ಕೊಪ್ಪಳ: ಜಲ ಪ್ರತಿಯೊಬ್ಬರ ಬದುಕಿಗೆ ಅವಶ್ಯ. ಮಾನವನ ಬದುಕು ಸುಗಮವಾಗಬೇಕಾದರೆ ಜಲ ಸಂರಕ್ಷಣೆ ಮಾಡುವುದಕ್ಕೆ ಆದ್ಯತೆ ನೀಡಬೇಕು ಎಂದು ಕೊಪ್ಪಳದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ದೇವೇಂದ್ರ ಪಂಡಿತ್ ಕರೆ ನೀಡಿದರು.ತಾಲೂಕಿನ ಬಹದ್ದೂರಬಂಡಿ ಗ್ರಾಪಂ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ್ರಾಪಂ ಬಹದ್ದೂರಬಂಡಿ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಹಾಗೂ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಸ್ವೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಎಫ್ಇಎಸ್ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ, ನೀರಿನ ಸರಂಕ್ಷಣೆಗೆ ಆದ್ಯತೆ ನೀಡದೇ ಇದ್ದಲ್ಲಿ ನಾವು ದುಡಿದ ಹಣವನ್ನು ನೀಡಿ ನೀರನ್ನು ಕೊಂಡುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಜಲ ಸಂಪತ್ತು, ಸಸ್ಯ ಸಂಪತ್ತು, ಮಾನವ ಸಂಪತ್ತು ಉಳಿಯಬೇಕಾದರೆ ಇವುಗಳ ಸಂರಕ್ಷಣೆಗೆ ಮಾನವ ಯೋಚಿಸಬೇಕು. ಜಗತ್ತು ಸುಗಮವಾಗಿ ನಡೆಯಬೇಕಾದರೆ ಕಾಲಕಾಲಕ್ಕೆ ಇವುಗಳ ಬಗ್ಗೆ ಚಿಂತನೆ, ಜಾಗೃತಿ ಮೂಡಿಸುವುದು ಅತಿ ಅವಶ್ಯವೆಂದರು.
ಮತದಾರರ ಪ್ರತಿಜ್ಞೆ ವಿಧಿಯನ್ನು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ ಬೋಧಿಸಿದರು. ಆನಂತರ ನರೇಗಾ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಜರುಗಿಸಲಾಯಿತು.ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಮುಖ್ಯಕಾನೂನು ಅಭಿರಕ್ಷಕ ರವಿ ಶಿಗೇನಹಳ್ಳಿ, ಉಪ ಕಾನೂನು ಅಭಿರಕ್ಷಕ ಪ್ರದೀಪಕುಮಾರ, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹನುಮಂತಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರುದ್ರಯ್ಯ ಹಿರೇಮಠ, ಸೋಮಶೇಖರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕು ಸ್ವೀಪ್ ಸಮಿತಿ ಸದಸ್ಯ ಬಸವರಾಜ ಬಳಿಗಾರ, ವೀರೇಶ್ ಬಡಿಗೇರ, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಗ್ರಾಮ ಕಾಯಕ ಮಿತ್ರರು, ನರೇಗಾ ಕೂಲಿಕಾರರು ಹಾಜರಿದ್ದರು.