ಕನ್ನಡಪ್ರಭ ವಾರ್ತೆ ಮೈಸೂರು:
ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಲಲಿತಾಭಿನಂದನ ಸಮಾರಂಭದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಲಲಿತಾ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅವರು ಮಾತನಾಡಿ, ಲಲಿತಕ್ಕನಿಗೆ ಪ್ರಶಸ್ತಿ ಬಂದ ನೆಪದಲ್ಲಿ ಅಭಿನಂದನೆ ಏರ್ಪಡಿಸಿರುವುದು ನೆಪ ಮಾತ್ರ. ಕುವೆಂಪು ಹೇಳಿದಂತೆ ಮನೆ ಮನೆಯ ತಪಸ್ವಿನಿಯರಾದ ಗೃಹಣಿಯರನ್ನು ಗೌರವಿಸಲು ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.ರಾಜಕಾರಣಿಗಳ ಪತ್ನಿಯರಾಗಿ ಬದುಕುವುದು ಅಷ್ಟು ಸುಲಭವಲ್ಲ. ಪತಿ ಊರ ಉಸಾಬರಿಯಲ್ಲೆಲ್ಲ ಮುಗಿಸಿ ಹೈರಾಣವಾಗಿ ಮನೆಗೆ ಬರುವವರೆಗೂ ಕಾಯುತ್ತಾರೆ. ಅವರಿಗೆ ರಾಜಕಾರಣದ ಸಿಟ್ಟು-ಗುಟ್ಟುಗಳು, ಅಸಮಾಧಾನ ಏನಿದ್ದರೂ ಇವರು ಮಾತ್ರ ಸಮಾಧಾನವಾಗಿಬೇಕು. ಪತಿಯ ವಿಶ್ವಾಸಿಗಳು, ವಿರೋಧಿಗಳು, ಹಿತೈಷಿಗಳು, ಹಿತಶತ್ರುಗಳು ಯಾರೇ ಸಿಕ್ಕರೂ ಅವರನ್ನು ವಿಶ್ವಾಸದಿಂದ ಮಾತನಾಡಿಸಬೇಕು. ಚುನಾವಣೆಗಳಲ್ಲಿ ಇರುಳು ಹಗಲೆನ್ನದೆ ಮನೆಯ ಹೊರೆಗೂ ಒಳಗೂ ದುಡಿಯಬೇಕು. ಜತೆಗೆ ಸಂಸಾರವನ್ನೂ ನಿರ್ವಹಿಸಬೇಕು. ಹೀಗೆ ವಿವಿಧ ಹೊಣೆಗಾರಿಕೆಯನ್ನು ಸೊಗಸಾಗಿ, ನಿರುಮ್ಮಳವಾಗಿ ನಿರ್ವಹಿಸಿದವರು ಲಲಿತಕ್ಕ. ತಾಳ್ಮೆಯ ಮಾತಿನಿಂದ ಅಕ್ಕ ಅನ್ನುವ ಯೋಗ್ಯತೆ ಮತ್ತು ಅರ್ಹತೆಗೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.
ಅಭಿನಂದನೆ ಸ್ವೀಕರಿಸಿ ಲಲಿತಾ ಜಿ.ಟಿ. ದೇವೇಗೌಡ ಅವರು ಮಾತನಾಡಿ, ಪತಿ ಜಿ.ಟಿ. ದೇವೇಗೌಡ ಮತ್ತು ತಮ್ಮ ಬದುಕಿನ ಹಿನ್ನೋಟವನ್ನು ಮೆಲುಕು ಹಾಕುತ ಭಾವುಕರಾದರು. ಇದೇ ವೇಳೆ ನೆನಪಿನ ಸುರಳಿ ಕಿರುಹೊತ್ತಿಗೆಯನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಬಿಡುಗಡೆಗೊಳಿಸಿದರು.
ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಕೆಲಕಾಲ ಭಾವುಕರಾದರು.ನಗರದ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಮಾತು ಆರಂಭಿಸುವ ಮುನ್ನವೇ ಗದ್ಗಿತರಾಗಿ ಕಣ್ಣೀರಿಟ್ಟರು. ಏನನ್ನೂ ನೆನೆದುಕೊಂಡು ಜಿ.ಟಿ. ದೇವೇಗೌಡರು ಬಿಕ್ಕಿ ಬಿಕ್ಕಿ ಅತ್ತರು, ಸಭಾಂಗಣದಲ್ಲಿ ನೆರೆದಿದ್ದವರ ಕಣ್ಣಂಚು ಒದ್ದೆಯಾಯಿತು. ಬೆಂಬಲಿಗರು ‘ಸದಾ ಕಾಲ ನಿಮ್ಮ ಜೊತೆಗಿರುತ್ತೇವೆ ವಿ ಅಣ್ಣಾ, ಅಳಬೇಡಿ’ ಎಂದು ಕೂಗಿದರು. ಸುಧಾರಿಸಿಕೊಂಡು ಮಾತನಾಡಿದ ಜಿ.ಟಿ. ದೇವೇಗೌಡರು, ನಾನು ಬಂಗಾರದ ಮನುಷ್ಯ ಸಿನೆಮಾ ನೋಡಿ ಅಳುತ್ತಿದ್ದೆ, ಅದರಿಂದ ಪ್ರೇರಣೆ ಪಡೆದು ಪ್ರಗತಿಪರ ಕೃಷಿಕನಾದೆ. ನನಗೆ 32 ವರ್ಷ ಇದ್ದಾಗ, ಲಲಿತಾಳಿಗೆ 16 ವರ್ಷ ಹೈಸ್ಕೂಲ್ ಓದುತ್ತಿದ್ದಳು. ದಲಿತ ಚೆಲುವಯ್ಯ ಹಾಗೂ ಲಿಂಗೇಗೌಡ ನನ್ನ ತಾಯಿಯ ಸೂಚನೆಯಂತೆ ಹುಡುಗಿ ನೋಡಿಕೊಂಡು ಬಂದಿದ್ದರು. ನಂತರ ಮದುವೆಯ ಬಳಿಕ ಅವಳು ಒಂದು ದಿನಾನು ಸುಖ ಪಟ್ಟಿಲ್ಲ ಎಂದು ಭಾವುಕರಾದರು.-ಕೋಟ್-
- ಲಲಿತಾ ಜಿ.ಟಿ. ದೇವೇಗೌಡ, ಜಿಪಂ ಮಾಜಿ ಅಧ್ಯಕ್ಷೆ.