ಬೆಳ್ತಂಗಡಿ: ಮುಂಡಾಜೆಯ ನೂತನ ಸೇತುವೆ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಹಿಂದೆ ಇದ್ದ ಬಾವಿಯನ್ನು ಮುಚ್ಚಿ ರಸ್ತೆ ನಿರ್ಮಿಸಲಾಗಿದೆ. ಇದೀಗ ರಸ್ತೆ ಮಧ್ಯ ಭಾಗದಲ್ಲಿ ಅದು ತೆರೆದುಕೊಳ್ಳುವ ಲಕ್ಷಣಗಳು ಗೋಚರಿಸಿದ್ದು, ವಾಹನ ಸವಾರರಿಗೆ ಆತಂಕ ಎದುರಾಗಿದೆ.ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಸ್ಥಳೀಯ ಮನೆಯನ್ನು ಕೆಡವಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಮನೆಯ ಬಾವಿ ಸಮರ್ಪಕವಾಗಿ ಮುಚ್ಚದೆ ಮೇಲ್ಬಾಗದಲ್ಲಿ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ಈ ಪರಿಸ್ಥಿತಿ ಎದುರಾಗಿದೆ ಎನ್ನುವುದು ಸ್ಥಳೀಯರ ಆರೋಪ.
ತೆರೆದುಕೊಂಡ ಚರಂಡಿ:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಂಗವಾಗಿ ಪೇಟೆ ಪ್ರದೇಶಗಳಲ್ಲಿ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಈ ಚರಂಡಿಗಳನ್ನು ಹಲವೆಡೆ ಮುಚ್ಚದೆ ಹಾಗೆ ಬಿಡಲಾಗಿದೆ. ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸಲು ಕೆಲವೆಡೆ ಬಾಕಿ ಇದ್ದು, ಇದು ಅಪಾಯಕಾರಿಯಾಗಿದೆ.ಈ ಚರಂಡಿಗಳ ಮೇಲೆ ಫುಟ್ ಪಾತ್ ಕೂಡ ಇದೆ. ಇದರ ಮೂಲಕವೇ ಜನ ಸಂಚಾರ ನಡೆಯುತ್ತಿದೆ. ಈಗಾಗಲೇ ಹಲವರು ಈ ಚರಂಡಿಗಳಿಗೆ ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿವೆ. ಹಲವು ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅಗತ್ಯ ಸ್ಥಳಗಳಲ್ಲಿ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸರುವುದು ವಿಪರ್ಯಾಸವಾಗಿದೆ.