ಬೀದರ್: ಮೇ 7ರಂದು ಮಂಗಳವಾರ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಮುಕ್ತವಾಗಿ ನಡೆಸುವ ಸಂಬಂಧ ಚುನಾವಣಾಧಿಕಾರಿಗಳು ಎಲ್ಲ ವ್ಯವಸ್ಥೆ ಮಾಡಿದ್ದು ಸೋಮವಾರ ಮಧ್ಯಾಹ್ನದಿಂದಲೇ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತದಾನ ಕೇಂದ್ರಗಳಿಗೆ ತೆರಳಿದರು.
ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿ ತಮಗೆ ನೀಡಿದ ಮತದಾನ ಕೇಂದ್ರಗಳನ್ನು ಕಾಲೇಜಿನಲ್ಲಿ ಪ್ರಕಟಿಸಲಾದ ಪಟ್ಟಿಯಲ್ಲಿ ಹುಡುಕುತ್ತಿರುವುದು ಸಾಮಾನ್ಯವಾಗಿತ್ತು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸರ್ಕಾರಿ ಬಸ್ಗಳು ಹಾಗೂ ಖಾಸಗಿ ವಾಹನಗಳು ಸಾಲಾಗಿ ನಿಂತಿರುವುದರಿಂದ ಸಂಪೂರ್ಣ ಕಾಲೇಜು ಆವರಣ ವಾಹನಗಳು ಹಾಗೂ ಚುನಾವಣಾ ಸಿಬ್ಬಂದಿಯಿಂದ ತುಂಬಿತ್ತು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕಾಲೇಜಿನ ಆವರಣದಲ್ಲಿ ಹಾಜರಿದ್ದು, ಎಲ್ಲ ಸುರಕ್ಷತಾ ಕ್ರಮಗಳ ವ್ಯವಸ್ಥೆಗಳನ್ನು ನೋಡಿಕೊಂಡಿದ್ದರು. ನಂತರ ಎಲ್ಲ ಸಿಬ್ಬಂದಿ ಮತಯಂತ್ರಗಳೊಂದಿಗೆ ತಮಗೆ ನೀಡಲಾದ ಮತದಾನ ಕೇಂದ್ರಕ್ಕೆ ತೆರಳಲು ಬಸ್ ಹತ್ತಿದ್ದರು.ಚುನಾವಣೆಗಾಗಿ ನೇಮಕಗೊಂಡ ಸಿಬ್ಬಂದಿ ಮತಯಂತ್ರ ಅಲ್ಲದೆ ಮತ್ತಿತರ ಸಂಬಂಧಿತ ಸಾಮಗ್ರಿಗಳನ್ನು ತೆಗೆದುಕೊಂಡು ಅವರವರ ಮತಗಟ್ಟೆಗಳಿಗೆ ಸಂಜೆಯವರೆಗೆ ಸುರಕ್ಷಿತವಾಗಿ ತಲುಪಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಗೋವಿಂದರೆಡ್ಡಿ ತಿಳಿಸಿದ್ದಾರೆ.