ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಕಾರ್ಯಾಗಾರ ಉದ್ಘಾಟಿಸಿದ ವೀವಿ ಸಂಘದ ಕಾರ್ಯದರ್ಶಿ
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ ಜಿಲ್ಲೆಯ ಶಿಕ್ಷಣದ ಹಸಿವನ್ನು ಸಮರ್ಥವಾಗಿ ನೀಗಿಸಿದೆ. ಇದರ ಜತೆಗೆ ಸಂಸ್ಕಾರ ಮತ್ತು ಮೌಲ್ಯಯುತ ಶಿಕ್ಷಣ ಮತ್ತು ಬದುಕನ್ನು ರೂಪಿಸಿಕೊಟ್ಟಿದೆ ಎಂದು ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್ ಹೇಳಿದರು.
ಪಟ್ಟಣದಲ್ಲಿನ ಸಂಸ್ಥೆಯ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ ನ್ಯಾಕ್ ಕ್ರೈಟೇರಿಯ ಮತ್ತು ಕೀ ಫ್ಯಾರಾ ಮೀಟರ್ ಫಾರ್ ಕ್ವಾಲಿಟ್ ಅಶ್ಯುರೆನ್ಸ್ ವಿಷಯ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ. ಮೋಹನ್ ರೆಡ್ಡಿ ಮಾತನಾಡಿ, ಕಾಲೇಜುಗಳಲ್ಲಿನ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಉನ್ನತ ಸ್ಥಾನಕ್ಕೆ ಶಿಕ್ಷಣ ಸಂಸ್ಥೆ ಹೋಗಲು ಸಾಧ್ಯ. ಈ ನಿಟ್ಟಿನಲ್ಲಿ ವೀವಿ ಸಂಘ ದಾಪುಗಾಲು ಇಟ್ಟಿದೆ ಎಂದರು.ಸಂಪನ್ಮೂಲ ವ್ಯಕ್ತಿ ಡಾ. ಬಿ.ಎಸ್. ಶ್ರೀಕಂಠ ಮಾತನಾಡಿ, ಶೈಕ್ಷಣಿಕ ಹಂತ ಜೀವನದ ದೊಡ್ಡ ಒಂದು ಭಾಗವಾಗಿದೆ. ಈ ಕ್ಷೇತ್ರದಲ್ಲಿ ಸರಿಯಾಗಿ ನಿರ್ವಹಿಸಿದರೆ ಭವಿಷ್ಯದಲ್ಲಿ ಉತ್ತಮ ಗೌರವ ಪ್ರತಿಷ್ಠೆ ಸಿಗುತ್ತವೆ ಎಂದರು.
ಕಾರ್ಯಾಗಾರದಲ್ಲಿ 6 ಪದವಿ ಕಾಲೇಜುಗಳು ಮತ್ತು 2 ಎಂಜಿನಿಯರಿಂಗ್, ಔಷಧಿ ಕಾನೂನು ಕಾಲೇಜುಗಳ ಪ್ರಾಚಾರ್ಯರು, ಐಕ್ಯೂಎಸ್ ಸಂಚಾಲಕರು ಸೇರಿ 50 ಜನರು ಭಾಗವಹಿಸಿದರು.