- ರಾಕ್ ಡೇದಿಂದ ಹಿಡಿದು ವಿವೇಕರ ಜನ್ಮದಿನದವರೆಗೆ ವ್ರತಾಚರಣೆ
- ಇಲ್ಲಿ ಯಾವುದೇ ನಿಬಂಧನೆಗಳಿಲ್ಲಶಿವಾನಂದ ಗೊಂಬಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಯುವ ಸಮುದಾಯವನ್ನು ವ್ಯಸನ ಮುಕ್ತರನ್ನಾಗಿಸಲು, ಸದೃಢ ದೇಹವಂತರನ್ನಾಗಿಸಲು ಶ್ರೀರಾಮಕೃಷ್ಣ, ವಿವೇಕಾನಂದರ ಆಶ್ರಮ ಹಾಗೂ ಯುವ ಬ್ರಿಗೇಡ್ನಿಂದ "ವಿವೇಕ ಮಾಲಾಧಾರಣೆ " ಕಾರ್ಯಕ್ರಮ ಇದೀಗ ಯುವಕರನ್ನು ಸೆಳೆಯುತ್ತಿದೆ.ಅಯ್ಯಪ್ಪ ಸ್ವಾಮಿ ಮಾಲಾಧಾರಣೆ, ಹನುಮಾನ ಮಾಲಾಧಾರಣೆ, ದತ್ತ ಮಾಲಾಧಾರಣೆ ಬಗ್ಗೆ ಜನಸಾಮಾನ್ಯರಿಗೆಲ್ಲ ಗೊತ್ತು. ಕಳೆದ ನಾಲ್ಕೈದು ವರ್ಷದ ಹಿಂದೆಯಷ್ಟೇ ಪ್ರಾರಂಭವಾಗಿರುವ "ವಿವೇಕ ಮಾಲಾಧಾರಣೆ "ಯೂ ಸಣ್ಣದಾಗಿ ಪ್ರಸಿದ್ಧಿ ಪಡೆಯುತ್ತಿದೆ. ಪ್ರತಿವರ್ಷ 1200-1500 ಜನರ ಯುವ ಸಮುದಾಯ ವಿವೇಕ ಮಾಲಾಧಾರಣೆ ಮಾಡುತ್ತಿದೆ.
ಏನಿದು, ಯಾವಾಗ?ಯುವಕರ ಐಕಾನ್ ಎಂದರೆ ಸ್ವಾಮಿ ವಿವೇಕಾನಂದರು. ಏಳಿ ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂಬುದು ವಿವೇಕರ ಘೋಷವಾಕ್ಯ. ದೇಹ ಸದೃಢವಾದರೆ ಏನನ್ನಾದರೂ ಸಾಧಿಸಬಹುದು ಎಂಬುದು ವಿವೇಕರ ಸಂದೇಶಗಳಲ್ಲೊಂದು. ಆದರೆ, ಈಗಿನ ಯುವ ಸಮುದಾಯ ದುಶ್ಚಟಗಳಿಂದಾಗಿ ತಮ್ಮ ಆರೋಗ್ಯ ಹಾಗೂ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿವೇಕರ ಸಂದೇಶ ಸರಿಯಾಗಿ ತಿಳಿಸಿಕೊಟ್ಟರೆ ಅವರ ಬದುಕಿನಲ್ಲಿ ತಾನಾಗಿಯೇ ಬದಲಾವಣೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳ ಹಿಂದೆ ಯುವ ಬ್ರಿಗೇಡ್ ಹಾಗೂ ರಾಮಕೃಷ್ಣ- ವಿವೇಕಾನಂದರ ಆಶ್ರಮ ಈ ವಿವೇಕ ಮಾಲಾಧಾರಣೆಯನ್ನು ಪರಿಚಯಿಸಿತು. ವಿವೇಕರು ಕನ್ಯಾಕುಮಾರಿ ಬಂಡೆಯ ಮೇಲೆ ಭಾರತದ ಉದ್ಧಾರಕ್ಕಾಗಿ ಡಿ. 25ರಿಂದ 3 ದಿನಗಳ ಕಾಲ ಕಣ್ಣೀರು ಸುರಿಸುತ್ತಾ ಧ್ಯಾನಸ್ಥರಾಗಿದ್ದರು. ಈ ಹಿನ್ನೆಲೆಯಲ್ಲಿ ಡಿ. 25ರಂದು ರಾಕ್ ಡೇ ಎಂದು ಯುವಬ್ರಿಗೇಡ್ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಂದು ಈ ಮಾಲಾಧಾರಣೆ ಮಾಡಲಾಗುತ್ತಿದೆ. ವಿವೇಕರ ಜನ್ಮದಿನವಾದ ಜ.12ರ ವರೆಗೆ ಮಾಲಾಧಾರಣೆಯ ವ್ರತ ನಡೆಯುತ್ತದೆ.ಬೇರೆ ಬೇರೆ ದೇವರ ಮಾಲಾಧಾರಣೆಯಂತೆ ಕಟ್ಟುನಿಟ್ಟಿನ ನಿಯಮಗಳೇನೂ ಇರುವುದಿಲ್ಲ. ಯಾವುದೇ ಬಗೆಯ ವಸ್ತ್ರ ಸಂಹಿತೆಯೂ ಇರುವುದಿಲ್ಲ. ಆಹಾರ ಪದ್ಧತಿಯೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಬಹುದು. ಇಲ್ಲಿ ಮಾಲಾಧಾರಣೆ ಎಂದರೆ ಬರೀ ವಿವೇಕಾನಂದರ ಚಿತ್ರವಿರುವ ಪೆಡೆಂಟ್ ಹಾಕಿಕೊಳ್ಳುವುದಷ್ಟೇ. ಆದರೆ ಪ್ರತಿನಿತ್ಯ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎಳಬೇಕು. ಯೋಗಾಸನ, ಪ್ರಾಣಾಯಾಮ, ವ್ಯಾಯಾಮಗಳನ್ನು ತಪ್ಪದೇ ಮಾಡಬೇಕು. ಆನಂತರ ಅವರಿಗೆ ಯಾವಾಗ ಸಮಯ ಸಿಗುತ್ತದೆಯೋ ಆ ಸಮಯದಲ್ಲಿ ಕನಿಷ್ಠ ಒಂದು ಗಂಟೆ ಕಾಲ ವಿವೇಕರ ಕುರಿತು ಅಧ್ಯಯನ ಮಾಡಬೇಕು. ಇಷ್ಟೇ ಇಲ್ಲಿನ ನಿಯಮ. ಉಳಿದಂತೆ ಅವರು ಮನಸಿಗೆ ಬಂದಿದ್ದನ್ನು ಊಟ ಮಾಡಬಹುದು. ಬೇಕಾದ ಬಟ್ಟೆ ಧರಿಸಬಹುದು.
ಜ.12ರಂದು ವ್ರತಾಚರಣೆ ಮುಗಿಯುತ್ತದೆ. ಆಗ ದೇವಸ್ಥಾನದಲ್ಲಾಗಲಿ, ಕನ್ಯಾಕುಮಾರಿಗೆ ತೆರಳಿ ಅಲ್ಲಿಯಾಗಲಿ ವ್ರತಾಚರಣೆಯನ್ನು ಬಿಡಬಹುದು. ಮರುಕ್ಷಣವೇ ಪೆಂಡೆಂಟ್ ಧರಿಸಬಹುದು. ಜತೆಗೆ ಜೀವನ ಪೂರ್ತಿ ಯೋಗಾಸನ, ವ್ಯಾಯಾಮ ಮಾಡಬಹುದು. ಪ್ರತಿವರ್ಷ 400-500 ಜನ ಮಾಲಾಧಾರಿಗಳು ಕನ್ಯಾಕುಮಾರಿಗೆ ತೆರಳಿ ಅಲ್ಲಿ ಮಾಲೆ ವಿಸರ್ಜನೆ ಮಾಡಿ ಬರುತ್ತಾರೆ. ಉಳಿದವರು ತಮಗೆಲ್ಲಿ ಅನುಕೂಲವಾಗುತ್ತದೆಯೋ ಆ ದೇವಸ್ಥಾನದಲ್ಲೋ, ರಾಮಕೃಷ್ಣರ ಆಶ್ರಮದಲ್ಲೋ ವಿಸರ್ಜನೆ ಮಾಡುತ್ತಾರೆ.ಬರೀ ನಾಲ್ಕೈದು ವರ್ಷದ ಹಿಂದೆ ಈ ಮಾಲಾಧಾರಣೆ ಶುರುವಾಗಿದೆ. ಮೊದಲು ಕೆಲವರು ಮಾತ್ರ ಈ ವ್ರತಾಚರಣೆ ಮಾಡುತ್ತಿದ್ದರು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಾ ಸಾಗುತ್ತಿದೆ. ಎರಡು ವರ್ಷದ ಹಿಂದೆ ರಾಜ್ಯದಲ್ಲಿ 700 ಜನ ಮಾಲಾಧಾರಣೆ ಮಾಡಿದ್ದರು. ಕಳೆದ ವರ್ಷ 1200 ಯುವಕರು ಮಾಲಾಧಾರಣೆ ಮಾಡಿದ್ದರು. ಈ ವರ್ಷ ಈ ಸಂಖ್ಯೆ 1500ಕ್ಕೂ ಅಧಿಕ ಆಗುವ ಸಾಧ್ಯತೆ ಇದೆ ಎಂಬುದು ಯುವ ಬ್ರಿಗೇಡ್ನ ಅಂಬೋಣ.
ಅಮ್ಮ ನಮನ:ಇನ್ನು ಫೆ. 22ರಂದು ಶಾರದಾಮಾತೆಯ ಜನ್ಮದಿನ. ಈ ಹಿನ್ನೆಲೆಯಲ್ಲಿ ಅದನ್ನು 25ರಂದು ನಡೆಯುವ ವಿವೇಕ ಮಾಲಾಧಾರಣೆ ವೇಳೆ ಯೋಧರ ತಾಯಿಂದಿರರ ಪಾದಪೂಜೆ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಇಂದು ವಿವೇಕಮಾಲಾಧಾರಣೆ
ಇಲ್ಲಿನ ಕಲ್ಯಾಣ ನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಡಿ. 25ರಂದು ಬೆಳಗ್ಗೆ 10ಕ್ಕೆ ವಿವೇಕಮಾಲೆ ಧಾರಣೆ, ನಂತರ ಯೋಧರ ತಾಯಂದಿರ ಪಾದಪೂಜೆ "ಅಮ್ಮ ನಮನ " ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾಮಿ ರಘುವೀರಾನಂದ ಮಹಾರಾಜ್, ಬುದ್ಧಿಯೋಗಾನಂದ ಮಹಾರಾಜ್, ಗುರುದೇವ ಚರಣಾನಂದ ಮಹಾರಾಜ್ ಸಾನ್ನಿಧ್ಯ ವಹಿಸುವರು.ವಿವೇಕಾಮಾಲಾ ಧಾರಣೆಯನ್ನು ಪ್ರತಿವರ್ಷ ಡಿ. 25ಕ್ಕೆ ಮಾಡಲಾಗುತ್ತಿದೆ. ಮಾಲೆ ಧರಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಬೆಳಗ್ಗೆ ವ್ಯಾಯಾಮ, ಯೋಗಾಸನ, ಪ್ರಾಣಾಯಮ, ಧ್ಯಾನ ಮಾಡುವುದು. ಆಹಾರಕ್ಕೆ ಯಾವುದೇ ನಿರ್ಬಂಧವಿಲ್ಲ. ವಿವೇಕರ ಸಾಹಿತ್ಯ ಅಧ್ಯಯನ ಮಾಡಬೇಕಷ್ಟೇ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಪ್ರಶಾಂತ ಸುತಾರ ತಿಳಿಸಿದ್ದಾರೆ.