ಕನ್ನಡಪ್ರಭ ವಾರ್ತೆ ತಿಕೋಟಾ
ಯಾವತ್ತು ಮನುಷ್ಯನಿಗೆ ಸಿರಿ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಜ್ಞಾನವೊಂದೇ ನಿಜವಾದ ಸಂಪತ್ತು. ಸಿರಿ ಬಂದಾಗ ದೇವರು ಮತ್ತು ಧರ್ಮವನ್ನು ಮರೆಯಬಾರದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ತಾಲೂಕಿನ ಸುಸಲಾದಿ ಗ್ರಾಮದಲ್ಲಿ ನಿರ್ಮಿಸಿದ ಶ್ರೀಮಲ್ಲಿಕಾರ್ಜುನ ದೇವಸ್ಥಾನದ ಉದ್ಘಾಟನೆ ಮತ್ತು ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಅಂಗವಾಗಿ ಜರುಗಿದ ಜನಜಾಗೃತಿ, ಧರ್ಮ ಜಾಗೃತಿ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ದೇವರು ಕೊಟ್ಟ ಕೊಡುಗೆಯನ್ನು ಬೇರೆ ಯಾರು ಕೊಡಲು ಸಾಧ್ಯವಿಲ್ಲ. ನಿಂತ ನೆಲ, ಕುಡಿಯುವ ನೀರು, ಬೀಸುವ ಗಾಳಿಗಳು ದೇವರು ಕೊಟ್ಟ ಅಮೂಲ್ಯ ವರಗಳು. ಉದಾತ್ತ ಮಾನವನ ಜೀವನದಲ್ಲಿ ಒಂದಿಷ್ಟಾದರೂ ಶಿವಜ್ಞಾನ ಸಂಪಾದಿಸಿಕೊಳ್ಳಬೇಕು. ಇಲ್ಲದಿದ್ದರೆ ಗುರು ಕಾರುಣ್ಯ ಪಡೆಯದೇ ಹೋದರೆ ಜೀವನ ವ್ಯರ್ಥವಾಗುತ್ತದೆ. ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಎಂದಿಗೂ ಕಳೆದುಕೊಳ್ಳಬಾರದು. ಜೀವನದ ವಿಕಾಸಕ್ಕೆ ತಂದ ನೀತಿ ನಿಯತ್ತುಗಳ ಪರಿಪಾಲನೆಯೇ ನಿಜವಾದ ಧರ್ಮ. ಮಾನವ ಜೀವನದ ಶ್ರೇಯಸ್ಸಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಶರಣರು ಸಪ್ತ ಸೂತ್ರಗಳನ್ನು ಹೇಳಿದ್ದಾರೆ. ದೇವರು ಮತ್ತು ಧರ್ಮವನ್ನು ತೋರಿಸುವಾತನೇ ನಿಜವಾದ ಗುರು. ಪರಶಿವನ ಸಾಕಾರ ಇನ್ನೊಂದು ರೂಪವೇ ಗುರು. ಅಜ್ಞಾನ ಕಳೆದು ಜ್ಞಾನ ಜ್ಯೋತಿ ಬೆಳಗಿಸುವ ಶಕ್ತಿ ಶ್ರೀ ಗುರುವಿಗೆ ಮಾತ್ರ ಇದೆ. ಮಲ್ಲಿಕಾರ್ಜುನ ದೇವಸ್ಥಾನವನ್ನು ಸುಂದರವಾಗಿ ಕಟ್ಟಿ ಇಂದು ಉದ್ಘಾಟನೆ ಲಿಂಗ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಧರ್ಮ ದೀಪೋತ್ಸವ ಸಂಯೋಜಿಸಿರುವುದು ತಮಗೆ ಸಂತೋಷವನ್ನುಂಟು ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಮನುಷ್ಯ ಯಂತ್ರದಂತೆ ದುಡಿದರೂ ಮನಸ್ಸಿಗೆ ಶಾಂತಿಯಿಲ್ಲ. ಅದಕ್ಕಾಗಿ ಬೆಳೆಯುವ ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡುವ ಕೆಲಸ ಮಾಡಬೇಕಾಗಿದೆ. ಸುಸಲಾದಿ ಗ್ರಾಮದ ಬಹು ದಿನಗಳ ಸಂಕಲ್ಪ ರಂಭಾಪುರಿ ಜಗದ್ಗುರುಗಳ ಶುಭಾಗಮನದೊಂದಿಗೆ ಪೂರ್ಣಗೊಂಡಿದೆ. ಆಗಾಗ ಇಂಥ ಧರ್ಮ ಕಾರ್ಯಗಳು ನಡೆದುಕೊಂಡು ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ ಸಂಜಯ ಮತ್ತು ಚನ್ನಪ್ಪ ಮಾತನಾಡಿ, ವೀರಶೈವ ಧರ್ಮ ಮತ್ತು ಗುರು ಪರಂಪರೆ ಎಂದಿಗೂ ಮರೆಯಬಾರದೆಂದರು. ತಡವಲಗಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಜಗಜೇವಣಿ ಮುಪ್ಪಿನಾರ್ಯ ಶಿವಾಚಾರ್ಯರು ಹಾಗೂ ಗುಡ್ಡಾಪುರದ ಗುರುಪಾದೇಶ್ವರ ಶಿವಾಚಾರ್ಯರು ಉಪಸ್ಥಿತರಿದ್ದರು. ಶಾಸಕ ಗೋಪಿಚಂದ ಪಡೋಳಕರ, ಡಾ.ರವೀಂದ್ರ ಅರಳಿ, ಎಮ್.ಆರ್.ಪಾಟೀಲ, ಚನ್ನಪ್ಪಾ ಹೊರ್ತಿಕರ, ಉಮದಿ ಬಸವರಾಜ ಹಿರೇಮಠ ಅವರನ್ನು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡು ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.ಪ್ರಾತಃಕಾಲದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟಿಸಿದ ಶ್ರೀಗಳು, ಲಿಂಗ ಪ್ರತಿಷ್ಠಾಪನೆ ಮತ್ತು ಕಳಸಾರೋಹಣವನ್ನು ರಂಭಾಪುರಿ ಜಗದ್ಗುರುಗಳು ನೆರವೇರಿಸಿದರು. ಕಾರ್ಯಕ್ರಮದ ಹಿಂದಿನ ದಿನ ಸುಸಲಾದಿ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಭಕ್ತ ಸಮುದಾಯದ ಮಧ್ಯೆ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನ ಉದ್ಘಾಟನೆ ನಿಮಿತ್ಯ 5 ದಿನಗಳ ಕಾಲ ಜೇರಟಗಿಯ ವೇ.ಮಡಿವಾಳೇಶ್ವರ ಶಾಸ್ತ್ರಿಗಳಿಂದ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿತ್ತು.