ದಾಬಸ್ಪೇಟೆ: ಸ್ವಾಭಿಮಾನ ಹಾಗೂ ದೇಶದ ಸುರಕ್ಷತೆ ಚುನಾವಣೆ ಇದಾಗಿದ್ದು ನಿಮ್ಮ ಆತ್ಮಸಾಕ್ಷಿಗೆ ಮತ ಚಲಾಯಿಸಿ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ಡಿಎ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಹೇಳಿದರು.ಸೋಂಪುರ ಹೋಬಳಿಯ ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜಕೀಯ ನನಗೆ ಹೊಸದಿರಬಹುದು. ಆದರೆ ಜನ ಸಾಮಾನ್ಯರ ಒಡನಾಟ ನನಗೆ ಬಹಳ ಹತ್ತಿರವಾದುದು. ನಾನು ಲಕ್ಷಾಂತರ ಜನರ ಹೃದಯ ಚಿಕಿತ್ಸೆ ಮಾಡಿ ಅವರ ಜೀವ ಹಾಗೂ ಜೀವನ ಉಳಿಸಿರುವ ತೃಪ್ತಿಯಿದೆ. ನನ್ನ ಕೈಲಾದಷ್ಟು ಬಡವರು, ಕೂಲಿ ಕಾರ್ಮಿಕರು, ರೈತರ ಜೀವ ಕಾಪಾಡಿರುವ ಆತ್ಮತೃಪ್ತಿಯಿದೆ. ರಾಜಕೀಯದಿಂದ ನಾನು ಏನನ್ನೂ ಸಂಪಾದಿಸಲು ಬಂದಿಲ್ಲ. ದೇಶದ ಹಾಗೂ ಕನ್ನಡ ನಾಡಿನ ಜನರ ಆರೋಗ್ಯ ಸುಧಾರಣೆಗೆ ಏನಾದರೂ ಒಂದು ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ನನ್ನ ಬಯಕೆ. ಕ್ಷೇತ್ರದ ಮತದಾರರು ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕೊಡುವ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಎ.ಮಂಜುನಾಥ್, ಶಿವಗಂಗೆ ಗ್ರಾಪಂ ಅಧ್ಯಕ್ಷ ಪ್ರಭುದೇವ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ಹೊನ್ನಗಂಗಶೆಟ್ಟಿ, ಮರಿಯಪ್ಪಇತರರಿದ್ದರು. ಪೋಟೋ 5 : ಸೋಂಪುರ ಹೋಬಳಿಯ ಶಿವಗಂಗೆಯ ಗಣಪತಿ ದೇವಾಲಯದಲ್ಲಿ ಎನ್ಡಿಎ ಅಭ್ಯರ್ಥಿ ಡಾ.ಮಂಜುನಾಥ್, ಮಾಜಿ ಸಚಿವ ಅಶ್ವಥ್ ನಾರಾಯಣ್, ಮಾಜಿ ಶಾಸಕ ಎ.ಮಂಜುನಾಥ್ ಪೂಜೆ ಸಲ್ಲಿಸಿದರು.