ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪರಿಸರ ಜಾಗೃತಿ ಪ್ರತಿಯೊಂದು ಮನೆ ಮನೆಗಳಲ್ಲಿ ಆಗಬೇಕು. ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ನಾವು ನೀವೆಲ್ಲರೂ ಜಾಗೃತರಾಗಬೇಕು ಎಂದು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎನ್.ಹೇಮಂತ್ ಅಭಿಮತ ವ್ಯಕ್ತಪಡಿಸಿದರು.ನಗರದ ಹೊರವಲಯದಲ್ಲಿ ಇರುವ ರೋಟರಿ ಬಯೋ ಡೈವರ್ಸಿಟಿ ಪಾರ್ಕಿನಲ್ಲಿ ನಗರದ ಎಂಟು ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗಳನ್ನು ನೆಡುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಜಾಗೃತಿ ಪರಿಸರ ಸಂರಕ್ಷಣೆ ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ, ಪ್ರತಿಯೊಂದು ಹಂತದಲ್ಲೂ ಗಾಳಿ, ನೀರು, ಪ್ರಾಣಿ, ಪಕ್ಷಿ ಹಾಗೂ ಶುದ್ಧವಾದ ವಾತಾವರಣ ಎಲ್ಲವೂ ಸಹ ಉತ್ತಮವಾಗಿ ಇರಬೇಕಾದರೆ ಒಳ್ಳೆಯ ಪರಿಸರ ಅತ್ಯಗತ್ಯ ಎಂದರು.
ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ. ತ್ಯಾಜ್ಯ ವಿಲೇವಾರಿ ಹಾಗೂ ಅತಿಯಾದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರ ಜೊತೆಗೆ ಪರಿಸರವನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ ಧ್ಯೇಯ ವಾಕ್ಯ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಅಂತ್ಯ ಹಾಡುವುದು ಆಗಿದೆ. ಈ ನಿಟ್ಟಿನಲ್ಲಿ ನಗರದ ರೋಟರಿ ಸಂಸ್ಥೆಯವರು ತುಂಬಾ ಮಹತ್ತರವಾದ ಹಾಗೂ ಪವಿತ್ರವಾದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಡಾ. ಪಿ.ನಾರಾಯಣ್ ಮಾತನಾಡಿ, ರೋಟರಿ ಸಂಸ್ಥೆಗಳ ಪ್ರಮುಖವಾದ ಯೋಜನೆ ಈ ಬಯೋ ಡೈವರ್ಸಿಟಿ ಪಾರ್ಕ್ ನಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮುಖಾಂತರ ಎಲ್ಲಾ ಸಂಘ ಸಂಸ್ಥೆಗಳ ನೆರವಿನಿಂದ ಮತ್ತು ಶಾಲಾ ಕಾಲೇಜುಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಇನ್ನು ಸರ್ಕಾರದ ಹಾಗೂ ಜಿಲ್ಲಾಡಳಿತದ ಸಾಕಾರ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯದರ್ಶಿಗಳಾದ ಎಂ.ಪಿ.ಆನಂದಮೂರ್ತಿ ಮಾತನಾಡಿ, ನಮ್ಮ ಬಯೋ ಡೈವರ್ಸಿಟಿ ಪಾರ್ಕಿನಲ್ಲಿ ಹಲವಾರು ವಿವಿಧ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದೇವೆ. ತುಂಗಾ ಮೆಲ್ದಂಡೆ ಯೋಜನೆಯ ಅಧಿಕಾರಿಗಳು, ರೋಟರಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಜೀವ ವ್ಯವಿದ್ಯ ವನದ ಬೆಳವಣಿಗೆಯಲ್ಲಿ ತುಂಬಾ ಸಹಕಾರ ನೀಡುತ್ತಿದ್ದಾರೆ ಎಂದು ನುಡಿದರು.ಕಾರ್ಯಕ್ರಮದಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಜ್ಞಾನದೀಪ ವಿದ್ಯಾಸಂಸ್ಥೆ, ಇಂಡೋಕಿಡ್ಸ್ ಶಾಲೆ ಮತ್ತು ಜೈನ ಶಾಲೆಯ ಸುಮಾರು 150 ಮಕ್ಕಳು, ಅಧ್ಯಾಪಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಪರಿಸರದ ಆಚರಣೆಯಲ್ಲಿ ಭಾಗವಹಿಸಿದ್ದರು. ತುಂಗಾ ಮೆಲ್ದಂಡೆ ವಲಯದ ಕಾರ್ಯಪಾಲಕ ಇಂಜಿನಿಯರ್ ಕೃಷ್ಣಪ್ರಸಾದ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷರಾದ ರೋ. ಹೆಚ್.ಎನ್.ಎಸ್.ರಾವ್ ರವರು ಗಣ್ಯರನ್ನು ಸ್ವಾಗತಿಸಿದರು. ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರೋ. ಕೆ.ಪಿ.ಶೆಟ್ಟಿ ನಿರೂಪಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ವಸಂತ ಹೋಬಳಿದಾರ್, ಜಿ.ವಿಜಯ ಕುಮಾರ್, ಸರ್ಜಾ ಜಗದೀಶ್, ಎಸ್.ಉಮೇಶ್, ಎಸ್.ಆರ್.ನಾಗರಾಜ್, ಎ.ಎಸ್.ಗುರುರಾಜ, ರವಿ ಕೊಟೋಜಿ, ಕ್ಲಬ್ ಗಳ ಅಧ್ಯಕ್ಷರಾದ ಉಡುಪ, ವೀಣಾ ಸುರೇಶ್, ಸುಂದರ್, ಎ.ಎಸ್.ಶಿವಪ್ರಕಾಶ್, ವಿಶ್ವನಾಥ್ ನಾಯಕ್, ಮುಸ್ತಕ್ ಆಲಿಸಾ, ಅರುಣ್ ದೀಕ್ಷಿತ್, ಜಿ.ಕಿರಣ್ ಕುಮಾರ್, ಹರ್ಷ ಕಾಮತ್ ಹಾಗೂ ರೋಟರಿ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.