ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನಗರ ಸ್ಥಳೀಯ ಸಂಸ್ಥೆಗಳ ಪೌರ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನೀರು ಪೂರೈಕೆ ಕೂಡ ಸ್ಥಗಿತಗೊಳಿಸುತ್ತೇವೆ ಎಂದು ರಾಜ್ಯ ಪೌರ ನೌಕರರ ಸಂಘದ ರಬಕವಿ ಬನಹಟ್ಟಿ ಘಟದಕ ಅಧ್ಯಕ್ಷ ಮಹಾಲಿಂಗ ಸಜ್ಞಾಗೋಳ ಹೇಳಿದರು.ರಾಜ್ಯದಾದ್ಯಂತ ಹಮ್ಮಿಕೊಂಡ ಮಷ್ಕರದ ನಿಮಿತ್ತ ಮಂಗಳವಾರ ರಬಕವಿ ಬನಹಟ್ಟಿ ನಗರಸಭೆ ಕಚೇರಿ ಎದುರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಪೌರಕಾರ್ಮಿಕರು ಆರಂಭಿಸಿದ ಅನಿರ್ದಿಷ್ಟಾವಧಿ ಮುಷ್ಕರದ ನೇತೃತ್ವ ವಹಿಸಿ ಅವರು ಮಾತನಾಡಿದರು. ಮಂಗಳವಾರ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಹಾಗೂ ಕಚೇರಿಯಲ್ಲಿನ ಸಿಬ್ಬಂದಿಗಳೆಲ್ಲರೂ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ. ನಮಗೆ ಜ್ಯೋತಿ ಸಂಜೀವಿನ, ಕೆಜಿಐಡಿ, ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯ ನೀಡಬೇಕು, ಅಂದಾಗ ಮಾತ್ರ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುತ್ತೇವೆ ಎಂದರು.
ಸಂಘದ ಉಪಾಧ್ಯಕ್ಷ ವೈ.ಬಿ. ಕೋರೆನ್ನವರ ಮಾತನಾಡಿ, ಈ ಹೋರಾಟ ಇಂದಿಗೆ ನಿಲ್ಲಿಸುವುದಿಲ್ಲ. ನಗರ ಗ್ರಾಮಗಳನ್ನು ಸ್ವಚ್ಛಗೊಳಿಸುವ ನಮಗೆ ದಿನಗೂಲಿ, ಕ್ಷೇಮಾಭಿವೃದ್ಧಿ, ಸಮಾನ, ಕೆಲಸಕ್ಕೆ ಸಮಾನ ವೇತನ, ನೌಕರರನ್ನು ಖಾಯಂ ಮಾಡುವುದು ಮತ್ತು ವಿಶೇಷ ನೇಮಕಾತಿ ನೌಕರರಿಗೆ ಎಸ್ಎಫ್ಸಿ ಮುಕ್ತ ನಿಧಿಯಿಂದ ವೇತನ ನೀಡುವಂತಾಗಬೇಕು. ಈ ಪ್ರಮುಖವಾದ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಇಲ್ಲವಾದರೆ ಹೋರಾಟ ಇನ್ನಷ್ಟು ಉಗ್ರರೂಪ ತಾಳಲಿದೆ ಎಂದರು.ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕೆ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಅನೀಲ ನಡುವಿನಮನಿ, ಸೈಯದಲಿ ಶೇಖ, ಕಾಡಪ್ಪ ಬಸಪ್ಪಗೋಳ, ಮಹಾದೇವ ಬಸಪ್ಪಗೋಳ, ಶೇಖವ್ವ ನಡುವಿನಮನಿ, ಪಪ್ಪವ್ವ ಚಿಕ್ಕೂಡ, ಯಲ್ಲಪ್ಪ ಹೊನಕಟ್ಟಿ, ರಜನಿಕಾಂತ ಮುನ್ನವ್ವಗೋಳ, ಕಿರನ ಮಡ್ಡಿಮನಿ, ಲಕ್ಷ್ಮೀ ಗಸ್ತಿ, ನಿಜವ್ವ ಬಸಪ್ಪಗೋಳ, ಸಂತರಾಮ ಚಿಕ್ಕೂಡ, ಬಸು ಮಾದರ, ಯಂಕವ್ವ ಬಸಪ್ಪಗೋಳ ಸೇರಿದಂತೆ ಅನೇಕರಿದ್ದರು.