ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಹಾಕಿ: ಡಾ.ಪ್ರಭಾ

KannadaprabhaNewsNetwork | Published : Apr 21, 2024 2:25 AM

ಸಾರಾಂಶ

ಪ್ರಜ್ಞಾವಂತ ಹಾಗೂ ಪ್ರಬುದ್ಧ ಮತದಾರರಿದ್ದೀರಿ, ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರಿಗೆ ಬೆಂಬಲಿಸಿ.

ಹರಪನಹಳ್ಳಿ: ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮತದಾರರನ್ನು ಕೋರಿದರು.

ಅವರು ತಾಲೂಕಿನ ಹಿರೇಮೇಗಳಗೇರಿ, ಲಕ್ಷ್ಮಿಪುರ, ರಾಗಿಮಸಲವಾಡ, ಶಿಂಗ್ರಿಹಳ್ಳಿ, ಕಂಚಿಕೇರಿ ಗ್ರಾಮಗಳಲ್ಲಿ ಶನಿವಾರ ಸಂಚರಿಸಿ ಮತ ಯಾಚನೆ ಮಾಡಿದರು.

ಪ್ರಜ್ಞಾವಂತ ಹಾಗೂ ಪ್ರಬುದ್ಧ ಮತದಾರರಿದ್ದೀರಿ, ತಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವವರಿಗೆ ಬೆಂಬಲಿಸಿ ಎಂದ ಅವರು, ಐದು ಬಾರಿ ಇಲ್ಲಿ ಸಂಸದರಾಗಿದ್ದವರು ಅಭಿವೃದ್ಧಿ ಏನು ಮಾಡಿದ್ದೇವೆ ಎಂದು ಹೇಳುವುದು ಬಿಟ್ಟು ಮೋದಿ ಹೆಸರೇಳಿ ಮತ ಕೇಳುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಅವುಗಳಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಅಖಿಲ ಭಾರತ ಕಾಂಗ್ರೆಸ್‌ ಕಮಿಟಿ 25 ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದ್ದು, ನೀವು ಮತ ಹಾಕಿ ಗೆಲ್ಲಿಸಿದರೆ ರಾಜ್ಯ ಸರ್ಕಾರ ಜಾರಿ ಮಾಡಿದಂತೆ ಅವುಗಳನ್ನು ಜಾರಿ ಮಾಡುತ್ತದೆ ಎಂದು ಅವರು ತಿಳಿಸಿದರು.

ತಮ್ಮ ಕಷ್ಟ ಸುಖದಲ್ಲಿ ಸದಾ ಇರುತ್ತೇನೆ. ನನಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ಎಂದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ಮಾತಿಗೆ ತಪ್ಪಿದ ಸರ್ಕಾರಕ್ಕೆ ಮತ ಹಾಕದೇ ನುಡಿದಂತೆ ನಡೆದ ಕಾಂಗ್ರೆಸ್‌ ಗೆ ಬೆಂಬಲಿಸಿ ಎಂದು ಕೋರಿದರು.

ಸಂವಿಧಾನ ವಿರೋಧಿಗಳಿಗೆ ಮತ ಹಾಕದೇ ಬಡವರ ಪರ ಇರುವ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ. ಕಳೆದ 10 ತಿಂಗಳಲ್ಲಿ ಹರಪನಹಳ್ಳಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ. ಹಂತ ಹಂತವಾಗಿ ಅಭಿವೃದ್ಧಿ ಕೈಗೊಳ್ಳುವೆ. ತಾಳ್ಮೆಯಿಂದ ಇರಿ ಎಂದು ಜನರಿಗೆ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಅರಸಿಕೇರಿ ಎನ್‌.ಕೊಟ್ರೇಶ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಕಳೆದ 10 ವರ್ಷದಲ್ಲಿ ದೇಶ ಅಧೋಗತಿಗೆ ಹೋಗಿದೆ. ಗೊಬ್ಬರ ದರ ಜಾಸ್ತಿ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು.

ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಚಿಗಟೇರಿ ಬ್ಲಾಕ್‌ ಅಧ್ಯಕ್ಷ ಕೆ.ಕುಬೇರಪ್ಪ, ಅರಸಿಕೇರಿ ಬ್ಲಾಕ್‌ ಅಧ್ಯಕ್ಷ ಎಸ್‌.ಮಂಜುನಾಥ, ಮುಖಂಡರಾದ ಎಂ.ರಾಜಶೇಖರ, ಪಿ.ಮಹಾಬಲೇಶ್ವರಗೌಡ, ಆಲದಹಳ್ಳಿ ಷಣ್ಮುಖಪ್ಪ, ಎಚ್‌.ಎಂ. ಮಲ್ಲಿಕಾರ್ಜುನ, ಕೋಡಿಹಳ್ಳಿ ಭೀಮಪ್ಪ, ಪಿ.ಎಲ್‌. ಪೋಮ್ಯನಾಯ್ಕ, ಯಶವಂತಗೌಡ, ಪಿ.ಟಿ. ಭರತ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮಿ, ಕವಿತಾ ಸುರೇಶ, ನೇತ್ರಾವತಿ, ಸುಮಾ, ಉಮಾ, ಉದಯಶಂಕರ, ಮತ್ತೂರು ಬಸವರಾಜ, ಹಲಗೇರಿ ಮಂಜಪ್ಪ, ರೆಡ್ಡಿ ಶಾಂತಕುಮಾರ, ಟಿ.ಎಂ. ಶಿವಶಂಕರ, ದುಗ್ಗಾವತ್ತಿ ಮಂಜು, ಹಿರೇಮೇಗಳಗೇರಿ ಪರಶುರಾಮ, ಇರ್ಷಾದ್‌ ಇತರರು ಪಾಲ್ಗೊಂಡಿದ್ದರು.

Share this article