ಆರ್.ನುಲೇನೂರು ಗ್ರಾಮದಲ್ಲಿ 1.90 ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ನಮ್ಮ ರೈತರು ಸರ್ಕಾರ ಮತ್ತು ಜನಪ್ರತಿನಿಧಿಗಳಿಂದ ನೀರು ಮತ್ತು ವಿದ್ಯುತ್ ಬಯಸುತ್ತಾರೆ. ಅವುಗಳನ್ನು ಅವರಿಗೆ ಸಮರ್ಪಕವಾಗಿ ಒದಗಿಸುವ ಯತ್ನ ಮಾಡಬೇಕು ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ನುಲಿಯ ಚಂದಯ್ಯ ಜಯಂತಿಯಲ್ಲಿ ಪಾಲ್ಗೊಂಡು ನಂತರ ಆರ್.ನುಲೇನೂರು ಗ್ರಾಮದಲ್ಲಿ 1 ಕೋಟಿ 90 ಲಕ್ಷ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಬಾರಿ ರೈತರಿಗೆ ನೀರು, ವಿದ್ಯುತ್ ಕೊಡದಿದ್ದರೆ ರೈತರ ಯಾವ ತೋಟಗಳು ಉಳಿಯುವುದಿಲ್ಲ. ರೈತರ ವಿದ್ಯುತ್ ಸಮಸ್ಯೆ ಪರಿಹರಿಸಲು ಹನುಮಲಿ ಬಳಿ 25 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ತಾಲೂಕಿನಾದ್ಯಂತ 17 ಕಡೆ ವಿದ್ಯುತ್ ಪವರ್ ಸ್ಟೇಷನ್ ಕಟ್ಟಿಸುತ್ತಿದ್ದೇನೆ. ಹಿರಿಯೂರಿನ ವಾಣಿ ವಿಲಾಸಾಗರದಿಂದ ಕ್ಷೇತ್ರದ ಬಹುತೇಕ ಭಾಗಗಳಿಗೆ ಶುದ್ಧ ನೀರು ನೀಡುವುದಕ್ಕಾಗಿ ೩೬೭ ಕೋಟಿ ರು. ಖರ್ಚು ಮಾಡಲಾಗಿದೆ ಎಂದರು.
ಕ್ಷೇತ್ರಾದ್ಯಂತ ಶಾಲೆ, ಆಸ್ಪತ್ರೆ, ಸಿ.ಸಿ.ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಚಾನಲ್ ಕೆಲಸ ನೆನೆಗುದಿಗೆ ಬಿದ್ದಿತ್ತು. ಸಾವಿರಾರು ರೈತರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮನವೊಲಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಜೊತೆ ಮಾತನಾಡಿದ ಪರಿಣಾಮ ಸಮಸ್ಯೆ ಬಗೆಹರಿದಿದೆ. ಒಂದು ತಿಂಗಳೊಳಗೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುತ್ತೇನೆಂದು ಹೇಳಿದರು.
ಲೋಕಸಭೆ ಮಾಜಿ ಸದಸ್ಯ ಜನಾರ್ಧನಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಕುಮಾರಣ್ಣ, ಭಾರತಿ ಕಲ್ಲೇಶ್, ಪಾರ್ವತಮ್ಮ ಸುರೇಶ್, ನುಲೇನೂರು ಶೇಖರ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.