ಹಾನಗಲ್ಲ ತಾಲೂಕಲ್ಲಿ ಮಳೆ ಕೊರತೆಯಿಂದ ನಲುಗಿದ ಪೈರು

KannadaprabhaNewsNetwork |  
Published : Jun 24, 2026, 03:15 AM IST
ಪೈರಿನಲ್ಲಿ ಎಡೆ ಹೊಡಯುತ್ತಿರುವ ರೈತ | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಶೇ. ೬೬ರಷ್ಟು ಮಳೆ ಕೊರತೆಗೆ ಪೈರು ನಲುಗಿದೆ. ಶೇ. ೮೦ರಷ್ಟು ಬಿತ್ತನೆ ಪೂರ್ಣವಾಗಿದ್ದು, ಭತ್ತದ ನಾಟಿಗೆ ರೈತರು ಕಾಯುತ್ತಿದ್ದಾರೆ. ಮುಗಿಲ ಕಡೆಗೆ ಮುಖ ಮಾಡಿ ಮಳೆಗಾಗಿ ಬೇಡಿಕೊಳ್ಳುವ ರೈತ ನಾಳೆಯ ಚಿಂತೆಯಲ್ಲಿದ್ದಾನೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ತಾಲೂಕಿನಲ್ಲಿ ಶೇ. ೬೬ರಷ್ಟು ಮಳೆ ಕೊರತೆಗೆ ಪೈರು ನಲುಗಿದೆ. ಶೇ. ೮೦ರಷ್ಟು ಬಿತ್ತನೆ ಪೂರ್ಣವಾಗಿದ್ದು, ಭತ್ತದ ನಾಟಿಗೆ ರೈತರು ಕಾಯುತ್ತಿದ್ದಾರೆ. ಮುಗಿಲ ಕಡೆಗೆ ಮುಖ ಮಾಡಿ ಮಳೆಗಾಗಿ ಬೇಡಿಕೊಳ್ಳುವ ರೈತ ನಾಳೆಯ ಚಿಂತೆಯಲ್ಲಿದ್ದಾನೆ.

ತಾಲೂಕಿನಲ್ಲಿ ೪೬ ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಇದರಲ್ಲಿ ಈಗಾಗಲೇ ೩೬ ಸಾವಿರ ಹೆಕ್ಟೇರ್‌ಗೂ ಅಧಿಕ ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಆದರೆ ಬಿರು ಬಿಸಿಲಿಗೆ ಪೈರು ಮಾತ್ರ ಬಾಡಿ ರೈತರನ್ನು ಚಿಂತೆಗೀಡು ಮಾಡಿದೆ. ಜೂನ್ ತಿಂಗಳಿನ ವಾಡಿಕೆ ಮಳೆ ೧೦೫ ಮಿಮೀ ಆಗಬೇಕಾಗಿದ್ದರೂ ಬಿದ್ದ ಮಳೆ ಮಾತ್ರ ಕೇವಲ ೩೫ ಮಿಮೀ. ಶೇ.೬೬ರಷ್ಟು ಮಳೆ ಕೊರತೆ ಇದೆ. ತಿಂಗಳಾಚೆ ಬಿತ್ತನೆ ಮಾಡಿದ ಬೆಳೆಗಳು ಇನ್ನೂ ಸ್ವಲ್ಪ ಜೀವಂತವಾಗಿದ್ದರೂ ಕೂಡ ಇತ್ತೀಚೆಗೆ ಬಿತ್ತನೆ ಮಾಡಿದ ಪೈರು ಮಾತ್ರ ಮತ್ತೆ ಮಳೆಯಾದರೂ ಜೀವ ಪಡೆಯುವ ಲಕ್ಷಣಗಳಿಲ್ಲ. ಕಪ್ಪು ಭೂಮಿಯಲ್ಲಿ ಬಿತ್ತಿದ ಸೋಯಾ ಅವರೆ ಸ್ವಲ್ಪ ಮಟ್ಟಿಗೆ ಜೀವ ಹಿಡಿದುಕೊಂಡಿವೆ. ಆದರೆ ಕೆಂಪು ಭೂಮಿಯಲ್ಲಿ ಬಿತ್ತಿದ ಸೋಯಾ ಅವರೆ ಸೇರಿದಂತೆ ಯಾವ ಬೆಳೆಯೂ ಮತ್ತೆ ಮಳೆಯಾದರೂ ಸುಧಾರಿಸುವ ಸ್ಥಿತಿ ಇಲ್ಲ.

ಕೊಳವೆ ಬಾವಿಗಳಿಂದ ಒಂದಷ್ಟು ಸ್ಪಿಂಕ್ಲರ್ ಮೂಲಕ ಭೂಮಿ ತೋಯಿಸಿ ಬೆಳೆ ಬದುಕಿಸಿಕೊಳ್ಳುವ ಕಾರ್ಯ ನಡೆದಿದೆ. ಕೊಳವೆಬಾವಿಯಲ್ಲಿ ನೀರು ಕೂಡ ಕಡಿಮೆಯಾಗಿರುವುದರಿಂದ ಅದು ಕೂಡ ಬೆಳೆ ಉಳಿಸಿಕೊಳ್ಳುವ ವಿಶ್ವಾಸವನ್ನು ಹೊಂದಿಲ್ಲ. ಈಗಾಗಲೇ ನೂರಾರು ಎಕರೆ ಭೂಮಿಯಲ್ಲಿನ ಬೆಳೆಯನ್ನು ಹರಗಿ ಬೇರೆ ಬಿತ್ತನೆಗೆ ಯೋಚಿಸುತ್ತಿದ್ದಾನೆ.

ಈಗಾಗಲೇ ೫೫೧೨ ಹೆಕ್ಟೇರ್ ಭತ್ತ ಬಿತ್ತನೆಯಾಗಿದೆಯಾದರೂ ಇನ್ನೂ 800 ಹೆಕ್ಟೇರ್ ಭತ್ತದ ನಾಟಿಗಾಗಿ ರೈತ ಮಳೆಯ ನಿರೀಕ್ಷೆಯಲ್ಲಿದ್ದಾನೆ. ಇವು ಬಹುತೇಕ ಹೊಳೆ ದಂಡೆಯ ಜಮೀನುಗಳಾಗಿದ್ದು, ಇನ್ನೂ ವರದಾ, ಧರ್ಮಾ ನದಿಗಳಿಗೆ ನೀರೇ ಬಂದಿಲ್ಲ. ಉತ್ತರ ಕನ್ನಡದಲ್ಲಿಯೂ ಮಳೆ ಕೊರತೆ ಕಾರಣ ಎರಡೂ ನದಿಗೆ ನೀರು ಬಂದಿಲ್ಲ.

೨೨೮೯೫ ಹೆ. ಗೋವಿನ ಜೋಳ, ೮೫೯ ಹೆಕ್ಟೇರ್ ಶೇಂಗಾ, ೩೮೩೨ ಹೆ. ಸೋಯಾ ಅವರೆ, ೨೨೯ ಹೆ. ಹತ್ತಿ, ೨೭೪೦ ಹೆಕ್ಟೇರ್ ಕಬ್ಬು ಬಿತ್ತನೆಯಾಗಿದೆ. ಇನ್ನು ಹತ್ತು ಹನ್ನೆರಡು ದಿನಗಳಲ್ಲಿ ಒಳ್ಳೆಯ ಮಳೆಯಾಗದಿದ್ದರೆ ಎಲ್ಲ ಪೈರನ್ನು ಹರಗಿ ಮತ್ತೆ ಮಳೆ ನೋಡಿಕೊಂಡು ಮತ್ತೆ ಬಿತ್ತನೆ ಮಾಡುವ ಅನಿವಾರ್ಯತೆಗೆ ರೈತ ನಿಲ್ಲಬೇಕಾಗುತ್ತದೆ.

ಮಳೆಯ ನಿರೀಕ್ಷೆ ಹುಸಿಯಾಗಿರುವುದರಿಂದ ರೈತ ಮಾತ್ರ ಮುಂದಿನ ಕೃಷಿ ಚಟುವಟಿಕೆಗಳ ಕುರಿತು ಗಂಭಿರ ಯೋಚನೆಯಲ್ಲಿದ್ದಾನೆ. ಇದೇ ರೀತಿ ಮಳೆ ಹೋದರೆ, ಮತ್ತೆ ಬಿತ್ತನೆಗೆ ರೈತ ಮನಸ್ಸು ಮಾಡಿದರೆ, ಕೃಷಿ ಇಲಾಖೆ ಮತ್ತೆ ಬಿತ್ತನೆ ಬೀಜ ವಿತರಿಸುವ ಅನಿವಾರ್ಯತೆಯೂ ಇದೆ.

ಗೋವಿನ ಜೋಳ ಬಿತ್ತಿ ತಿಂಗಳಾಗಿದೆ. ಈಗಾಗಲೇ ಎದೆ ಮಟ್ಟಕ್ಕೆ ಬೆಳೆಯಬೇಕಾದ ಬೆಳೆ ನೆಲದಲ್ಲಿಯೇ ಇದೆ. ಒಣಗುತ್ತಿದೆ. ಉಳಿದ ಬೆಳೆಗಳೂ ಕೂಡ ದಿನ ಕಳೆದಿವೆ. ಆದೆ ಬೆಳೆದಿಲ್ಲ. ಈಗ ಮಳೆಯಾದರೂ ಕೂಡ ಬೆಳೆ ಸುಧಾರಿಸುವ ಸ್ಥಿತಿ ಇಲ್ಲ. ರೈತ ಮಾತ್ರ ಈ ವರ್ಷ ಆತಂಕಕ್ಕೆ ಈಡಾಗಿದ್ದಾನೆ. ಸರ್ಕಾರ ಈಗಲೇ ರೈತನ ಬಗ್ಗೆ ಯೋಚಿಸಬೇಕಾಗಿದೆ. ರೈತನ ಸಂಕಷ್ಟಕ್ಕೆ ನಿಲ್ಲುವ ಅನಿವಾರ್ಯತೆ ಸರ್ಕಾರಕ್ಕಿದೆ ಎಂದು ಇನಾಂಯಲ್ಲಾಪುರ ರೈತ ರುದ್ರಪ್ಪ ಹಣ್ಣಿ ಹೇಳಿದರು.

ಮಳೆ ಕೊರತೆಯಿಂದ ಬೆಳೆ ಒಣಗುತ್ತಿವೆ. ಇರುವ ಪೈರನ್ನು ಉಳಿಸಿಕೊಳ್ಳಲು ರೈತರು ಹರ ಸಾಹಸ ಮಾಡುತ್ತಿದ್ದಾರೆ. ಕೆಲವರು ಕೊಳವೆಬಾವಿಯಿಂದ ಸ್ಪಿಂಕ್ಲರ್ ಮೂಲಕ ಭೂಮಿ ಹಸಿ ಮಾಡುತ್ತಿದ್ದಾರೆ. ಹೀಗೇ ಮಳೆ ಹೋದರೆ ಬಹುಪಾಲು ಬೆಳೆ ಉಳಿಯುವ ಭರವಸೆ ಇಲ್ಲ. ಆದರೆ ಸದ್ಯಕ್ಕೆ ಮೋಡದ ವಾತಾವರಣ ಇರುವುದರಿಂದ ಮಳೆಯ ನಿರೀಕ್ಷೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಟಿ. ಸುರೇಶ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಅಭಿನವ ಯಚ್ಚರ ಶ್ರೀಗಳ ಮೌನ ಅನುಷ್ಠಾನ ಮಂಗಲೋತ್ಸವ
ಲಕ್ಷ್ಮೇಶ್ವರದಲ್ಲಿ ಮಳೆಗಾಗಿ ಸೋಮೇಶ್ವರನಿಗೆ ಜಲಾಭಿಷೇಕ