ಕನ್ನಡಪ್ರಭ ವಾರ್ತೆ ಬೆಳಗಾವಿ
ಇಲ್ಲಿ ಮತದಾನವು ಒಂದು ಗೌರವಾನ್ವಿತ, ಪವಿತ್ರ ಕಾರ್ಯವಾಗಿದೆ. ಯಾವ ವ್ಯಕ್ತಿ ನ್ಯಾಯ, ನೀತಿ, ಧರ್ಮ, ಸತ್ಯದಿಂದ ಸಮಾಜಕ್ಕಾಗಿ, ರಾಷ್ಟ್ರ ತನ್ನ ಇಡೀ ಬದುಕನ್ನು ಸಮರ್ಪಿಸುತ್ತಾನೋ ಅಂತಹ ಧೀಮಂತ ವ್ಯಕ್ತಿಯನ್ನು ನಮ್ಮ ಪವಿತ್ರ ಮತದಾನದಿಂದ ಆರಿಸಿ, ಸಮಾಜ ಸೇವೆಗೆ ಅನಿಗೊಳಿಸುವ ಕಾರ್ಯ ಎಲ್ಲರದೆಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.ಅವರು ಲಿಂಗರಾಜ ಕಾಲೇಜು ಹಾಗೂ ಆರ್ಎಲ್ ವಿಜ್ಞಾನ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ, ಪ್ರಧಾನಿ ನರೇಂದ್ರ ಮೋದಿಯವರ ನೇರಪ್ರಸಾರದ ಕಾರ್ಯಕ್ರಮಕ್ಕೂ ಮೊದಲು ಮಾತನಾಡಿದರು. ಪ್ರಪಂಚದ ಪ್ರಜಾಪ್ರಭುತ್ವದ ಅತಿ ದೊಡ್ಡ ರಾಷ್ಟ್ರಗಳಲ್ಲಿ ಭಾರತವು ಒಂದು. ಸಮಾಜವಾದಿ, ಸಮತಾವಾದಿ, ಪ್ರಜಾಪ್ರಭುತ್ವವು ನಮ್ಮ ಸಮಾಜದಲ್ಲಿ ಅಸ್ತಿತ್ವಕ್ಕೆ ಬರಬೇಕಾದರೆ ಎಲ್ಲಾ ಪ್ರಜೆಗಳೂ ಪವಿತ್ರ ಮನಸ್ಸಿನಿಂದ ಮತದಾನ ಮಾಡಿ ನಮ್ಮ ಒಳ್ಳೆಯ ನಾಯಕನನ್ನು ಆರಿಸಿ ತಂದು ಸಮಾಜ ಸೇವೆಗೆ ತರುವುದು ಒಂದು ಮಹತ್ವದ ಕಾರ್ಯವಾಗಿದೆ ಎಂದರು.
ಮತದಾನವು ಸುಲಭವಾಗಿ ದೊರೆತಿಲ್ಲ. ಭಾರತವು ಪರಕೀಯ ಬಂಧನದಿಂದ ಮುಕ್ತವಾಗಿ ತನ್ನದೇ ಸಂವಿಧಾನವನ್ನು ಸಿದ್ಧಪಡಿಸಿಕೊಂಡು ಮತದಾನದ ಮೂಲಕ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಪಡೆದಿದ್ದು ವಿಶ್ವದಲ್ಲಿಯೇ ಪ್ರಥಮವೆನ್ನಬೇಕು. ನಮ್ಮ ಹೊಸ ಸಂವಿಧಾನವು ಎಲ್ಲಾ ವಯಸ್ಕ ನಾಗರೀಕರಿಗೆ ಮತದಾನದ ಹಕ್ಕನ್ನು ನೀಡಿ ದೊಡ್ಡ ಕ್ರಾಂತಿಯನ್ನು ಮಾಡಿದೆ. ಭಾರತವು ಒಂದು ಜಾತ್ಯತೀತ, ಪ್ರಜಾಪ್ರಭುತ್ವ ದೊಡ್ಡ ರಾಷ್ಟ್ಟ. ವಿಶ್ವದ ಮುಂದುವರೆದ ರಾಷ್ರ್ರ ಬ್ರಿಟನಿನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಶತಶತಮಾನಗಳ ಹೋರಾಟದ ಫಲವಾಗಿ ತೀರ ಇತ್ತೀಚಿಗೆ ಮತದಾನದ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದರು.ಮತದಾನವು ಪ್ರಜಾಪ್ರಭುತ್ವದ ವಿಜಯ. ಅದು ನಮ್ಮ ಪವಿತ್ರ ಹಾಗೂ ಶ್ರೇಷ್ಠ ಕಾರ್ಯ.ಮತ ಚಲಾವಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಮತ ಚಲಾಯಿಸಿ ವ್ಯಕ್ತಿಗೆ ಪ್ರಶ್ನಿಸುವ ನೈತಿಕ ಹಕ್ಕು ದೊರೆಯುತ್ತದೆ. ಮತದಾನವು ಸುಭದ್ರ ರಾಷ್ಟçಕ್ಕೆ ಅಡಿಗಲ್ಲು ಹಾಕುತ್ತದೆ. ಸಂವಿಧಾನದನ್ವಯ ಮತದಾನ ಪ್ರಜೆಗಳ ಹಕ್ಕು. ಮತದಾರರ ಮತದಾನದಿಂದ ಮಾತ್ರ ಸರಕಾರ ರಚನೆ ಸಾಧ್ಯ. ಶಾಸನಸಭೆಯ ಕಟ್ಟಡ, ಮಂತ್ರಿಮಂಡಲದ ಗೋಪುರ ರೂಪಗೊಳ್ಳಬೇಕಾದರೆ ಮತದಾನವು ಅವಶ್ಯಕ. ಮತದಾನದಿಂದ ಮಾತ್ರ ರಾಜ್ಯ ಮತ್ತು ರಾಷ್ಟಗಳು.ಮತದಾನದ ಪ್ರಜೆಗಳ ಮಹಾನ್ ರಾಜಕೀಯ ಅಸ್ತç ಮಾತ್ರವಲ್ಲದೇ ಮತದಾನವು ಪ್ರಜೆಗಳ ಧ್ವನಿ.ಎಲ್ಲರೂ ಮತದಾನ ಮಾಡುವುದು ಇಂದು ಅತೀ ಅವಶ್ಯವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಸಂಚಾಲಕ ನ್ಯಾಯವಾದಿ ಎಂ.ಬಿ.ಝಿರಲಿ, ಮಾಜಿ ಶಾಸಕ ಅನೀಲ ಬೆನಕೆ, ಉಜ್ವಲಾ ಬಡವಾನಾಚಾ, ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಡಾ.ಜ್ಯೋತಿ ಕವಳೇಕರ, ಗಿರಿಜಾ ಹಿರೇಮಠ, ವಿಶ್ವನಾಥ ಕಾಮಗೋಳ ಉಪಸ್ಥಿತರಿದ್ದರು.