ಕನ್ನಡಪ್ರಭ ವಾರ್ತೆ ಬೆಳಗಾವಿ
ಇತ್ತೀಚೆಗೆ ಯುವ ಸಮುದಾಯ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರಿಂದ ಯುವ ಮತದಾರರನ್ನು ಸೆಳೆಯಲು ಸಂತಿಬಸ್ತವಾಡ ಪುನೀತ ರಾಜಕುಮಾರ ಕ್ರೀಡಾಂಗಣದಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ ಅವರು ಬ್ಯಾಟಿಂಗ್, ಬೌಲಿಂಗ್ , ಫೀಲ್ಡಿಂಗ್ ಮಾಡಿ ತಾಲೂಕು ಮಟ್ಟದ ಕ್ರಿಕ್ರೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ತಾಪಂ ಇಒ, ರಾಮರೆಡ್ಡಿ ಪಾಟೀಲ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಿರಂತರವಾಗಿ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಹೆಚ್ಚಿನ ಮತದಾನ ಆಗಿತ್ತು. ಅದರಂತೆ ಈ ಬಾರಿಯೂ ಹೆಚ್ಚಿನ ಮತದಾನವಾಗಲು ಸಮಿತಿಯಿಂದ ಮನೆಗೆ ಭೇಟಿ, ವಾಕಥಾನ್, ಬೈಕ್ ರ್ಯಾಲಿ , ಎತ್ತಿನ ಬಂಡಿ ಅಭಿಯಾನ, ಮ್ಯಾರಥಾನ್, ಪಂಜಿನ ಮೆರವಣಿಗೆ, ವಿಶೇಷ ಚೇತನರ ಬೈಕ್ ರ್ಯಾಲಿ, ಆರೋಗ್ಯ ಶಿಬಿರ, ಮಹಿಳೆಯರಿಂದ ಮಾನವ ಸರಪಳಿ, ಕ್ಯಾಂಡಲ್ ಲೈಟ್ ಅಭಿಯಾನ ಮುಖಾಂತರ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ನಿರ್ದೇಶಕರು ಅವರು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡವಂತೆ ನೈತಿಕ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.