ಮೂಡಿಗೆರೆ: ಸಂವಿಧಾನದಲ್ಲಿ ಮತದಾನವೇ ಶ್ರೇಷ್ಠವಾಗಿದದ್ದು. ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ನೈಜ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಭಾರತದ ಪ್ರಜಾಪ್ರಭುತ್ವದ ಶಕ್ತಿ ಅಡಗಿರುವುದು ಮತದಾನದಿಂದ. ದೇಶದ ಭವಿಷ್ಯವನ್ನು ರೂಪಿಸುವುದು ಚುನಾವಣೆಗಳು. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಮತವನ್ನು ಸೇರ್ಪಡೆಗೊಳಿಸುವುದು ಹಾಗೂ ವಲಸೆ ಮತದಾರರನ್ನು ಹೊರಗಿಡುವುದು ಸೇರಿದಂತೆ ನ್ಯೆಜ ಮತದಾರರನ್ನು ಗುರುತಿಸಲು ಚುನಾವಣಾ ಆಯೋಗ ತೀವ್ರ ಮತ ಪರಿಷ್ಕರಣ ಪಟ್ಟಿ ತಯಾರಿಸಲು ಸಿದ್ಧತೆ ನಡೆಸುತ್ತಿದೆ. ಹಾಗಾಗಿ ಆಯೋಗದೊಂದಿಗೆ ಕೈಜೋಡಿಸಿ ನಮ್ಮ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳುವುದು ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದೆ ಎಂದರು. ಪ್ರತಿ ಬೂತ್ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಮತ ಪರಿಷ್ಕರ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಸೇರ್ಪಡೆಗೊಳ್ಳುವವರನ್ನು ಖುದ್ದಾಗಿ ಪರಿಶೀಲಿಸಬೇಕು. ಎರೆಡೆರಡು ಕಡೆ ಮತ ಇರುವ ಮತದಾರರನ್ನು ಗುರುತಿಸಿ ಒಂದು ಕಡೆಯಲ್ಲಿ ರದ್ದುಪಡಿಸಲು ಸಹಕರಿಸಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ, ಸ್ವಜನ ಪಕ್ಷಪಾತ, ಹಿಂದೂ ವಿರೋಧಿ ನೀತಿ ಹಾಗೂ ಕಾಂಗ್ರೆಸ್ ಸರಕಾರದ ದುರಾಡಳಿತದ ಬಗ್ಗೆ ಹೋರಾಟ ನಡೆಸಲು ಸಿದ್ಧರಾಗಬೇಕೆಂದು ಕರೆ ನೀಡಿದರು. ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ. ಟಿಎಪಿಸಿಎಂಎಸ್ ಸದಸ್ಯ ಎಂ.ಎಲ್.ಕಲ್ಲೇಶ್, ದೀಪಕ್ ದೊಡ್ಡಯ್ಯ, ಪುಣ್ಯಪಾಲ್, ಪಂಚಾಕ್ಷರಿ, ಸುನಿಲ್ ಮಣ್ಣಿಕೆರೆ, ದನಿಕ್ ಕೋಡದಿಣ್ಣೆ ಉಪಸ್ಥಿತರಿದ್ದರು.