ದುಡಿದು ಪಾವತಿಸಿದ ಹಣ ಹಕ್ಕಿನಿಂದ ಕೇಳುತ್ತಿದ್ದೇವೆ

KannadaprabhaNewsNetwork |  
Published : Sep 11, 2024, 01:05 AM IST
ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ವೀರಣ್ಣ ಚಾಕಲಬ್ಬಿ ಮಾತನಾಡಿದರು. | Kannada Prabha

ಸಾರಾಂಶ

ಬಂಡವಾಳ ಶಾಹಿಗಳ ಹಣ ಅಲ್ಲ ಎನ್ನುವದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು

ಗದಗ: ರಾಜ್ಯ, ಕೇಂದ್ರ ಸರ್ಕಾರಕ್ಕೆ ನಾವು ಭಿಕ್ಷೆ ಕೇಳುತ್ತಿಲ್ಲ. ದುಡಿದು ಪಾವತಿಸಿದ ಹಣವನ್ನು ಹಕ್ಕಿನಿಂದ ಕೇಳುತ್ತಿದ್ದೇವೆ. ನಮ್ಮ ಹಣ ನೀಡಲು ನಿಮಗೇನು ಸಮಸ್ಯೆ..? ಕಳೆದ 10 ದಿನಗಳಿಂದ ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ಸಂತ್ರಸ್ತರು ಆಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಜಿಲ್ಲಾಡಳಿತ ಕ್ಯಾರೇ ಎನ್ನುತ್ತಿಲ್ಲ ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಸಂಘದ ಸದಸ್ಯ ವೀರಣ್ಣ ಚಾಕಲಬ್ಬಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಸಾರ್ವಜನಿಕರಿಗೆ ವಂಚನೆ ಮಾಡಿದ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಕಂಪನಿಗಳಿಗೆ ಹಣ ಸಂದಾಯ ಮಾಡಿದ ಜನರಿಗೆ ತಕ್ಷಣ ಮರುಪಾವತಿಸಬೇಕೆಂದು ಆಗ್ರಹಿಸಿ ನಡೆದ ಆಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು.

ಖಾಸಗಿ ಕಂಪನಿಗಳಿಗೆ ಕಟ್ಟಿದ ಹಣ ಬೆವರು ಸುರಿಸಿದ ಹಣವಾಗಿದ್ದು, ಬಂಡವಾಳ ಶಾಹಿಗಳ ಹಣ ಅಲ್ಲ ಎನ್ನುವದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರ್ಥಮಾಡಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮನೋಭಾವನೆ ಇದಕ್ಕೆಲ್ಲ ಮೂಲ ಕಾರಣವಾಗಿದೆ ಎಂದು ಆರೋಪಿಸಿದರು.

ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ಜಿಲ್ಲಾ ಘಟಕ ಅಧ್ಯಕ್ಷ ಹೇಮಂತ್ ಮಾಲಿಪಾಟೀಲ ಮಾತನಾಡಿ, ಜನಪರ ಇರುವ ಕಾನೂನು ಸರ್ಕಾರಗಳು ಸಮರ್ಥವಾಗಿ ಪಾಲನೆ ಮಾಡುತ್ತಿಲ್ಲ. ಆಡಳಿತ ವರ್ಗ ಸಾಮಾನ್ಯ ಜನರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಜನರ ಹಿತಾಸಕ್ತಿಗೆ ಇರುವ ಕಾನೂನುಗಳು ಸ್ಪಷ್ಟವಾಗಿ ಉಲ್ಲಂಘನೆಯಾಗುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಧೋರಣೆ ತಕ್ಕುದಾದುದಲ್ಲ. ಜನರ ಅಶೋತ್ತರಗಳಿಗೆ ಸ್ಪಂದನೇ ಮಾಡದ ಸರ್ಕಾರಗಳು ನಮಗೆ ಅಗತ್ಯವಿಲ್ಲ. ಇಂತಹ ಹಲವಾರು ಲೋಪದೋಷ ನಿರಂತರವಾಗಿ ನಡೆಯುತ್ತಿವೆ ಎಂದು ದೂರಿದರು.

ಬಡ ಜನರು, ಕೂಲಿಕಾರ್ಮಿಕರು ಹಾಗೂ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳಲ್ಲಿ ಹಣ ತೊಡಗಿಸಿದ್ದು, ನಕಾರಾತ್ಮಕ ಉತ್ತರ ನೀಡುತ್ತ ಕಾಲಹರಣ ಮಾಡುತ್ತಿವೆ. ಸೆಬಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಂಪನಿಗಳ ವಿರುದ್ಧ ಮೃದು ಧೋರಣೆ ತಾಳುತ್ತಿರುವುದೇ ಇದಕ್ಕೆ ಮುಖ್ಯ ಕಾರಣ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಿಮಗೆ ಸಮಯಾವಕಾಶ ನೀಡುತ್ತೇವೆ. ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ ಇಲ್ಲದೇ ಇದ್ದಲ್ಲಿ ಅನಾಹುತಗಳಿಗೆ ನೀವೇ ಹೊಣೆ ಎಂದರು.

ಈ ವೇಳೆ ಮಾನಪ್ಪ ಪತ್ತಾರ, ಶರಣಪ್ಪ ಕಂಬಳಿ, ಉಮೇಶ ಕಳಕಪ್ಪನವರ, ಮಂಜುನಾಥ ಆರೆಪಲ್ಲಿ, ಸುರೇಶ ಕರ್ಜಗಿ, ಹೊನಕೇರಪ್ಪ ನರಸಾಪೂರ, ಸುಮಂಗಲಾ ರಾಠೋಡ, ಗಂಗಮ್ಮ ಹುರಳಿ, ಲಾಲಸಾಬ್‌ ನದಾಫ್, ಜಯಪ್ರಕಾಶ ಗದಗ, ಶಿವಕುಮಾರ ಮಠದ, ಅಶೋಕ ಕುರ್ತಕೋಟಿ. ಸಿ.ಎಚ್. ಹುಚ್ಚಮ್ಮನವರ, ಪಂಚಾಕ್ಷರಯ್ಯ ವಿರಕ್ತಮಠ, ಪುಪ್ಪಾ ಖೋಕಲೆ, ಕಲಾವತಿ ನಾವಿ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ