ಉತ್ತಮ ಸಮಾಜಕ್ಕಾಗಿ ಮತದಾನ ಮಾಡಿ: ಜಿಪಂ ಸಿಇಒ

KannadaprabhaNewsNetwork | Published : Apr 1, 2024 12:46 AM

ಸಾರಾಂಶ

ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ಸಾಕಷ್ಟು ವಿದ್ಯಾವಂತರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ.

ಹೊಸಪೇಟೆ: ಉತ್ತಮ ಸಮಾಜಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಜಿಪಂ ಸಿಇಒ ಸದಾಶಿವ ಬಿ.ಪ್ರಭು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಸ್ವೀಪ್ ಸಮಿತಿಯಿಂದ ನಗರದ ಖಾಸಗಿ ಕಾಲೇಜಿನಲ್ಲಿ ಶನಿವಾರ ಮತದಾರರ ಸಹಿ ಸಂಗ್ರಹಣಾ ಅಭಿಯಾನ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಪಂಚದಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಮತದಾನ ಮಾಡುವಲ್ಲಿ ಜನರು ನಿರ್ಲಕ್ಷ್ಯ, ಬೇಜವಾಬ್ದಾರಿ ತೋರುತ್ತಿರುವುದು ಬೇಸರದ ಸಂಗತಿ. ಸಾಕಷ್ಟು ವಿದ್ಯಾವಂತರೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುತ್ತಿಲ್ಲ. ೧೮ ವರ್ಷ ಮೇಲ್ಪಟ್ಟ ಯುವ ಜನತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಯುವ ಪೀಳಿಗೆ ಮತದಾನದಿಂದ ದೂರ ಉಳಿಯ ಬಾರದು. ಸಮಾಜಕ್ಕೆ ಉತ್ತಮ ಸಂದೇಶ ಹೋಗಬೇಕಾದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದಿಂದ ದೂರ ಉಳಿಯುವವರನ್ನು ಮತದಾನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತಚಲಾಯಿಸಿ ಎಂದರು.ಜಿಲ್ಲೆಯ ೧೩೭ ಗ್ರಾಪಂ ವ್ಯಾಪ್ತಿಯಲ್ಲಿ ಸ್ವೀಪ್ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಕೆಲ ಗ್ರಾಪಂಗಳ ಮುಂಭಾಗ ಸ್ವೀಪ್ ಬ್ಯಾನರ್ ಅಳವಡಿಸಿಲ್ಲ. ಅಂತಹ ಗ್ರಾಪಂ ಪಿಡಿಒಗಳಿಗೆ ಕಟ್ಟನಿಟ್ಟಿನ ಆದೇಶ ನೀಡಲಾಗಿದೆ. ಯುವ ಮತದಾರರ ನೋಂದಣಿ, ಮತದಾನ ಜಾಗೃತಿ ನಿರಂತರ ಆಗಬೇಕಿದೆ. ೧೮ ವರ್ಷದ ಯುವ ಜನತೆ ಮೊಬೈಲ್‌ನಲ್ಲೇ ವೋಟರ್ ಐಡಿ ಪಡೆಯಲು ಅವಕಾಶ ಇದೆ. ಪ್ಲೇಸ್ಟೋರ್‌ನಲ್ಲಿ ವೋಟರ್ ಹೆಲ್ಪ್ಲೈನ್ ಎಂಬ ಆ್ಯಪ್‌ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಪೂರಕ ಮಾಹಿತಿ ನೀಡಿದರೆ, ಕೆಲವೇ ದಿನಗಳಲ್ಲಿ ವೋಟರ್‌ಐಡಿ ಸಿಗಲಿದೆ ಎಂದರು.ನಗರದ ಶಂಕರ್‌ಆನಂದ್ ಸಿಂಗ್ ಪದವಿ ಕಾಲೇಜು ಸೇರಿ ಇತರೆ ಕಾಲೇಜುಗಳಲ್ಲಿ ಮತದಾನ ಜಾಗೃತಿ ಹಾಗೂ ಪ್ರತಿಜ್ಞಾವಿಧಿ ಬೋಧಿಸಿದರು.ಕಾಲೇಜಿನ ಕಾರ್ಯದರ್ಶಿ ಕಾಕುಬಾಳು ಶ್ರೀನಿವಾಸ, ಪ್ರಾಂಶುಪಾಲ ಡಾ.ಅಯ್ಯುಬ್‌ಖಾನ್ ಇತರರಿದ್ದರು.

Share this article