ಬಲದಂಡೆ ನಾಲೆಯಲ್ಲಿ ಕೊನೇ ಭಾಗದ ಜಮೀನುಗಳ ರೈತರ ಮನವಿ ಮಲೇಬೆನ್ನೂರು: ಭದ್ರಾ ನಾಲಾ ವ್ಯಾಪ್ತಿಯ ಕೊನೇ ಭಾಗದ ಜಮೀನುಗಳಿಗೆ ನೀರು ಒದಗಿಸಲು ಒತ್ತಾಯಿಸಿ ಕುಂಬಳೂರು, ಕಮಲಾಪುರ, ಎರೆಹೊಸಹಳ್ಲಿ, ಮಹೇಂದ್ರಪ್ಪ, ಕಮಲಾಪುರ ರಮೇಶ್, ವಿನಾಯಕನಗರ, ಯಲವಟ್ಟಿ, ಹೊಳೆಸಿರಿಗೆರೆ ಗ್ರಾಮಗಳ ನೂರಾರು ರೈತರು ಕರ್ನಾಟಕ ನೀರಾವರಿ ನಿಗಮ ಕಚೇರಿ ಎದುರು ಭಾನುವಾರ ಮೂರು ಗಂಟೆಗಳ ಕಾಲ ಸಭೆ ನಡೆಸಿದರು. ಬರುವ ನವೆಂಬರ್ ೧೭ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲು ನಿರ್ಧರಿಸಿದ್ದು, ಅದು ಸಮರ್ಪಕವಾಗುವುದಿಲ್ಲ. ಈಗಲೇ ಭತ್ತ ಒಣಗುತ್ತಿವೆ ಎಂದು ಒಣಗಿದ ಸಸಿ ತೋರಿಸಿದರು. ಆ ಕಾರಣಕ್ಕೆ ನವೆಂಬರ್ ತಿಂಗಳು ಪೂರ್ಣ ನಾಲೆಗಳಲ್ಲಿ ನೀರು ಹರಿಸಬೇಕೆಂದು ರೈತರು ಇಂಜಿನಿಯರ್ಗೆ ಒತ್ತಾಯಿಸಿದರು. ಪೋಲೀಸ್ ರಕ್ಷಣೆ ಪಡೆದು ಕೊನೇ ಭಾಗಕ್ಕೆ ನೀರು ಹರಿಸಿ ಎಂದು ಮನವಿ ಮಾಡಿದರು. ನಾಲಾ ವಿಭಾಗದ ಇಇ ಮಂಜುನಾಥ್, ಎಇಇ ಧನಂಜಯ್, ನೀರು ಬಳಕೆದಾರರ ಸಂಘದ ಅಧ್ಯಕ್ಷ ದ್ಯಾವಪ್ಪರೆಡ್ಡಿ, ಹೋಬಳಿ ರೈತ ಒಕ್ಕೂಟದ ಅಧ್ಯಕ್ಷ ಮುದೇಗೌಡ್ರ ತಿಪ್ಪೇಶ್, ಕೆ. ಚಿಕ್ಕಣ್ಣ, ಸಂತೋಷ್, ಶಂಭು, ಶ್ರೀನಿವಾಸ್, ನಾಗರಾಜ್, ಬಸವರಾಜ್ ಮತ್ತಿತರರು ಇದ್ದರು.