಳ್ಳಾರಿ ನಗರದ ಸಮಗ್ರ ಅಭಿವೃದ್ಧಿ ಮಾಡುವ ಉದ್ದೇಶದಿಂದ ಮುಂದಿನ ತಿಂಗಳಿನಿಂದ ಪ್ರತಿ ವಾರ್ಡಿಗೆ ಭೇಟಿ ನೀಡಿ, ಇಡೀ ದಿನ ಆಯಾ ವಾರ್ಡಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ಬಸವ ಭವನದಲ್ಲಿ ನಾರಾ ಭರತ್ ರೆಡ್ಡಿ ಅಭಿಮಾನಿಗಳ ಬಳಗದ ವತಿಯಿಂದ ಏರ್ಪಡಿಸಿದ್ದ ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಮ್ಮ ನಾಯಕರು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ನನ್ನಂತಹ ಯುವಕನಿಗೆ ಆಶೀರ್ವಾದ ಮಾಡಿ ನೀವೆಲ್ಲ ನನ್ನನ್ನು ಶಾಸಕನಾಗಿ ಮಾಡಿದ್ದೀರಿ, ನೀವು ಇಟ್ಟಿರುವ ಭರವಸೆಯಂತೆ ನಾನು ಎಲ್ಲ ಇಲಾಖೆ ಎಡತಾಕಿ ಅನುದಾನ ತಂದು ಅಭಿವೃದ್ಧಿ ಮಾಡುತ್ತಿರುವೆ ಎಂದು ಹೇಳಿದ ಅವರು, ಮುಂಬರುವ ದಿನಗಳಲ್ಲಿ ಪ್ರತಿ ವಾರ್ಡ್ ಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅಲ್ಲಿಯೇ ಬಗೆಹರಿಸುವ ಯೋಜನೆ ಆರಂಭಿಸಲಿದ್ದೇನೆ ಎಂದರು.
ಈ ವಿಶೇಷ ಕಾರ್ಯಕ್ರಮಕ್ಕೆ ಸಲಾಂ ಬಳ್ಳಾರಿ ಎಂದು ಹೆಸರಿಡಲಾಗುವುದು, ಇಡೀ ದಿನ ಒಂದು ವಾರ್ಡಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದ ಶಾಸಕ ಭರತ್ ರೆಡ್ಡಿ, ಮನೆ ಮನೆಗೆ ಆಡಳಿತ ತಲುಪಿಸುವ ಯೋಜನೆ ಇದಾಗಿದೆ, ನಾನು ತಂದಿರುವ ಅನುದಾನ ಸಮರ್ಪಕವಾಗಿ ಅಭಿವೃದ್ಧಿ ಮಾಡುವ ಉದ್ದೇಶ ನಮ್ಮದು ಎಂದರು.ಕಲ್ಯಾಣ ಸಂಸ್ಥಾನ ಮಠದ ಶ್ರೀಕಲ್ಯಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪಾಲಿಕೆಯ ಉಪ ಮೇಯರ್ ಡಿ. ಸುಕುಂ, ಸುಮಂಗಳಮ್ಮ, ನಾರಾ ಭರತ್ ರೆಡ್ಡಿ ಅಭಿಮಾನಿಗಳ ಬಳಗದ ಯಶೋಧಾ, ವಿಜಯಲಕ್ಷ್ಮೀ, ಮುಬೀನಾ ಮೊದಲಾದವರು ವೇದಿಕೆಯಲ್ಲಿದ್ದರು.