ನರಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅರ್ಹ ಫಲಾನುಭವಿಗಳಗೆ ಪಂಚ ಗ್ಯಾರಂಟಿ ಯೋಜನೆ ಮುಟ್ಟಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇವೆಂದು ತಾಲೂಕು ಪಂಚ ಗ್ಯಾರಂಟಿ ಯೋಜನೆ ಅಧ್ಯಕ್ಷ ವಿವೇಕ ಯಾವಗಲ್ ಹೇಳಿದರು. ಅವರು ತಾಪಂ ಸಭಾ ಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಪ್ರಜಾ ಚರ್ಚೆ ಸಭೆಯಲ್ಲಿ ಮಾತನಾಡಿ, ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರವರ ನೇತೃತ್ವದಲ್ಲಿ ನಮ್ಮ ಸರ್ಕಾರ ರಾಜ್ಯದಲ್ಲಿ ಎರಡು ವರ್ಷಗಳ ಉತ್ತಮ ಆಡಳಿತ ನೀಡಿದೆ. ಇದರ ಜೊತೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನ ಜನತೆಗೆ ನೀಡಿದ ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷರಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಎಲ್ಲರ ಸಹಕಾರದೊಂದಿಗೆ ನಾವಿಂದು ತಾಲೂಕಿನಲ್ಲಿ ಶೇ 98ರಷ್ಟು ಗ್ಯಾರಂಟಿ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿರುತ್ತವೆ. ಆದರೆ ಫಲಶೃತಿ ಚರ್ಚಿಸಲೆಂದೇ ಈ ಪ್ರಜಾ ಚರ್ಚೆ ಕಾರ್ಯಕ್ರಮವನಿಂದು ತಾಲೂಕು ಮಟ್ಟದಲ್ಲಿ ಆಯೋಜಿಸಿದೆ. ಈಗಾಗಲೇ ಶಕ್ತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸಲಾಗಿದೆ. ಇದರಲ್ಲಿ ನಮ್ಮ ಅನುಷ್ಠಾನ ಇಲಾಖೆ ಅಧಿಕಾರಿಗಳ ಸಹಕಾರವೂ ಇದೆ ಎಂದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.
ಹೆಸ್ಕಾಂ ಅಧಿಕಾರಿಗಳು ಮಾತನಾಡಿ, ತಾಲೂಕಿನ ನೋಂದಾಯಿತ 25083 ವಿದ್ಯುತ್ ಸ್ಥಾವರಗಳ ಪೈಕಿ 24658 ಸ್ಥಾವರಗಳಿಗೆ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ತಿಂಗಳು 200 ಯುನಿಟ್ನಂತೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದೆ. ಆ ಮೂಲಕ ನಾವು ಶೇ. 98ರಷ್ಟು ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆಂದು ಹೇಳಿದರು. ಕಂದಾಯ ಇಲಾಖೆಯ ತಾಲೂಕು ಆಹಾರ ನಿರೀಕ್ಷಕ ಪವಾರ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ತಾಲೂಕಿನ 23441 ಪಡಿತರ ಚೀಟಿದಾರರಿಗೆ ಈಗ 8 ಕೆಜಿ ಅಕ್ಕಿ 2 ಕೆಜಿ ಜೋಳ ಈ ರೀತಿಯಾಗಿ ಆಹಾರಧಾನ್ಯಗಳ ವಿತರಣೆಯನ್ನು ಜೂನ್-2025ರ ಅಂತ್ಯದವರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು ಯುವನಿಧಿ ಯೋಜನೆಯು ಜೂನ್-2025 ಅಂತ್ಯದವರೆಗೆ ತಾಲೂಕಿನ 419 ವಿದ್ಯಾರ್ಥಿಗಳಿಗೆ ನೀಡಿದೆ. ಆ ಮೂಲಕ ಇಂದಿನವರೆಗೆ ರುಪಾಯಿ 86,52,000.00 ಗಳ ಅನುದಾನವನ್ನು ಡಿಬಿಟಿ ಮೂಲಕ ವಿದ್ಯಾರ್ಥಿಗಳಿಗೆ ಜಮೆ ಮಾಡಲಾಗಿರುತ್ತದೆ ಹಾಗೂ ಇನ್ನುಳಿದ 107 ವಿದ್ಯಾರ್ಥಿಗಳ ಮನವಿಗಳು ಪರಿಶೀಲನೆ ಹಂತದಲ್ಲಿವೆ ಎಂದರು.ಕೆ.ಎಸ್.ಆರ್.ಟಿ.ಸಿ ತಾಲೂಕು ವ್ಯವಸ್ಥಾಪಕ ಪ್ರಭಾಕರ ಮಾತನಾಡಿ, ಶಕ್ತಿ ಯೋಜನೆಯು ತಾಲೂಕಿನಿಂದ ವಿಶಿಷ್ಟವಾಗಿ ಅನುಷ್ಠಾನಗೊಳಿಸಲಾಗಿದೆ. ನಮ್ಮ ಭಾಗದ ಶೇ. 100 ಮಹಿಳಾ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಂಡು ಸಂಸ್ಥೆಗೆ ಪ್ರತಿ ತಿಂಗಳು ಸರಾಸರಿ ಆದಾಯ ಬರುತ್ತಿದೆ ಎಂದರು.