ಶ್ರೀಗಳನ್ನೇ ಪ್ರಶ್ನಿಸುವ ಹಂತಕ್ಕೆ ನಾವೆಲ್ಲ ಬೆಳೆದಿದ್ದೇವೆ: ಎಚ್ಡಿಕೆ ಬೇಸರ

KannadaprabhaNewsNetwork |  
Published : Mar 15, 2026, 01:45 AM IST
14ಕೆಎಂಎನ್ ಡಿ22 | Kannada Prabha

ಸಾರಾಂಶ

ರಾಜ್ಯ ರಾಜಕಾರಣ ವಿಷಯವಾಗಿ ನಮ್ಮ ಸಮಾಜದವರು ಮುಖ್ಯಮಂತ್ರಿ ಆಗಬೇಕು ಎಂಬ ನಿರ್ಮಲಾನಂದನಾಥ ಸ್ವಾಮೀಜಿಗಳ ಹೇಳಿಕೆಗೆ ಬೇರೆ ಸಮಾಜದ ಸ್ವಾಮೀಜಿಗಳು ಲಘುವಾಗಿ ಮಾತನಾಡಿದ್ದರು. ಆ ವೇಳೆ ನಾನು ಸಹ ನೀವು ನಿಮ್ಮ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿದೆ ತಾವು ರಾಜಕೀಯವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳಿದ್ದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀಆದಿಚುಂಚನಗಿರಿ ಮಠದ ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ ಎಂಬ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಬಿಜಿಎಸ್ ಶಾಲಾ ಆವರಣದಲ್ಲಿ ನೂತನ ಶ್ರೀಆದಿಚುಂಚನಗಿರಿ ಬಾಲಜಗತ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಗಣಪತಿ ದೇವಾಲಯದ ಕಟ್ಟಡ ಲೋಕಾರ್ಪಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಅವರ ನಡವಳಿಕೆಯನ್ನು ಸಾರ್ವಜನಿಕವಾಗಿ ನಾನೇ ಒಪ್ಪಿಕೊಳ್ಳುತ್ತೇನೆ. ಆದರೆ, ರಮೇಶ್‌ ಬಂಡಿಸಿದ್ದೇಗೌಡರು ಸ್ವಾಮೀಜಿ ದಾರಿ ತಪ್ಪುತ್ತಿದ್ದಾರೆ ಎಂದು ಹೇಳುವ ಮೂಲಕ ಸ್ವಾಮೀಜಿ ಅವರನ್ನೇ ಪ್ರಶ್ನಿಸುವ ಹಂತಕ್ಕೆ ನಾವೆಲ್ಲ ಬೆಳೆದಿದ್ದೇವೆ ಎಂದು ವಿಷಾದಿಸಿದರು.

ರಾಜ್ಯ ರಾಜಕಾರಣ ವಿಷಯವಾಗಿ ನಮ್ಮ ಸಮಾಜದವರು ಮುಖ್ಯಮಂತ್ರಿ ಆಗಬೇಕು ಎಂಬ ನಿರ್ಮಲಾನಂದನಾಥ ಸ್ವಾಮೀಜಿಗಳ ಹೇಳಿಕೆಗೆ ಬೇರೆ ಸಮಾಜದ ಸ್ವಾಮೀಜಿಗಳು ಲಘುವಾಗಿ ಮಾತನಾಡಿದ್ದರು. ಆ ವೇಳೆ ನಾನು ಸಹ ನೀವು ನಿಮ್ಮ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿದೆ ತಾವು ರಾಜಕೀಯವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಹೇಳಿದ್ದೆ ಎಂದರು.

ಈ ವಿಷಯವಾಗಿ ಮಾಜಿ ಪ್ರಧಾನಿ ದೇವೇಗೌಡರು ನನಗೆ ಬುದ್ಧಿ ಮಾತುಗಳನ್ನು ಹೇಳಿ ಸ್ವಾಮೀಜಿಗಳು ಹೆಚ್ಚಾಗಿ ಓದಿಕೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಮೊದಲು ಸ್ವಾಮೀಜಿ ಅವರ ಬಳಿ ಕ್ಷಮೆ ಕೋರುವಂತೆ ಹೇಳಿದ್ದರು. ಸಾರ್ವಜನಿಕವಾಗಿ ನಾನು ಕ್ಷಮೆ ಕೋರಿದ್ದೇನೆ ಎಂದು ಸ್ಮರಿಸಿದರು.

ನಮ್ಮ ಸ್ವಾಮೀಜಿ ಅವರು ತಪ್ಪು ಮಾಡಿದ್ದಾರೆ ಎಂದು ಯಾರೂ ಸಹ ಸಾರ್ವಜನಿಕವಾಗಿ ಬೆರಳು ತೋರಿಸುಂತಾಗಬಾರದು. ರಮೇಶ್ ಬಂಡಿಸಿದ್ದೇಗೌಡರು ಸ್ವಾಮೀಜಿ ಬಗ್ಗೆ ಹಾದಿ ತಪ್ಪಿ ಹೋಗಿತ್ತೀದ್ದೀರಿ ಎಂದರೆ ಅರ್ಥವೇನು ಎಂದು ಅಸಮಾಧಾನ ಹೊರಹಾಕಿದರು.

ಇದಕ್ಕೂ ಮುನ್ನ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ. ಮಠದ ಹಿರಿಯ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮೀಜಿ ಅವರು ಎಲ್ಲರನ್ನೂ ಒಗ್ಗೂಡಿಸಿ ಜೊತೆಗೆ ಕರೆದುಕೊಂಡು ಹೋಗುವಂತೆ ಒಳ್ಳೆಯ ದಾರಿ ಹಾಕಿಕೊಟ್ಟಿದ್ದಾರೆ. ಅವರು ಹಾಕಿಕೊಟ್ಟಿರುವಂತಹ ಹಾದಿ ತಪ್ಪಬಾರದು ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದರು.

ಚುಂಚನಗಿರಿ ಮಠ ಪ್ರಪಂಚದಾದ್ಯಂತ ಹೆಸರು ಮಾಡಿದೆ, ಆದರೆ, ಇತ್ತೀಚಿನ ದಿನದ ತಮ್ಮ ಹೆಜ್ಜೆ ಹಾಗೂ ನಡೆಗಳನ್ನು ಗಮನಿಸಿ ಬಹಳ ಬೇಸರದಿಂದ ಹೇಳುತ್ತಿದ್ದೇನೆ. ನಮ್ಮ ಮಠ ಎಂದು ಎಲ್ಲರೂ ಸದ್ಬಾವನೆಯಿಂದ ಕೂಡಿದೆ. ಈ ಮಠ ಜಾತ್ಯತೀತವಾಗಿ ಬೆಳೆದು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದೆ. ದೇಶದ ಎಲ್ಲಾ ವರ್ಗದ ಜನರನ್ನು ಒಂದು ತೆಕ್ಕೆಗೆ ತೆಗೆದುಕೊಂಡು, ಎಲ್ಲರಿಗೂ ಸಹಾಯ ಮಾಡಿರುವ ಕೀರ್ತಿ ನಿಮಗೆ ಸಲ್ಲಬೇಕು ಎಂದರು.

ಬಳಿಕ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಎಐ ತಂತ್ರಜ್ಞಾನ ವಿಶ್ವಪ್ಯಾಪಿ ಹರಡುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾಭ್ಯಾದಲ್ಲಿ ಮುಂದೆ ಬರಬೇಕು. ಎಐ ಹಾಗೂ ರೋಬೋಟಿಕ್ ಬಳಸಿಕೊಂಡು ಸಾವಿರ ಜನ ನಿರ್ವಹಿಸುವ ಕಾರ್ಯಕವನ್ನು ಒಬ್ಬ ಮನುಷ್ಯ ರೊಬೋಟಿಕ್‌ನಿಂದ ಕೆಲಸ ಪಡೆಯುತ್ತಿದ್ದಾರೆ ಎಂದರು.

ಕಳೆದ ನೂರು ವರ್ಷಗಳ ಹಿಂದೆ ಈ ಪ್ರಾಂತ್ಯದಲ್ಲಿ 100 ಮಂದಿಗೆ ಕೇವಲ 5 ಮಂದಿ ಮಾತ್ರ ಸಾಕ್ಷರತೆ ಕಲಿಯುತ್ತಿದ್ದರು. ಇದನ್ನು ನೀಗಿಸಲು ಸರ್ಕಾರ ಹಾಗೂ ಇಂಥಹ ಮಠಗಳು ಭಕ್ತರ ಸಹಕಾರದೊಂದಿಗೆ ಶಿಕ್ಷಣಕ್ಕೆ ಒತ್ತು ಕೊಡುತ್ತಿರುವುದರಿಂದ ಪ್ರಸ್ತುತ ಲಕ್ಷಾಂತರ ಮಂದಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ. ದಾನಿಗಳು ಮಠಕ್ಕೆ ನೀಡಿದ್ದ ಜಾಗದಲ್ಲಿ ಬಹಳ ಸುಂದರವಾದ ಬೃಹತ್ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಈ ವೇಳೆ ಮೈಸೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶ್ರೀ ಸೋಮೇಶ್ವರನಾಥಸ್ವಾಮಿಜಿ, ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಬಿಜೆಪಿ ಮುಖಂಡ ಸಚ್ಚಿದಾನಂದ, ವಕೀಲ ಪುಟ್ಟೇಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಚೇತನಾ ಯಾದವ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾವುದೇ ಕನ್ನಡ ಶಾಲೆ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಮಧು ಬಂಗಾರಪ್ಪ ಭರವಸೆ
ಯುವಕರಿಗೆ ಉದ್ಯೋಗ ಕೊಡಿಸುವ ಗುರಿ ಹೊಂದಲಾಗಿದೆ