ಹಾವೇರಿ: ಹುಟ್ಟು, ಸಾವು ನಮ್ಮ ಕೈಯಲ್ಲಿ ಇಲ್ಲ. ನಾವ್ಯಾರು ಅರ್ಜಿ ಹಾಕಿ ಹುಟ್ಟಿಲ್ಲ. ಆದರೆ, ಬದುಕು ನಮ್ಮ ಕೈಯಲ್ಲಿ ಇದೆ. ಯಾವುದು ನಮ್ಮ ಕೈಯಲ್ಲಿ ಇಲ್ಲ ಅದರ ಬಗ್ಗೆ ಚಿಂತನೆ ಮಾಡುತ್ತೇವೆ. ಯಾವುದು ನಮ್ಮ ಕೈಯಲ್ಲಿ ಇದೆ ಅದರ ಬಗ್ಗೆ ಚಿಂತನೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ತಾಲೂಕಿನ ದೇವಿಹೊಸೂರ ಗ್ರಾಮದ ಉಡಚಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವಿಹೊಸೂರು ಗ್ರಾಮದಲ್ಲಿ ಉಡಚ್ಚಮ್ಮ ದೇವಿಯ ಕೃಪಾಶೀರ್ವಾದ ಇದೆ. ಉತ್ತಮ ಮಳೆ ಬೆಳೆ ಬರಲಿ, ಬಂದಂತಹ ಬೆಳೆಗೆ ಉತ್ತಮ ಬೆಲೆ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ದೇವಿಹೊಸೂರು ಗ್ರಾಮ ಬಹಳ ಮಹತ್ವದ ಗ್ರಾಮ. ಈ ಗ್ರಾಮ ಏನು ನಿರ್ಣಯ ಮಾಡುತ್ತದೆ ಅದು ಇಡೀ ತಾಲೂಕು-ನಿರ್ಣಯ ಮಾಡುತ್ತದೆ. ಅಂಥಹ ಇತಿಹಾಸ ಇರುವ ಗಾಮ. ಆದ್ದರಿಂದ ಇಂತಹ ಗ್ರಾಮದಲ್ಲಿ ದೇವಿಯ ಜಾತ್ರೆ ನಡೆಯುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.ನಾವೆಲ್ಲ ಮನುಷ್ಯರಾಗಿ ಹುಟ್ಟಿ ಮಾನವರಾಗಬೇಕು. ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿದವನು ಮನುಷ್ಯ. ಅದೆಲ್ಲದರಿಂದ ಹೊರ ಬಂದು ನ್ಯಾಯ, ನೀತಿ, ಧರ್ಮ, ಪೀತಿ ವಿಶ್ವಾಸದ ಸಂಕೋಲೆಯಲ್ಲಿ ಸಿಲುಕಿದವನು ಮಾನವ. ಆ ಕೆಲಸ ಮಾಡಬೇಕೆಂದರೆ ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯರನ್ನು ಗೌರವಿಂದ ಕಾಣುವ ಕೆಲಸ ಮಾಡಬೇಕು. ಸಂಬಂಧಗಳಿಗೆ ಗೌರವ ಕೊಡುವುದು. ಹಿರಿಯರಿಗೆ ಗೌರವ ಕೊಡುವುದು. ಸೌಹಾರ್ದತೆಯಿಂದ ಇರುವುದು ಅತ್ಯಂತ ಅವಶ್ಯಕತೆ ಇದೆ. ಈ ಕೆಲಸವನ್ನು ಎಲ್ಲರೂ ಮಾಡೋಣ. ಎಲ್ಲರ ಮೇಲೂ ದೇವಿಯ ಆಶೀರ್ವಾದ ಇರಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಕ್ಕೇರಿಮಠದ ಡಾ. ಸದಾಶಿವ ಸಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮುಖಂಡರಾದ ಉಮೇಶ ಕರಿಗಾರ, ಶಶಿಧರ ಹೊಸಳ್ಳಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.