ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿ ತುಮಕೂರು ಜಿಲ್ಲಾ ಕರ್ನಾಟಕ ಸರ್ವೋದಯ ಮಂಡಲ ವತಿಯಿಂದಸ್ವಾಮಿ ವಿವೇಕಾನಂದ ಹಾಗೂ ಕುವೆಂಪು ನೆನಪು ಕಾರ್ಯಕ್ರಮ ನಡೆಯಿತು.
ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಕರಿಯಣ್ಣ, ಮಕ್ಕಳು ಗಾಂಧಿಯವರ ಚಿಂತನೆ ಅಳವಡಿಸಿಕೊಳುವಂತೆ ಕರೆ ನೀಡಿದರು.ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಪ್ರಾಸ್ತಾವಿಕಾವಾಗಿ ಮಾತನಾಡಿ, ಮಹಾತ್ಮ ಗಾಂಧಿ ಅವರ ಸತ್ಯ ಅಹಿಂಸೆ ತತ್ವ ಗಳನ್ನು ಅಳವಡಿಸಿ ಕೊಂಡರೆ ಸಮಾಜ ನೆಮ್ಮದಿಯಾಗಿರುತ್ತದೆ. ಮಕ್ಕಳು ಹೆಚ್ಚು ಹೆಚ್ಚು ಗಾಂಧಿ ಪುಸ್ತಕ ಓದಬೇಕು. ಆಗ ಮಾತ್ರ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಸರ್ವೋದಯ ಮಂಡಲ ರಾಜ್ಯ ಅಧ್ಯಕ್ಷ ಡಾ.ಎಚ್.ಎಸ್. ಸುರೇಶ್ ಮಾತನಾಡಿ, ಕಾಲೇಜುಗಳು ಶಿಕ್ಷಣ ಸಂಸ್ಥೆಗಳು ಉದ್ಯೋಗ ಕೊಡುವ ಶಿಕ್ಷಣ ನೀಡಬಹುದು. ಆದರೆ ಸಂಸ್ಕೃತಿ ಮತ್ತು ಸಂಸ್ಕಾರ ಮನೆಯವರಿಂದ ಮತ್ತು ಪೋಷಕರಿಂದ ಮಾತ್ರ ಕಲಿಸಲು ಸಾಧ್ಯ ಎಂದರು.ಉದ್ಯೋಗ ಎಷ್ಟು ಮುಖ್ಯವೋ ಸಂಸ್ಕೃತಿ ಸಂಸ್ಕಾರ ಅಷ್ಟೇ ಮುಖ್ಯ ಎಂದ ಅವರು ಅವೆರಡು ಸ್ವಾಮಿ ವಿವೇಕಾನಂದರಲ್ಲಿ ಮತ್ತು ಕುವೆಂಪು ಅವರಲ್ಲಿ ಇತ್ತು ಎಂದರು. ಅದಕ್ಕೆ ಅವರು ವಿಶ್ವ ಮಟ್ಟಕ್ಕೆ ಬೆಳೆದರು ನೀವು ಕೂಡ ಅವರಂತೆ ಬೆಳೆಯಿರಿ ಎಂದರು.
ರಾಜ್ಯ ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಹಿರಿಯ ಗಾಂಧಿ ವಾದಿ. ಎಸ್.ಎನ್. ಶಾಸ್ತ್ರೀ ಅವರನ್ನು ಗೌರವಿಸಲಾಯಿತು.ತುಮಕೂರು ಜಿಲ್ಲಾ ಸರ್ವೋದಯ ಮಂಡಲ ಕಾರ್ಯದರ್ಶಿ ಸ್ವಾಗತಿಸಿದರು. ಪ್ರಾಂಶುಪಾಲರಾದ ಅಕ್ಕಮ್ಮ ಪ್ರಾರ್ಥಿಸಿ, ತುರುವೇಕೆರೆ ಕೃಷ್ಣಮೂರ್ತಿ ನಿರೂಪಿಸಿ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ವಸಂತ್ ಕುಮಾರ್, ತಿಪಟೂರ್ ಅಧ್ಯಕ್ಷ ಶೋಭಾ ಜಯದೇವ, ಶಿರಾ ಅಧ್ಯಕ್ಷ ಸೈಯದ್ ಸೇರಿದಂತೆ ಅನೇಕ ಗಾಂಧಿ ಚಿಂತಕರು ಭಾಗವಹಿಸಿದ್ದರು.