ಜನರಿಗೆ ನೀಡಿದ 158 ಭರವಸೆ ಈಡೇರಿಸಿದ್ದೇವೆ: ಸಿಎಂ

KannadaprabhaNewsNetwork |  
Published : Apr 01, 2026, 02:00 AM IST
ಸಿದ್ದು ಪ್ರಚಾರ | Kannada Prabha

ಸಾರಾಂಶ

ಉಪ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತತ ಎರಡನೇ ದಿನವೂ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಪರ ಮತಯಾಚನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಉಪ ಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸತತ ಎರಡನೇ ದಿನವೂ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಪರ ಮತಯಾಚನೆ ನಡೆಸಿದರು.

ಜನರಿಗೆ ನಾವು ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಒಂದೇ ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೀವಿ. ಇನ್ನೆರಡು ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ನಾನೇ ಈ ರಾಜ್ಯದ ಮುಖ್ಯಮಂತ್ರಿ. ಎಚ್.ವೈ.ಮೇಟಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕಾಂಗ್ರೆಸ್‌ನವರು ಕೆಲಸ ಮಾಡುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಬಿಜೆಪಿಯವರೇ ನಮ್ಮ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯ ಮಾಡುತ್ತಿದ್ದಾರೆ. ಜನ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಿಸಲು ತೀರ್ಮಾನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನ ನಮ್ಮ ನಿರೀಕ್ಷೆಗಿಂತ ಹೆಚ್ಚು ಸ್ಪಂದಿಸುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಖಚಿತ ಎಂದರು.ಸೋಲುವ ಭೀತಿಯಿಂದ ಸಿಎಂ ಐದು ದಿನ‌ ಪ್ರಚಾರ ಮಾಡ್ತಿದ್ದಾರೆ, ಕಳೆದ ಬಾರಿ ಬಾದಾಮಿಗೆ ಒಂದು ದಿನ ಮಾತ್ರ ಬಂದಿದ್ದರು ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಾದಾಮಿ ಎಲೆಕ್ಷನ್, ಜನರಲ್ ಎಲೆಕ್ಷನ್ ಆಗಿತ್ತು. ಅದು ಬೇರೆ. ಇದು ಬೈ ಎಲೆಕ್ಷನ್. ಬಿಜೆಪಿಯವರು ಸೋಲ್ತೀವಿ ಎಂಬ ಭಯದಿಂದ ಈ ರೀತಿ ಮಾತಾಡ್ತಾ ಇದ್ದಾರೆ. ಬಾಗಲಕೊಟೆಯಲ್ಲಿ ನಾಲ್ಕು ದಿನ, ದಾವಣಗೆರೆಯಲ್ಲಿ ಇನ್ನೂ ಮೂರು ದಿನ ಪ್ರಚಾರ ಮಾಡ್ತೇನೆ. ಎರಡೂ ಕ್ಷೇತ್ರದಲ್ಲಿ ನಮ್ಮವರೇ ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಯತ್ನಾಳ ಕಾಂಗ್ರೆಸ್‌ ಪರ ಕೆಲಸ ಮಾಡಬೇಕು:

ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು. ಬಿಜೆಪಿ ಪರ ಕೆಲಸ ಮಾಡಕೂಡದು. ಅವರು ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆ ಮಾಡಿದ ಪಾರ್ಟಿ ಪರ ಅವರು ಯಾಕೆ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ವಂಶವಾಹಿನಿಗೆ ಕಾಂಗ್ರೆಸ್ ಮಣೆ ಹಾಕಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರಾದರೂ ನಿಧನರಾದರೆ ಅವರ ಮನೆತನಕ್ಕೆ ಟಿಕೆಟ್ ಕೊಡೋದು ಕಾಂಗ್ರೆಸ್ ಪದ್ಧತಿ. ಬಾಗಲಕೋಟೆಗೆ ಮೇಟಿ ಪುತ್ರ , ದಾವಣಗೆರೆ ಶಾಮನೂರರ ಮೊಮ್ಮಗನಿಗೆ ಟಿಕೆಟ್ ನೀಡಲಾಗಿದೆ. ಇದು ಮೊದಲಿನಿಂದಲೂ ನಡೆದುಕೊಂಡ ಬಂದ ಪದ್ಧತಿ ಎಂದು ಹೇಳಿದರು.

ಕ್ಷೇತ್ರದಾದ್ಯಂತ ಸಿದ್ದು ಬಿರುಸಿನ ಪ್ರಚಾರ

ಬಾಗಲಕೋಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರ ಕೂಡ ಸಿದ್ದರಾಮಯ್ಯ ಬಿರುಸಿನ ಪ್ರಚಾರ ನಡೆಸಿದರು. ಬೆಳಗ್ಗೆ ಮುಗುಳೊಳ್ಳಿ ಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಶಾಲು, ಕಂಬಳಿ ಹೊದಿಸಿ, ಕೂದಲಿಗೆ ಕೇಸರಿ ಬಣ್ಣ ಹಚ್ಚಿದ ಟಗರು ಉಡುಗೊರೆ ನೀಡಿ ಸ್ವಾಗತಿಸಲಾಯಿತು. ಬಳಿಕ, ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕ್ಷೇತ್ರದ ಅಭಿವೃದ್ಧಿಗೆ ಎಚ್.ವೈ.ಮೇಟಿಯವರ ಕೊಡುಗೆಗಳ ಮಾಹಿತಿಯನ್ನು ಒಳಗೊಂಡ ‘ಪ್ರಗತಿಯ ಪಕ್ಷಿನೋಟ’ ಎಂಬ ಕೈಪಿಡಿಯನ್ನು ಬಿಡುಗಡೆಗೊಳಿಸಿದರು.

ಬಳಿಕ, ಬಂಜಾರಾ ಶಾಲು ಹಾಕಿಕೊಂಡು ನೀಲಾನಗರ ತಾಂಡಾದಲ್ಲಿ ಅವರು ಪ್ರಚಾರ ನಡೆಸಿದರು. ಬಳಿಕ, ಐಹೊಳೆಗೆ ಬಂದ ಸಿದ್ದುಗೆ ಜೆಸಿಬಿಯಿಂದ ಪುಷ್ಪವೃಷ್ಟಿಗೈದು ಸ್ವಾಗತಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ತೊಳಲಾಟ-ಅಪವಾದಗಳೇ ಅಕ್ಷರ ತಾಳಿವೆ
ಮಹಿಳಾ ಕಾದಂಬರಿ ಅಸಮಾನತೆ ಪ್ರಶ್ನಿಸುವ ಅಸ್ತ್ರ