ಕೆಎಲ್ಕೆ ಮೈದಾನದಲ್ಲಿ ‘ನಡಿಗೆ ಪಥ’ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಬೀರೂರುಕೆಎಲ್ಕೆ.ಕಾಲೇಜು ಮೈದಾನದಲ್ಲಿ ವಾಕಿಂಗ್ ಟ್ರಾಕ್ ಮಾಡಬೇಕೆಂದು ಒತ್ತಾಯವಿದೆ. ಮಳೆ ಬಂದರೆ ಕೆಸರಾಗುವ ಮೈದಾನದಲ್ಲಿ ಕ್ರೀಡೆಗಳನ್ನು ಆಡಲು ಸಾಧ್ಯವಾಗುವುದಿಲ್ಲ. ವಾಕಿಂಗ್ ಟ್ರ್ಯಾಕ್ನಿಂದ ಯುವಜನತೆ ಹಾಗೂ ಇತರರ ಕ್ರೀಡೆ, ನಡಿಗೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ನಗರದಲ್ಲಿ ಶನಿವಾರ ಕೆ.ಎಲ್.ಕೆ ಮೈದಾನದಲ್ಲಿ ನಗರೋತ್ಥಾನ 4ರ ಯೋಜನೆಯಡಿ ವಾಕಿಂಗ್ ಟ್ರಾಕ್ ಮಾಡಲು ಇಂಟರ್ ಲಾಕ್ ಪಾತ್ ವೇ ಮತ್ತು ಪುರಸಭೆ ಹಿಂಭಾಗದಲ್ಲಿ ಪೌರಕಾರ್ಮಿರಿಗೆ ವಿಶ್ರಾಂತ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಮಳೆಗಾಲದಲ್ಲಿ ಮೈದಾನ ಕಪ್ಪುಮಣ್ಣಿರುವ ಕಾರಣ ಕೆಸರಿನಿಂದ ಕಾಲಿಡಲು ಸಹ ಆಗುವುದಿಲ್ಲ. ಇಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ಈ ಸಮಸ್ಯೆ ತಪ್ಪುತ್ತದೆ ಎನ್ನುವ ನಿಟ್ಟಿನಲ್ಲಿ 39 ಲಕ್ಷ ರು. ವೆಚ್ಚದಲ್ಲಿ 400 ಮೀ. ಇಂಟರ್ ಲಾಕ್ಪಾತ್ ವೇ ಶೀಘ್ರವೇ ನಿರ್ಮಾಣವಾಗುತ್ತದೆ. ಇದರಿಂದ ಯುವಜನತೆಯ ಕ್ರೀಡೆಗೂ ಉತ್ತೇಜನ ಸಿಗುತ್ತದೆ. ಮುಂದಿನ ದಿನಗಳಲ್ಲಿ ಈ ಮೈದಾನವನ್ನು ತಾಲೂಕು ಮಟ್ಟದ ಕ್ರೀಡಾಂಗಣ ಮಾಡಿಕೊಡಲು ಶ್ರಮಿಸಲಾಗುವುದು ಎಂದರು.
ಈ ಮೈದಾನಕ್ಕೆ ತನ್ನದೇ ಆದ ಇತಿಹಾವಿದ್ದು, ಇಲ್ಲಿ ಅನೇಕ ರಾಜಕಾರಣ ದಿಗ್ಗಜರು ಭೇಟಿ ನೀಡಿ ಹೋಗಿದ್ದಾರೆ. ಜೊತೆಗೆ ಬೀರೂರು ಪಟ್ಟಣದ ಅನೇಕ ವೃದ್ದರು, ಶಾಲಾ ವಿದ್ಯಾರ್ಥಿಗಳು ಇಲ್ಲಿ ವಿಶ್ರಾಂತಿ ತೆಗೆದುಕೊಂಡು ನಡೆದಾಡುತ್ತಾರೆ. ವಿದ್ಯಾರ್ಥಿಗಳು, ಯುವಕರು ಕ್ರೀಡೆಗಳನ್ನಾಡಲು ಈ ಮೈದಾನವನ್ನು ಬಳಸುತ್ತಿದ್ದಾರೆ ಎಂದರು.ಪುರಸಭೆ ಪೌರ ಕಾರ್ಮಿಕರು ತ್ಯಾಗಜೀವಿಗಳು, ಕಾಯಕ ಯೋಗಿಗಳಿಗೆ ಕೆಲಸ ಮುಗಿಸಿ ವಿರಾಮ ವಿದ್ದ ಸಮಯದಲ್ಲಿ ವಿಶ್ರಮಿಸಲು 20 ಲಕ್ಷ ರು. ಅನುದಾನದಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಲಿದ್ದು ಸ್ವಚ್ಛತ ಪೌರ ನೌಕರರಿಗೆ ಇದು ಸಹಾಯಕವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ವನಿತಮಧು ಬಾವಿಮನೆ ಮಾತನಾಡಿ, ಪಟ್ಟಣದ ಈ ಮೈದಾನಕ್ಕೆ ವಾಕಿಂಗ್ ಟ್ರಾಕ್ ತುಂಬಾ ಅವಶ್ಯಕವಾಗಿದ್ದು, ಶಾಸಕರು ಮಾಡುತ್ತಿರುವುದು ಶ್ಲಾಘನೀಯ ಎಂದರು.ಪಟ್ಟಣದಲ್ಲಿ ಬೇಸಿಗೆ ಇರುವುದರಿಂದ ಭದ್ರಾ ನೀರು ಪೂರೈಕೆ ವ್ಯತ್ಯಾಸವಾದಲ್ಲಿ ಸಾರ್ವಜನಿಕರಿಗೆ ನೀರು ನೀಡಲು ಸಾಧ್ಯವಾಗುತ್ತಿಲ್ಲ. ಶಾಸಕರಾದ ತಾವು ಪ್ರತಿ ವಾರ್ಡಗಳಿಗೆ ಬೋರ್ ಕೊರೆಸಿದರೆ ಅನುಕೂಲವಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಸಿದ ಶಾಸಕರು, ಈ ಹಿಂದೆ ಬೀರೂರು ಪಟ್ಟಣದ ಪಂಪೌ ಹೌಸ್ ಸುತ್ತ 5 ಬೋರ್ ಕೊರೆಸಲಾಗಿದ್ದು, ಇನ್ನು ನೀರಿನ ಅಭಾವವಿದ್ದರೆ ಮುಂದಿನ ದಿನಗಳಲ್ಲಿ ಕೊಳವೆ ಬಾವಿ ಕೊರೆಸಲಾಗುವುದು. ಪಟ್ಟಣದಲ್ಲಿ 23 ವಾರ್ಡ್ಗಳಲ್ಲಿಯು ಸಹ ರಸ್ತೆ ಸಮಸ್ಯೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಆದ್ಯತೆ ಮೇರೆಗೆ ರಸ್ತೆ ನಿರ್ಮಾಣ ಕಾಮಗಾರಿ ಮಾಡಿಸಲಾಗುವುದು ಎಂದರು.ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಬಿ.ಕೆ.ಶಶಿಧರ್, ರಾಜು, ರವಿಕುಮಾರ್, ಬಿ.ಆರ್.ಮೋಹನ್ ಕುಮಾರ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಆಸಂದಿ ಕಲ್ಲೇಶ್, ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಗುತ್ತಿಗೆದಾರ ಗಿರೀಶ್, ಆಶ್ರಯ ಸಮಿತಿ ಸದಸ್ಯ ಮುಬಾರಕ್, ವಿನಾಯಕ್ ಮತ್ತಿತರರು ಇದ್ದರು.