ಕನ್ನಡಪ್ರಭ ವಾರ್ತೆ ಮಂಗಳೂರು ಖ್ಯಾತ ಕೊಂಕಣಿ ಲೇಖಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಡ್ವಿನ್ ಜೆ. ಎಫ್ ಡಿಸೋಜಾ ಎಂದೇ ಖ್ಯಾತರಾಗಿದ್ದ ಎಡ್ವಿನ್ ಜೋಸೆಫ್ ಫ್ರಾನ್ಸಿಸ್ ಡಿಸೋಜಾ (75) ಗುರುವಾರ ನಗರದಲ್ಲಿ ನಿಧನರಾದರು. ಅವರು ಮಂಗಳೂರಿನ ಸೇಂಟ್ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಹಳೆಯ ವಿದ್ಯಾರ್ಥಿ. ವಾಣಿಜ್ಯದಲ್ಲಿ ಪದವಿ ಮತ್ತು ಕೊಂಕಣಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದು, ಯುನೈಟೆಡ್ ಸ್ಟೇಟ್ಸ್ನ ಬೈಬಲ್ ಸ್ಕೂಲ್ನಿಂದ ಐದು ಆನ್ಲೈನ್ ಡಿಪ್ಲೊಮಾಗಳನ್ನು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಪಡೆದಿದ್ದರು. ಅವರು 33 ಕಾದಂಬರಿ, 100ಕ್ಕೂ ಹೆಚ್ಚು ಸಣ್ಣ ಕಥೆಗಳು, ಅಂಕಣಗಳು, ವಿಡಂಬನೆಗಳನ್ನು ಬರೆದಿದ್ದಾರೆ. ಅವರ ಅನೇಕ ಸಣ್ಣ ಕಥೆಗಳು ಇಂಗ್ಲಿಷ್, ಕನ್ನಡ, ಹಿಂದಿ, ಕಾಶ್ಮೀರಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಅನುವಾದಗೊಂಡಿವೆ. ದುಬೈ ಸೇರಿದಂತೆ 13 ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗೋವಾ ಕೊಂಕಣಿ ಅಕಾಡೆಮಿಯು ಇವರ 450 ಪುಟಗಳ ಕಾದಂಬರಿ ಕಲ್ಲೆಂ ಭಂಗಾರ್ ಅನ್ನು ನಾಗರಿ ಲಿಪಿಯಲ್ಲಿ ಪ್ರಕಟಿಸಿತು. ಈ ಕಾದಂಬರಿಯು ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ 2013ರ ವರ್ಷದ ಅತ್ಯುತ್ತಮ ಪುಸ್ತಕ ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಪ್ರಶಸ್ತಿ, 2013ರ ವರ್ಷದ ಅತ್ಯುತ್ತಮ ಪುಸ್ತಕ ಪ್ರಶಸ್ತಿಯನ್ನು ತಂದುಕೊಟ್ಟಿತು. ಎಡ್ವಿನ್ ಡಿಸೋಜಾ ಅವರು ಫೆಬ್ರವರಿ 1992ರಲ್ಲಿ ಕಾರವಾರದಲ್ಲಿ ನಡೆದ 11 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.