ಮೋಹನ್ ರಾಜ್
ಕೋಟ್ಯಾಂತರ ಮಂದಿಗೆ ಆರಾಧ್ಯ ದೈವ, ಕುಡಿಯಲು ಹಾಗೂ ಕೃಷಿಗೆ ನೀರು ಪೂರೈಸುವ ಕರುನಾಡಿನ ಜೀವನದಿ ಎಂದೇ ಖ್ಯಾತಿಯಾದ ಕಾವೇರಿ ನದಿ ಇಂದು ತನ್ನ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲೇ ಮಲಿನಗೊಳ್ಳುತ್ತಿರುವುದು ವಿಷಾದಕಾರಿ ಸಂಗತಿ.ಹೌದು ಕಾವೇರಿ ನದಿ ತನ್ನ ಹುಟ್ಟೂರಿನಲ್ಲೇ ಅತಿಯಾಗಿ ಮಲಿನಗೊಳ್ಳುತ್ತಿದ್ದಾಳೆ ಅಂದರೆ ತಪ್ಪಾಗಲ್ಲ. ಇದಕ್ಕೆ ಪುಷ್ಟಿ ನೀಡುವ ಅನೇಕ ಸಂಗತಿಗಳನ್ನು ನಾವಿಲ್ಲಿ ಕಾಣಬಹುದು. ಇದೀಗ ಜಿಲ್ಲೆಯಲ್ಲಿ ಕಾಫಿ ಕೊಯ್ಲು ಸಮಯ, ಕೆಲ ಭಾಗದ ಮಾಲೀಕರು ಕಾಫಿ ಪಲ್ಫರ್ ಮಾಡಿದ ಕಲುಷಿತ ನೀರನ್ನು ಕೂಡ ನದಿಗೆ ಹರಿಯ ಬಿಡುತ್ತಿರುವ ಹಿನ್ನೆಲೆ ನದಿ ನೀರು ಬಣ್ಣ ಬದಲಾಗುವುದರ ಜತೆಗೆ ಅಶುದ್ಧಗೊಂಡು ವಿಷಯುಕ್ತವಾಗುತ್ತಿದೆ.
ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಹೋಟೆಲ್, ರೆಸಾರ್ಟ್, ವಸತಿಗೃಹ ಸೇರಿದಂತೆ ಮನೆಗಳ ಶೌಚದ ನೀರು ಕೂಡ ಪ್ರತಿದಿನ ಹರಿದು, ಕಾವೇರಿ ನದಿ ಸೇರುತ್ತಿದೆ. ಇಲ್ಲಿ ಮಾತ್ರವಲ್ಲ ಮಡಿಕೇರಿ, ಮೂರ್ನಾಡು, ಕೊಂಡಂಗೇರಿ, ಬೇತ್ರಿ, ನಾಪೋಕ್ಲು, ಕೊಟ್ಟಮುಡಿ, ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಕಾವೇರಿ ನದಿ ತಟದಲ್ಲಿರುವ ಪಟ್ಟಣಗಳ ಹಲವು ಮನೆಗಳ ಶೌಚದ ನೀರು, ಪಟ್ಟಣದ ಅಂಗಡಿಗಳ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯದ ನೀರು ಉಪನದಿಗಳ ಮುಖಾಂತರ ಕಾವೇರಿ ಒಡಲು ಸೇರುತ್ತಿದ್ದು, ಮತ್ತಷ್ಟು ಅಶುದ್ಧಗೊಳ್ಳುತ್ತಿದ್ದಾಳೆ ಕಾವೇರಿ.ಇನ್ನೂ ಸಿದ್ದಾಪುರ ಸಮೀಪದ ಕಾವೇರಿ ಸೇತುವೆಯ ಬಳಿಯಲ್ಲಂತೂ ಹೇಳತೀರದಷ್ಟು ರಾಶಿ ರಾಶಿ ಕಸವನ್ನು ಎಸೆಯಲಾಗಿದೆ ಅಂದರೆ ಇಲ್ಲಿ ಬೇರೆ ಯಾರೋ ಪ್ರವಾಸಿಗರು ಅಥವಾ ಹೊರ ಜಿಲ್ಲೆ, ಹೊರ ರಾಜ್ಯದವರು ತಂದು ಈ ತ್ಯಾಜ್ಯವನ್ನು ಎಸೆದಿಲ್ಲ ಬದಲಿಗೆ ಬುದ್ಧಿವಂತ ಸ್ಥಳೀಯ ನಾಗರಿಕರೇ ಈ ಕೃತ್ಯ ಎಸಗುತ್ತಿದ್ದಾರೆ. ಅಂದರೆ ಪ್ರತಿನಿತ್ಯ ಅವರು ಬಳಸುವ ಪ್ಲಾಸ್ಟಿಕ್ ಮತ್ತು ಇನ್ನಿತರರ ವಿನಾಶಕಾರಿ ತ್ಯಾಜ್ಯವನ್ನು ರಾಶಿಗಟ್ಟಲೆ ತಂದು ಇಲ್ಲಿಗೆ ಎಸೆದು ಹೋಗುತ್ತಿದ್ದಾರೆ.
ಈ ಹಿಂದಿನಿಂದಲೂ ಕಾವೇರಿ ನದಿಗೆ ತ್ಯಾಜ್ಯ ನೀರು, ಕಸ ಸೇರುತ್ತಿರುವ ಕುರಿತು ಹಲವು ವರದಿಗಳು ಬಂದರು ಕೂಡ ನದಿ ಸಂರಕ್ಷಣೆ ಮಾಡಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ತೋರಿರುವುದು ಕೂಡ ಕಾವೇರಿ ಕಲುಷಿತಗೊಳ್ಳಲು ಎಡೆಮಾಡಿಕೊಟ್ಟಂತಿದೆ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಜೀವ ನದಿಯ ಪಾವಿತ್ರ್ಯತೆಯನ್ನು ಉಳಿಸಬೇಕೆಂಬುದೇ ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಕಾವೇರಿ ನದಿ ನೀರಿಗೆ ತ್ಯಾಜ್ಯಗಳನ್ನು ಎಸೆಯುವುದು, ಕಲುಷಿತ ನೀರನ್ನು ಹರಿಯ ಬಿಡುತ್ತಿರುವ ಕುರಿತು ಸ್ಥಳೀಯ ಸಂಘ ಸಂಸ್ಥೆಗಳ ಮುಖಾಂತರ ಮಾಹಿತಿ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಈ ಭಾಗಕ್ಕೆ ಸೆನ್ಸಾರ್ ಕ್ಯಾಮರಾ ಅಳವಡಿಸಲಾಗುವುದು. ಅಲ್ಲದೆ ಕಸವನ್ನು ಎಸೆಯುವವರಿಗೆ ಹಾಗೂ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವವರಿಗೆ ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತದೆ. ಮಡಿಕೇರಿ ರಸ್ತೆಯಲ್ಲಿ ಈಗಾಗಲೇ ಕ್ಯಾಮರಾ ಅಳವಡಿಸಲಾಗಿದ್ದು, ಕಸದ ಸಮಸ್ಯೆ ಕಡಿಮೆ ಆಗಿದೆ.
ಸೇತುವೆ ಬಳಿ ಇಷ್ಟೊಂದು ಪ್ರಮಾಣದಲ್ಲಿ ಕಸದ ರಾಶಿಯಾಗಲು ಪಂಚಾಯಿತಿಗಳ ನಿರ್ಲಕ್ಷ್ಯವೇ ನೇರ ಹೊಣೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಲು ಸ್ಥಳೀಯ ಪಂಚಾಯಿತಿಗಳು ಕ್ರಮ ಕೈಗೊಳ್ಳಬೇಕು. ಜತೆಗೆ ಜನತೆಗೂ ಜಾಗೃತಿ ಕೊರತೆ ಹೆಚ್ಚಾಗಿದೆ. ಶಿಯಾಬುದ್ದೀನ್ ವಿ.ಪಿ.ಎಸ್, ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷ, ನೆಲ್ಯಹುದಿಕೇರಿ
ಶ್ರೇಯಸ್ ಕುಮಾರ್, ಅಧ್ಯಕ್ಷರು ಡೊಮಿನೋಸ್ ಯುವಕ ಸಂಘ
। ತಿಮ್ಮಯ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿದ್ದಾಪುರ ಗ್ರಾಮ ಪಂಚಾಯಿತಿ