ಮುಂಡರಗಿ: ರಾಜ್ಯದ ಗುಂಡ್ಲುಪೇಟೆಯಿಂದ ಬೀದರವರೆಗೆ ಎಲ್ಲ ಜಿಲ್ಲೆಗಳ ವೈದ್ಯ ಮತದಾರರು ನನಗೆ ಮತ ನೀಡಿ ಬೆಂಬಲಿಸುವ ಮೂಲಕ ಗೆಲ್ಲಿಸಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುವೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ನೂತನ ಸೆನೆಟ್ ಸದಸ್ಯ ಡಾ. ವಿರೇಶ ಹಂಚಿನಾಳ ಹೇಳಿದರು.
ರಾಜ್ಯದ ಬೀದರ, ಚಾಮರಾಜನಗರ, ದಕ್ಷಿಣ ಕನ್ನಡ, ಮಂಗಳೂರು, ಸೂಳ್ಯ, ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ಹೆಚ್ಚಿನ ಮತ ನೀಡಿದ್ದಾರೆ. ಮೆಡಿಕಲ್, ಡೆಂಟಲ್, ಆಯುರ್ವೇದ, ಸಿದ್ದಿ, ಯುನಾನಿ, ಹೋಮಿಯೋಪತಿ, ಫಾರ್ಮಸಿ, ನರ್ಸಿಂಗ್ ಸುಮಾರು 3 ಸಾವಿರ ವಿವಿಧ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿ ಈ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಹೊಂದಿದೆ. ಇದು ಏಶಿಯಾ ಖಂಡದ ಅತ್ಯಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಇದರ ವ್ಯಾಪ್ತಿಗೆ ಬರುವ ಎಲ್ಲ ಕಾಲೇಜುಗಳಲ್ಲಿನ ಜನರ ಹಾಗೂ ಸಂಸ್ಥೆಯ ಮತ್ತು ಕಾಲೇಜುಗಳ ಸಮಸ್ಯೆಗಳಿಗೆ ಸದಾ ಸ್ಪಂದಿಸುವುದಾಗಿ ಭರವಸೆ ನೀಡಿ, ಗದಗ ಭಾಗದಲ್ಲಿ ಯುನಾನಿ, ಹೋಮಿಯೋಪತಿ ಸೇರಿದಂತೆ ಅವಶ್ಯವಿರುವ ಮೆಡಿಕಲ್ ಕಾಲೇಜು ಸಾಧ್ಯವಾದಷ್ಟು ಮಟ್ಟಿಗೆ ತರುವ ಹಾಗೂ ಅಲ್ಲಿನ ಶಿಕ್ಷಕರು ಸೇರಿದಂತೆ ಇತರೆ ಸಿಬ್ಬಂದಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ರಾಜ್ಯ ಐಎಂಎ ಮಾಜಿ ಅಧ್ಯಕ್ಷ ಡಾ. ಅನ್ನದಾನಿ ಮೇಟಿ ಮಾತನಾಡಿ, ವಿರೇಶ ಹಂಚಿನಾಳ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ಶಕ್ತಿ. ಎಲ್ಲರನ್ನೂ ಮಾನವೀಯತೆಯ ದೃಷ್ಠಿಯಿಂದ ನೋಡುವಂತವರು. ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯ ಗುಣಮಟ್ಟದ ಶಿಕ್ಷಣ ಒದಗಿಸುವ ಸಂಸ್ಥೆಯಾಗಿದೆ. ಇದರ ಸೆನೆಟ್ ಸದಸ್ಯರಾಗುವುದು ಸರಳವಾದ ಕೆಲಸವಲ್ಲ. ಇಂದು ವೈದ್ಯಕೀಯ ರಂಗ ಖುಷಿಯುತ್ತಿದೆ. ಅಲ್ಲಿನ ಗುಣಮಟ್ಟ ಖುಷಿಯುತ್ತಿದ್ದು ಅದನ್ನು ಸುಧಾರಿಸುವ ಕಾರ್ಯವನ್ನು ಡಾ.ವಿರೇಶ ಮಾಡಬೇಕಿದೆ ಎಂದರು.ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಡಾ. ವಿರೇಶ ಹಂಚಿನಾಳ ಜಿಲ್ಲೆಯಾದ್ಯಂತ ಹೆಸರು ಮಾಡಿದ್ದಾರೆ. ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದಾರೆ ಎಂದರು.