ಕೂಡ್ಲಿಗಿ: ವಕ್ಫ್ ಅಸ್ತಿ ಸರ್ಕಾರದಲ್ಲ, ದಾನಿಗಳು ನೀಡಿದ ಅಸ್ತಿ ಅಷ್ಟೆ. ಬದಲಾಗಿ ವಕ್ಫ್ ಮತ್ತು ಮುಜರಾಯಿ ಇಲಾಖೆಯ ಆಸ್ತಿ, ದೇವರ ಅಸ್ತಿಯಾಗಿದೆಯೇ ಹೊರತು ಯಾರಪ್ಪನಾ ಅಸ್ತಿಯಲ್ಲ ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ವಕ್ಫ್ ಬೋರ್ಡ್ ಅಸ್ತಿ 1.12 ಸಾವಿರ ಎಕರೆ ಇದೆ, ಅದರಲ್ಲಿ 84 ಸಾವಿರ ಎಕರೆ ಭೂಮಿ ತಾಂತ್ರಿಕ ಸಮಸ್ಯೆಯಿಂದ ಕೂಡಿದೆ. ಮುಜರಾಯಿ ಇಲಾಖೆಗೆ ಸೇರಿದ 680 ಎಕರೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ಹೀಗಿದ್ದರೂ ಎರಡು ಬಾರಿ ಸಚಿವರಾದ ಸಿ.ಟಿ. ರವಿ ಸರಿಪಡಿಸದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಜರಾಯಿ ಆಸ್ತಿಯ ಸಮಸ್ಯೆಯನ್ನು ನಾನೇ ಸರಿಪಡಿಸುವೆ ಎಂದರು.
ಈ ಹಿಂದೆ ಬಸನಗೌಡ ಯತ್ನಾಳ್ ಸಹ ಸಿ.ಟಿ. ರವಿ ಅವರ ರೀತಿಯಲ್ಲಿ ಮಾತನಾಡಿದ್ದರು. ಅವರಿಗೆ ಸೂಕ್ತ ಉತ್ತರ ನೀಡುವೆ ಎಂದರು.ಮುಡಾ ಕೇಸನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಹೇಳಿಕೆ ನೀಡುತ್ತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಗಲು ಕನಸು ಕಾಣುತ್ತಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದೆ. ಆದರೆ, ಕಾಂಗ್ರೆಸ್ನಲ್ಲಿ ಒಂದೆ ಮನೆ, ಅದೂ ಅರಮನೆ ಎಂದರು.
ನಾನು ಮೊನ್ನೆ ವಿಜಯಪುರದಲ್ಲಿ, ಶಿವಾನಂದ ಪಾಟೀಲ್ ಸೇರಿದಂತೆ ಹಲವು ಶಾಸಕರನ್ನು ಭೇಟಿ ಮಾಡಿದ್ದೀನಿ. ಹಾಗಂತ ನಾನು ಇನ್ನೊಂದು ಬಣ ಕಟ್ಕೊಂಡಿದೀನಿ ಅಂತ ಅರ್ಥಾನಾ ಎಂದು ಪ್ರಶ್ನಿಸಿದರು. ಜಾರಕಿಹೊಳಿ ಅವರೇ ಸದ್ಯ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಸಿಎಂ ಅಂತಾನೇ ಹೇಳಿದ್ದಾರೆ. ಬಿಜೆಪಿಯವರಿಗೆ ಸಿಎಂ ಸಿದ್ದರಾಮಯ್ಯ ಅವರ ಪಾಪ್ಯೂಲಾರಿಟಿ ಸಹಿಸಿಕೊಳ್ಲೋಕೆ ಆಗ್ತಿಲ್ಲ ಎಂದು ಟೀಕಿಸಿದರು.
ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಜಿಂಕಲ್ ನಾಗಮಣಿ, ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ವಿಶಾಲಾಕ್ಷಿ ರಾಜಣ್ಣ, ಬಿಟಿ ಗುದ್ದಿ ದುರುಗೇಶ್, ಗುರುಸಿದ್ದನಗೌಡ, ಬೊಮ್ಮಣ್ಣ, ಎಳೆನೀರು ಗಂಗಣ್ಣ ಜಿ. ಓಬಣ್ಣ ಇದ್ದರು.