ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ವಸ್ತಾರೆ ಮಹಾಶಕ್ತಿ ಕೇಂದ್ರ ನೂತನ ಅಧ್ಯಕ್ಷ, ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ
ದೇಶ ಉಳಿಸಲು ನಾವು ಬಿಜೆಪಿಯನ್ನು ಕಟ್ಟುತ್ತಿದ್ದೇವೆ ಎಂದು ಯೋಚನೆ ಮಾಡಿದರೆ ನಮ್ಮ ಸೈದ್ಧಾಂತಿಕ ವಿಚಾರಗಳಿಗೆ ಶಕ್ತಿ ಬರುತ್ತದೆ ಎಂದು ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಶನಿವಾರ ನಡೆದ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸ್ತಾರೆ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಬಹಳ ಜನರು ಬೇರೆ ಬೇರೆ ದೇಶಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಚೀನಾ ನಮಗಿಂತ ಮುಂದಿದೆ ಎನ್ನುವವರಿದ್ದಾರೆ. ಆದರೆ, ಅಲ್ಲಿ ದೇಶದ ಪ್ರಶ್ನೆ ಬಂದಾಗ ಎರಡು ಮಾತನಾಡಲು ಅವಕಾಶವೇ ಇಲ್ಲ. ಆ ಹಿನ್ನೆಲೆಯಲ್ಲಿ ನಮ್ಮ ಭಾರತದ ಬದುಕನ್ನ ನೋಡಬೇಕಾದ ಅಗತ್ಯವಿದೆ ಎಂದರು.ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಡೀ ಕೇಂದ್ರ ಸರ್ಕಾರ ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ, ಕರ್ನಾಟಕದಲ್ಲಿ ಕೆಂಗಲ್ ಹನುಮಂತಯ್ಯನವರು ಕಟ್ಟಿದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ನಿಂತು ಪಾಕಿಸ್ಥಾನಕ್ಕೆ ಜೈ ಎಂದು ಕೂಗುತ್ತಾರೆ ಎಂದು ಯೋಚನೆ ಮಾಡಿದರೆ ನಮ್ಮ ಮುಂದಿನ ತಲೆಮಾರಿನ ಬಗ್ಗೆ ಯೋಚನೆ ಉಂಟಾಗುತ್ತದೆ ಎಂದರು.ದೇಶ ಕಟ್ಟುವ ಒಂದು ಭಾಗವಾಗಿ ನಮ್ಮ ಹಿರಿಯರು ಭಾರತೀಯ ಜನತಾ ಪಕ್ಷ ಕಟ್ಟಿದ್ದಾರೆ. ಇಂದು ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಬಿಜೆಪಿ ವಿಚಾರಧಾರೆಯನ್ನು ನಾವು ಗಟ್ಟಿಗೊಳಿಸದೇ ಇದ್ದಲ್ಲಿ, ನಾವೆಲ್ಲರೂ ಮುಕ್ತವಾಗಿ ಪಕ್ಷ ಬೆಂಬಲಿಸದೇ ಇದ್ದಲ್ಲಿ ಮುಂದಿನ ತಲೆಮಾರು ಈ ದೇಶದಲ್ಲಿ ಬದುಕುವುದು ಕಷ್ಟವಿದೆ ಎನ್ನುವ ಅಭಿಪ್ರಾಯ ಸಾಮಾನ್ಯ ಜನರು ವ್ಯಕ್ತ ಪಡಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಮಾತನಾಡಿ, ಜಿಲ್ಲೆಯ ಐದೂ ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದರು. ಕಳೆದ ಚುನಾವಣೆಯಲ್ಲಿ ಐದೂ ಸ್ಥಾನಗಳನ್ನು ಕಳೆದು ಕೊಂಡಿದ್ದೇವೆ. ಬಿಜೆಪಿಯನ್ನು ಸೋಲಿಸುವ ಶಕ್ತಿ ಕಾಂಗ್ರೆಸ್ಗೆ ಇರಲಿಲ್ಲ. ನಮ್ಮ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರ ಅಸಮಾಧಾನದಿಂದ ಸೋಲಾಗಿದೆ ಎಂದರು.