- ಪತ್ನಿಗೂ ಸಚಿವ ಸ್ಥಾನಕ್ಕೆ ಪರೋಕ್ಷವಾಗಿ ಒತ್ತಾಯಿಸಿದ ಬಳ್ಳಾರಿ ಸಂಸದ - - -
ಕನ್ನಡಪ್ರಭ ವಾರ್ತೆ ದಾವಣಗೆರೆನೋಡ್ತಾ ಇರಿ, ಯಾವ ರೀತಿ ಸಂಪುಟ ಇರುತ್ತದೆ. ಎಲ್ಲರೂ ತಿರುಗಿ ನೋಡಬೇಕು ಎಂದು ಬಳ್ಳಾರಿ ಕ್ಷೇತ್ರದ ಸಂಸದ ಇ.ತುಕಾರಾಂ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯ ನಗರ ಜಿಲ್ಲೆ ಹರಪನಹಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಏನೂ ಇಲ್ಲ. ಎಲ್ಲ ಶಾಂತಿಯುತವಾಗಿದೆ. ಮುಖ್ಯಮಂತ್ರಿ ವಿಚಾರದ ಬಗ್ಗೆ ಹೈಕಮಾಂಡ್ ಇದೆ. ನಮ್ಮ ಪಕ್ಷದ ಹಿರಿಯರೆಲ್ಲಾ ಸೇರಿ ನಿರ್ಧಾರ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಹಿರಿಯರೂ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.ಜನ ನಮಗೆ ಸಂಪೂರ್ಣ ಬಹುಮತದ ಆದೇಶ ನೀಡಿದ್ದಾರೆ. ಜನರ ಪರ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ. ಜನರ ಭರವಸೆ ಈಡೇರಿಸಿ, ನುಡಿದಂತೆ ನಡೆದುಕೊಂಡಿದ್ದೇವೆ. ಪ್ರೀತಿ, ಅಭಿಮಾನಕ್ಕೆ ತಕ್ಕಂತೆ ಕೆಲಸ ಮಾಡಿ, 2028ಕ್ಕೆ ಮತ್ತೆ ನಾವೇ ರಾಜ್ಯದಲ್ಲಿ ಅಧಿಕಾರಕ್ಕೂ ಬರುತ್ತೇವೆ ಎಂದು ತುಕಾರಾಂ ಹೇಳಿದರು.
ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯ ರಾಜ್ಯದ ದೊಡ್ಡ ಸಮಾಜಗಳಲ್ಲೊಂದಾಗಿದೆ. ಮೊದಲು ಮೂರು ಸಚಿವ ಸ್ಥಾನವನ್ನು ನೀಡಿದ್ದರು. ಸಂಪುಟ ಪುನಾರಚನೆಯಲ್ಲಿ ವಾಲ್ಮೀಕಿ ಸಮಾಜದ ಪರ ಸಚಿವ ಸ್ಥಾನ ನೀಡುವಂತೆ ಕೇಳುತ್ತೇವೆ. ಸಚಿವ ಸ್ಥಾನ ತ್ಯಾಗ ಮಾಡಿ, ಸಂಸದನಾಗಿದ್ದೇನೆ. ಯಾರು ತ್ಯಾಗ ಮಾಡಿದ್ದಾರೆ, ಯಾರು ಪಕ್ಷನಿಷ್ಟರಿದ್ದಾರೆ ಅದನ್ನೆಲ್ಲಾ ನೋಡಿ ಪಕ್ಷ ತೀರ್ಮಾನಿಸುತ್ತದೆ ಎನ್ನುವ ಮೂಲಕ ತಮ್ಮ ಪತ್ನಿ, ಶಾಸಕಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪರೋಕ್ಷವಾಗಿ ಅವರು ಒತ್ತಾಯಿಸಿದರು.- - -
(ಕೋಟ್)ಯಾರಿಗೆ ಕ್ಲೀನ್ ಇಮೇಜ್ ಇದೆ ಅಂತಾನೂ ಪಕ್ಷದ ಹೈಕಮಾಂಡ್ ನೋಡುತ್ತದೆ. ಸಚಿವ ಸ್ಥಾನ ಯಾರಿಗೆ ನೀಡಬೇಕೆಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ.
- ಇ.ತುಕಾರಾಂ, ಸಂಸದ, ಬಳ್ಳಾರಿ ಕ್ಷೇತ್ರ.- - -