ಬೆಲೆ ಕುಸಿತ, ನಷ್ಟದ ಭೀತಿಯಲ್ಲಿ ಕುಷ್ಟಗಿಯ ಕಲ್ಲಂಗಡಿ ಬೆಳೆಗಾರ

KannadaprabhaNewsNetwork |  
Published : Apr 21, 2025, 12:47 AM IST
ಪೋಟೊ20ಕೆಎಸಟಿ2: ಕುಷ್ಟಗಿ ಪಟ್ಟಣದಲ್ಲಿ ಕಲ್ಲಂಗಡಿ ಬೆಳೆದ ರೈತರು ಟ್ರ್ಯಾಕ್ಟರನಲ್ಲಿ ಹಾಕಿಕೊಂಡು ಮಾರಾಟ ಮಾಡುತ್ತಿರುವದು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಈ ಬಾರಿ ಕಲ್ಲಂಗಡಿ ಇಳುವರಿ ಹೆಚ್ಚು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇದೆ. ಹೀಗಾಗಿ ದರ ಕುಸಿತವಾಗಿದ್ದು, ರೈತರಿಗೆ ನಷ್ಟ ಉಂಟಾಗುವ ಆತಂಕ ಎದುರಾಗಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ಕಲ್ಲಂಗಡಿ ಹಣ್ಣುಗಳನ್ನು ರೈತರು ಹೆಚ್ಚಾಗಿ ಬೆಳೆದಿರುವ ಹಿನ್ನೆಲೆಯಲ್ಲಿ ದರ ಕಡಿಮೆಯಾಗಿದ್ದು, ರೈತರು ನಷ್ಟದ ಆತಂಕ ಎದುರಿಸುತ್ತಿದ್ದಾರೆ.

ಒಂದು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆಯಲು ₹50 ರಿಂದ ₹60 ಸಾವಿರ ಖರ್ಚು ಬರುತ್ತದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಲ್ಲಂಗಡಿ ಇಳುವರಿ ಹೆಚ್ಚಾಗಿದೆ. ಬಹಳಷ್ಟು ರೈತರು ಕಲ್ಲಂಗಡಿ ಬೆಳೆದಿದ್ದಾರೆ, ಒಂದು ಎಕರೆಯಲ್ಲಿ ಸುಮಾರು 250ರಿಂದ 300 ಕ್ವಿಂಟಲ್ ಇಳುವರಿ ಬಂದಿದೆ. ಆದರೆ ಉತ್ಪಾದನೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಹೀಗಾಗಿ ದರ ಕಡಿಮೆಯಾಗಿದೆ.

ವಾಹನದಲ್ಲಿ ಮಾರಾಟ: ಕೆಲವು ರೈತರು ತಾವು ಬೆಳೆದ ಕಲ್ಲಂಗಡಿಯನ್ನು ಪಿಕಪ್ ವಾಹನ ಅಥವಾ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಊರೂರು ಅಲೆದು ಒಂದಕ್ಕೆ ₹30-40ನಂತೆ ಮಾರಾಟ ಮಾಡುತ್ತಿದ್ದಾರೆ. ಗಾತ್ರಕ್ಕೆ ತಕ್ಕಂತೆ ಬೆಲೆ ನಿರ್ಧರಿಸಲಾಗುತ್ತಿದ್ದು, ಜೋಡಿಗೆ ₹60ರಂತೆಯೂ ವ್ಯಾಪಾರ ಮಾಡುತ್ತಾರೆ. ಬೆಲೆ ಕಡಿಮೆ ಇದ್ದರೂ ಗ್ರಾಹಕರು ಕಲ್ಲಂಗಡಿಗೆ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಕಳೆದ ವರ್ಷ ಇದೇ ಏಪ್ರೀಲ್ ತಿಂಗಳಲ್ಲಿ ಒಂದು ಕೆಜಿಗೆ ₹50ರಿಂದ ₹60ರ ವರೆಗೆ ಮಾರಾಟವಾಗಿವೆ. ಕಳೆದ ವರ್ಷ ಕಲ್ಲಂಗಡಿ ಬೆಳೆಯಿಂದ ರೈತರಿಗೆ ಲಾಭವಾಗಿತ್ತು. ಈ ವರ್ಷ ಕಲ್ಲಂಗಡಿ ಬೆಳೆಯಿಂದ ನಷ್ಟವಾಗುವ ಭೀತಿ ಕಾಡುತ್ತಿದೆ ಎನ್ನುತ್ತಾರೆ ಕಲ್ಲಂಗಡಿ ಬೆಳೆದ ರೈತ ಹನುಮಪ್ಪ ಹುನಗುಂದ.

ಒಂದೂವರೆ ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲು ಸುಮಾರು ₹60 ಸಾವಿರ ಖರ್ಚು ಮಾಡಿದ್ದೇನೆ. ಜಮೀನಿನಲ್ಲಿ ಕ್ವಿಂಟಲ್‌ಗಟ್ಟಲೆ ಕಲ್ಲಂಗಡಿ ಇದೆ. ಕೆಲವು ಕೆಟ್ಟು ಹೋಗಿವೆ. ಬೆಲೆ ಇಲ್ಲದಿರುವುದರಿಂದ ಊರೂರು ಅಲೆಯುತ್ತಾ ಮಾರಾಟ ಮಾಡುತ್ತಿದ್ದೇವೆ ಎಂದು ಕಲ್ಲಂಗಡಿ ಬೆಳೆಗಾರ ಲಕ್ಷ್ಮಣ ಮುಧೋಳ ಹೇಳಿದರು.

ಈ ವರ್ಷ ಕಲ್ಲಂಗಡಿ ಹಣ್ಣುಗಳ ಬೆಲೆ ಬಹಳ ಕಡಿಮೆ, ಒಂದು ಕೆಜಿಗೆ ₹20-30 ಇದೆ. ಬೇಸಿಗೆ ಇರುವುದರಿಂದ ಹಾಗೂ ಬೆಲೆ ಕಡಿಮೆ ಇರುವುದರಿಂದ ದಿನಾಲೂ ಕಲ್ಲಂಗಡಿಗಳನ್ನು ತಂದು ಕುಟುಂಬದ ಜತೆ ತಿನ್ನುತ್ತಿದ್ದೇವೆ ಎಂದು ಗ್ರಾಹಕರಾದ ಸಂತೋಷ ತೋಟದ ಹಾಗೂ ಮಲ್ಲಿಕಾರ್ಜುನ ಕುಷ್ಟಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ