ಶ್ರೀರಂಗಪಟ್ಟಣದಲ್ಲಿ 70ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್‌ ಬೋರ್ಡ್ ಆಸ್ತಿ ನಮೂದು

KannadaprabhaNewsNetwork |  
Published : Jan 05, 2025, 01:32 AM IST
4ಕೆಎಂಎನ್ ಡಿ24,25,26,27 | Kannada Prabha

ಸಾರಾಂಶ

ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಮ್ಯೂಸಿಯಂ, ಮಾನಿಮೆಂಟ್, ಮದ್ದಿನ ಮನೆ ಸೇರಿದಂತೆ ಶ್ರೀರಂಗಪಟ್ಟಣ ಹಾಗೂ ತಾಲೂಕಿನಾದ್ಯಂತ 70ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಎಲ್.ವಿ.ನವೀನ್‌ಕುಮಾರ್

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಮ್ಯೂಸಿಯಂ, ಮಾನಿಮೆಂಟ್, ಮದ್ದಿನ ಮನೆ ಸೇರಿದಂತೆ ಶ್ರೀರಂಗಪಟ್ಟಣ ಹಾಗೂ ತಾಲೂಕಿನಾದ್ಯಂತ 70ಕ್ಕೂ ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಕಾರಿ ಆಸ್ತಿಗಳಲ್ಲದೆ ಪಟ್ಟಣ ಹಾಗೂ ತಾಲೂಕಿನ ಹಲವು ರೈತರ ಜಮೀನುಗಳ ಆರ್‌ಟಿಸಿಯಲ್ಲಿನ ಕಾಲಂ ನಂ.11ರಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದು ಸಾರ್ವಜನಿಕರು ಹಾಗೂ ರೈತರಲ್ಲಿ ಆತಂಕ ಸೃಷ್ಟಿಸಿದೆ.

ಇತ್ತೀಚೆಗಷ್ಟೇ ತಾಲೂಕಿನ ಮಹದೇವಪುರ ಗ್ರಾಮದ ಚಿಕ್ಕಮ್ಮ ಚಿಕ್ಕದೇವಿ ದೇವಾಲಯ ಹಾಗೂ ಚಂದಗಾಲು ಗ್ರಾಮದ ಸರ್ಕಾರಿ ಶಾಲೆ ಕೂಡ ವಕ್ಫ್ ಮಂಡಳಿ ಆಸ್ತಿ ಎಂಬುದು ಬೆಳಕಿಗೆ ಬಂದಿತ್ತು. ಇದೀಗ ತಾಲೂಕಿನಾದ್ಯಂತ ಹಲವು ಆರ್‌ಟಿಸಿಗಳಲ್ಲಿ ವಕ್ಫ್ ಮಂಡಳಿ ಆಸ್ತಿ ಎಂದು ನಮೂದಾಗಿರುವುದು ಅಚ್ಚರಿಯ ಜೊತೆಗೆ ಮುಂದೇನು ಎಂಬ ಆತಂಕವನ್ನು ಸೃಷ್ಟಿ ಮಾಡಿದೆ.

ಪ್ರಮುಖವಾಗಿ ಪಟ್ಟಣದ ಸರ್ವೇ ನಂ.17, 28, 63, 68 ಹಾಗೂ 73 ಆರ್‌ಟಿಸಿಗಳಲ್ಲಿ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಕರ್ನಾಟಕ ಸರ್ಕಾರ ಎಂಬುದಾಗಿದ್ದ ಆಸ್ತಿಗಳು ಇದೀಗ ಆರ್‌ಟಿಸಿಯಲ್ಲಿನ ನಮೂನೆ 11ರಲ್ಲಿ 2014-15ನೇ ಸಾಲಿಗೆ ಸೇರಿದಂತೆ ವಕ್ಫ್‌ ಮಂಡಳಿ ಆಸ್ತಿ ಎಂದು ನಮೂದು ಮಾಡಿಕೊಳ್ಳಲಾಗಿದೆ. ಜೊತೆಗೆ ಸರ್ವೇ ನಂ.758ರ 20 ಗುಂಟೆ ಜಮೀನು ಸರ್ಕಾರಿ ಎಂಬ ಆಸ್ತಿಯು ಸರ್ಕಾರಿ ಮಕಾನ್ ಎಂಬುದಾಗಿ ನಮೂದಾಗಿದೆ.

ಸರ್ವೇ ನಂ. 343/1, 343/2, 343/3, 343/4 ಹಾಗೂ 143/5ರ ಆಸ್ತಿಯು ರಘು ಚೈತನ್ಯ ವೈ.ನಾಯಕ್ ಬಿನ್ ಯಶೋಧರ ಜಿ.ನಾಯಕ್ ಎಂಬುವವರಿಗೆ ಸೇರಿದ್ದ 4 ಎಕರೆಗೂ ಹೆಚ್ಚು ಆಸ್ತಿ ಕೂಡ ಕರ್ನಾಟಕ ರಾಜ್ಯ ವಕ್ಫ್‌ ಆಸ್ತಿ ಎಂದು ನಮೂದಾಗಿದೆ.

ಇನ್ನುಳಿದಂತೆ ಕಸಬಾ ಹೋಬಳಿಯ ಶ್ರೀರಂಗಪಟ್ಟಣದ ಸರ್ವೇ ನಂ. 193/1, 193/2ಎ, 193/2ಬಿ, 194, 924, 590, ತಾಲೂಕಿನ ಅರಕೆರೆ ಹೋಬಳಿಯ ದೊಡ್ಡಹಾರೋಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ. 91/1, 74 ಮತ್ತು ಕೆ.ಶೆಟ್ಟಹಳ್ಳಿ-1 ಹೋಬಳಿಯ ಕಿರಂಗೂರು ಗ್ರಾಮದ 526/2ಪೈಕಿ-ಪಿ1, 526/2 ಪೈಕಿ-ಪಿ2, 526/ ಪೈಕಿ-ಪಿ3, 600, 601, 657, 662/ಪೈ-ಪಿ1, 662/ಪೈಕಿ -ಪಿ2, 664, 1068/ಪೈಕಿ -ಪಿ1, 1068/ಪೈಕಿ-ಪಿ2, 670, 1066, 663, 527/1, 527/2, 527/3, 527/4, 527/5 ಸೇರಿದಂತೆ ತಾಲೂಕಿನಾದ್ಯಂತ 70ಕ್ಕೂ ಹೆಚ್ಚು ಆರ್‌ಟಿಸಿ ದಾಖಲಾತಿಗಳು ಮೇಲ್ನೋಟಕ್ಕೆ ಲಭ್ಯವಾಗಿದ್ದು, ನೂರಾರು ಎಕರೆ ಪ್ರದೇಶ ವಕ್ಫ್ ಬೋರ್ಡ್‌ಗೆ ನಮೂದಾಗಿರುವುದು ಕಂಡು ಬಂದಿದೆ.

ಮತ್ತಷ್ಟು ಆಳವಾಗಿ ಒಳವೊಕ್ಕಿ ಪರಿಶೀಲಿಸಿದ್ದಲ್ಲಿ ವಕ್ಫ್‌ ಬೋರ್ಡ್ ಗುಮ್ಮ ಎಷ್ಟರ ಮಟ್ಟಿಗೆ ಆವರಿಸಿಕೊಂಡಿದೆ ಎಂಬುದು ಬೆಳಕಿಗೆ ಬರಬೇಕಾಗಿದೆ. ಜೊತೆಗೆ ಈ ಎಲ್ಲಾ ಆಸ್ತಿಗಳು ವಕ್ಫ್‌ ಬೋರ್ಡ್‌ಗೆ ಸೇರಿರುವ ಬಗ್ಗೆ ಬಹುತೇಕ ರೈತರಿಗೆ ಅರಿವಿಲ್ಲದಿರುವುದು ವಿಪರ್‍ಯಾಸದ ಸಂಗತಿ.

ತಾಲೂಕಿನ ಪ್ರತಿಯೊಬ್ಬರು ಸಹ ತಮ್ಮ ಆರ್‌ಟಿಸಿಗಳನ್ನು ಪರಿಶೀಲಿಸಿಕೊಳ್ಳುವ ಜೊತೆಗೆ ವಕ್ಫ್ ಬೋರ್ಡ್ ಗುಮ್ಮನ ಜೊತೆಗೆ ಹೋರಾಡುವ ಅನಿವಾರ್‍ಯತೆ ಎದುರಾಗಿದೆ. ಕಳೆದ 2014-15ನೇ ಸಾಲಿನ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ನಂತರ ಅಧಿಕಾರಿಗಳು ತಿದ್ದು ಪಡಿಮಾಡಿದ್ದಾರೆ ಎನ್ನಲಾಗಿದೆ.

ಮ್ಯುಟೇಶನ್ (ಎಂ.ಆರ್) ಪ್ರತಿಗಳಲ್ಲಿ ಕೋರ್ಟ್ ಆದೇಶ ಎಂದು ಉಪವಿಭಾಗಾಧಿಕಾರಿಗಳ ಆದೇಶದ ಮೇರೆಗೆ ಪಹಣ ಬದಲಾವಣೆ ಮಾಡಿ ಆರ್‌ಟಿಸಿಯ ಕಲಂ ನಂ.11ರಲ್ಲಿ ವಕ್ಫ್‌ ಬೋರ್ಡ್ ಆಸ್ತಿ ಎಂದು ನಮೂದಾಗಿ ಬರುತ್ತಿದೆ. ಈ ಬೆಳವಣಿಗೆಯು ತಾಲೂಕಿನಾದ್ಯಂತ ಸಾರ್ವಜನಿಕರು ಹಾಗೂ ರೈತರಲ್ಲಿ ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜಮೀನುಗಳು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಾಗುವ ಭೀತಿ ಎದುರಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ