ಯಲ್ಲಾಪುರ: ರಾಮಾಯಣದ ಕುರಿತು ಸಾಕಷ್ಟು ಪುಸ್ತಕಗಳು ಬರೆಯಲ್ಪಟ್ಟಿದೆ. ಮೂಲ ವಾಲ್ಮೀಕಿ ಬರೆದ ಕಥೆಗೂ, ತದನಂತರ ಬಂದ ಬರಹಗಾರರ ಕಥೆಗೂ ಭಿನ್ನತೆ ಕಾಣಬಹುದು. ಅನೇಕರು ರಾಮನ ವ್ಯಕ್ತಿತ್ವವನ್ನ ಆಕ್ಷೇಪಿಸಿದ್ದಾರೆ. ಹಾಗಂತ ಲಕ್ಷ್ಮಣನನ್ನು ವಿಶೇಷವಾಗಿ ಪರಿಗಣಿಸಲೇ ಇಲ್ಲ ಎಂದು ಉಮ್ಮಚಗಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ಎಂ.ಜಿ. ಭಟ್ ಸಂಕದಗುಂಡಿ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ಟ ಮಾತನಾಡಿ, ನಮಗೆ ಸ್ವಾತಂತ್ರ್ಯ ಬಂದ ಮೇಲೆಯೇ ನಮ್ಮ ಸಂಸ್ಕೃತಿಯ, ಪರಂಪರೆಯ ಮೇಲೆ ಆಕ್ರಮಣ ಪ್ರಾರಂಭವಾಯಿತು. ಆದರೆ ಈ ದೇಶದಲ್ಲಿ ಅಭಾಸಾಪ ಚಟುವಟಿಕೆ ಪ್ರಾರಂಭವಾದ ಮೇಲೆ ಆಕ್ರಮಣ ಕಡಿಮೆಯಾಗುತ್ತಿದೆ. ಆದರೂ ನಮ್ಮ ಸಮಾಜ ಮೌಲ್ಯದಿಂದ ದೂರವಾಗುತ್ತಿದೆ. ನಮ್ಮ ಸಂಸ್ಥೆಯ ಉದ್ದೇಶ ಭವಿಷ್ಯತ್ತಿನಲ್ಲಿ ಯುವ ಜನಾಂಗ ಸನ್ಮಾರ್ಗದಲ್ಲಿ ಸಾಗಬೇಕೆಂಬುದೇ ಆಗಿದೆ. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಸಂಘಟಕಿ ಸುಜಾತಾ ಹೆಗಡೆ ಕಾಗಾರಕೊಡ್ಲು ಆಶಯ ಭಾಷಣ ಮಾಡಿ, ಜಗತ್ತಿನ ಅನೇಕ ರಾಷ್ಟ್ರಗಳು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಿದೆ. ನಮ್ಮ ಮಕ್ಕಳಿಗೆ ರಾಷ್ಟ್ರೀಯತೆಯ ಅರಿವನ್ನು ಮೂಡಿಸಬೇಕು. ಸಮಷ್ಟಿಗೆ ತೊಡಕಾಗದ ಸಾಹಿತ್ಯ ಬರಬೇಕು. ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರ ಆದರ್ಶ ಮತ್ತು ಆಪ್ತವಾಗಿದೆ. ನಮ್ಮ ವೇದಗಳು, ಪುರಾಣಗಳು, ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿಕೊಂಡು ಬಂದಿದೆ. ಆ ದೃಷ್ಟಿಯಿಂದ ನಮ್ಮ ನಾಡಿನ ಅನೇಕ ಜಿಲ್ಲೆಗಳಿಂದ ಬಂದ ಮಕ್ಕಳಿಗೆ ರಾಮಾಯಣದ ಕುರಿತು ತಮ್ಮ ಯೋಚನೆಗಳನ್ನ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.ಶ್ರೀಮಾತಾ ವೈದಿಕ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹೇಶ ಭಟ್ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಪ್ರೇರಣಾ ಭಟ್ಟ, ಸಿಂಧೂರಾ ಹೆಗಡೆ ಪ್ರಾರ್ಥಿಸಿದರು.