ಲಕ್ಷ್ಮೇಶ್ವರದಲ್ಲಿ ಮಳೆಗಾಗಿ ಸೋಮೇಶ್ವರನಿಗೆ ಜಲಾಭಿಷೇಕ

KannadaprabhaNewsNetwork |  
Published : Jun 24, 2026, 03:15 AM IST
ಪೊಟೋ-ಪಟ್ಟಣದ ಇತಿಹಾಸ ಪ್ರಸಿದ್ದ ಸೊಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ವಿಶೇಷ ಪೂಜೆ, ಜಲಾಭಿಷೇಕ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ತಾಲೂಕಿನಲ್ಲಿ ವರುಣನ ಅವಕೃಪೆಯ ಸಂದರ್ಭಗಳಲ್ಲಿ, ರೈತರ ಒಳಿತಿಗಾಗಿ ಮತ್ತು ಉತ್ತಮ ಮಳೆ- ಬೆಳೆಗಾಗಿ ಊರಿನ ಜನರು ಹಾಗೂ ಭಕ್ತರು ಒಟ್ಟಾಗಿ ಸೇರಿ ಜಲಾಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆಯನ್ನು ನೆರವೇರಿಸುವುದು ವಾಡಿಕೆ.

ಲಕ್ಷ್ಮೇಶ್ವರ: ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಜಲಾಭಿಷೇಕ ಮತ್ತು ಪೂಜಾ ಕೈಂಕರ್ಯಗಳನ್ನು ಸೋಮವಾರ ಬೆಳಗ್ಗೆ ೬ ಗಂಟೆಯಿಂದ ಪ್ರಾರಂಭವಾಯಿತು.

ಸೋಮೇಶ್ವರನಿಗೆ ೨೪ ಗಂಟೆಗಳ ನಿರಂತರವಾಗಿ ಜಲಾಭಿಷೇಕ ನಡೆಯಲಿದ್ದು, ಸೋಮನಾಥನ ಮೇಲೆ ನೀರು ಬೀಳುವಂತೆ ಮಾಡುವ ಮೂಲಕ ಮಳೆ ದೇವನಿಗಾಗಿ ಪ್ರಾರ್ಥಿಸಲಾಯಿತು.

ತಾಲೂಕಿನಲ್ಲಿ ವರುಣನ ಅವಕೃಪೆಯ ಸಂದರ್ಭಗಳಲ್ಲಿ, ರೈತರ ಒಳಿತಿಗಾಗಿ ಮತ್ತು ಉತ್ತಮ ಮಳೆ- ಬೆಳೆಗಾಗಿ ಊರಿನ ಜನರು ಹಾಗೂ ಭಕ್ತರು ಒಟ್ಟಾಗಿ ಸೇರಿ ಜಲಾಭಿಷೇಕ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆಯನ್ನು ನೆರವೇರಿಸುವುದು ವಾಡಿಕೆ. ಈ ಬಾರಿ ಬಹುತೇಕ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದರಿಂದ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆ ಪಟ್ಟಣದ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ, ದೇವಸ್ಥಾನ ಅರ್ಚಕರ ಸಮಿತಿ, ಸೋಮೇಶ್ವರ ಜಾತ್ರಾ ಕಮಿಟಿಯವರು ಸೇರಿ ಸೋಮೇಶ್ವರನಿಗೆ ನಿರಂತರವಾಗಿ ೨೪ ಗಂಟೆಗಳ ಕಾಲ ಜಲಾಭೀಷೇಕ ಮತ್ತು ವಿಶೇಷ ಪೂಜೆ, ರುದ್ರಾಭಿಷೇಕ ಹಮ್ಮಿಕೊಳ್ಳಲಾಗಿದೆ. ಸೋಮವಾರ ಮುಂಜಾನೆ ಅರ್ಚಕ ಚಿಕ್ಕರಸ ಪೂಜಾರ, ರಾಘವೇಂದ್ರ ಪೂಜಾರ, ಕೃಷ್ಣಾಜಿ ಪೂಜಾರ ಅವರ ನೇತೃತ್ವದಲ್ಲಿ ರುದ್ರಾಭಿಷೇಕದ ಮೂಲಕ ವಿಶೇಷ ಪೂಜೆ ಆರಂಭಿಸಿದರು.

ಪೂಜೆ ನಂತರ ಪ್ರಸಾದವನ್ನು ವಿತರಿಸಲಾಯಿತು. ಮಳೆಗಾಗಿ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ದೇವಸ್ಥಾನದ ಆವರಣದಲ್ಲಿ ಕುಳಿತುಕೊಂಡು ಭಕ್ತಿಯಿಂದ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ ಭಜನೆ ಮಾಡಿದರು. ಸೋಮವಾರ ಸಂಜೆಯಿಂದ ಅಹೋರಾತ್ರಿ ನೂರಾರು ಭಕ್ತರು ಸೇರಿ ಭಜನಾ ತಂಡಗಳೊಂದಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸಿದರು.

ಸೋಮವಾರ ಮುಂಜಾನೆಯಿಂದ ಮಂಗಳವಾರ ಬೆಳಗ್ಗೆ ೮ ಗಂಟೆಯವರೆಗೂ ಜಲಾಭೀಷೇಕ ನಡೆಯಿತು. ವೇದಘೋಷಗಳ ಮಧ್ಯೆ ರುದ್ರಾಭೀಷೇಕ ನೆರವೇರಿತು. ಮಂಗಳವಾರ ಪೂಜೆ ಮುಕ್ತಾಯದ ನಂತರ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಭಕ್ತರ ಸೇವಾ ಟ್ರಸ್ಟ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಸುರೇಶ ರಾಚನಾಯ್ಕರ, ಚನ್ನಪ್ಪ ಜಗಲಿ, ಸೋಮಣ್ಣ ಬಂಡಿವಾಡ, ಜಿ.ಎಸ್. ಗುಡಗೇರಿ, ವಿರುಪಾಕ್ಷ ಆದಿ, ನಂದೀಶ ಬಂಡಿವಾಡ, ಮಯೂರಗೌಡ ಪಾಟೀಲ, ಜಯಪ್ರಕಾಶ ಹೊಟ್ಟಿ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಶಿವಯೋಗಿ ಅಂಕಲಕೋಟಿ ಹಾಗೂ ಟ್ರಸ್ಟ ಕಮಿಟಿ ಸದಸ್ಯರು ಅರ್ಚಕರ ಸಮಿತಿ ಅಧ್ಯಕ್ಷ ದಿಗಂಬರ ಪೂಜಾರ, ಕೃಷ್ಣ ಪೂಜಾರ, ನಾಗರಾಜ ಪೂಜಾರ ಹಾಗೂ ಸದಸ್ಯರು ಮತ್ತು ಸೋಮೇಶ್ವರ ಜಾತ್ರಾ ಕಮಿಟಿ, ಪುರಾಣ ಕಮಿಟಿಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಅಭಿನವ ಯಚ್ಚರ ಶ್ರೀಗಳ ಮೌನ ಅನುಷ್ಠಾನ ಮಂಗಲೋತ್ಸವ
ಫಸಲ್‌ ಬಿಮಾ ಯೋಜನೆಯಡಿ ಸ್ವಯಂ ಘೋಷಣಾ ಪತ್ರ ರದ್ದುಪಡಿಸಿ-ಬಳ್ಳಾರಿ