ಶಿವಾನಂದ ಗೊಂಬಿ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಏನು ಮಾಡುತ್ತಿದೆ? ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಿ ದಬಾಯಿಸಲು ಮಾತ್ರ ಸೀಮಿತವೇ? ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದರೂ ತಡೆಗಟ್ಟಲು ಯಾಕೆ ಸಾಧ್ಯವಾಗಲಿಲ್ಲ?
ಗೃಹಲಕ್ಷ್ಮಿ ಯೋಜನೆ ಹಣ ಮೃತರ ಖಾತೆ ಹಾಗೂ ತೆರಿಗೆ ಪಡೆದವರ ಖಾತೆಗೂ ಜಮೆ ಆಗುತ್ತಿರುವುದರಿಂದ ಪ್ರಜ್ಞಾವಂತರಿಂದ ಕೇಳಿ ಬರುತ್ತಿರುವ ಪ್ರಶ್ನೆಗಳಿವು.ರಾಜ್ಯ ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗಲಿ, ಅರ್ಹರಿಗೆ ಯೋಜನೆ ತಲುಪಲಿ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಗ್ಯಾರಂಟಿ ಅನುಷ್ಠಾನ ಸಮಿತಿ ರಚಿಸಿದೆ.
ಇವರು ಆಯಾ ತಿಂಗಳಲ್ಲಿ ಗ್ಯಾರಂಟಿ ಸ್ಕೀಂನ ಪರಿಸ್ಥಿತಿ ಏನಾಗಿದೆ? ಎಲ್ಲಿಯಾದರೂ ದುರುಪಯೋಗ ಆಗುತ್ತಿದೆಯೋ ಹೇಗೆ? ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳೇನು? ಜತೆಗೆ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಮುಟ್ಟುತ್ತದೆಯೋ ಇಲ್ವೋ ಎಂಬುದನ್ನು ಪರಿಶೀಲಿಸಬೇಕು. ಅದರಂತೆ ಪ್ರತಿ ತಿಂಗಳು ಇವರು ಸಭೆ ನಡೆಸುತ್ತಾರೆ. ಆದರೆ, ಅಲ್ಲಿ ಯೋಜನೆಗಳಿಗೆ ತಾವೇ ಸುಪ್ರೀಂಗಳಂತೆ ವರ್ತಿಸುತ್ತಾರೆ. ಎಂಎಲ್ಎ, ಸಚಿವರಂತೆ ಅಧಿಕಾರಿಗಳನ್ನು ದಬಾಯಿಸುತ್ತಾರೆ. ಹೀಗಾಗಿ ಗ್ಯಾರಂಟಿ ಅನುಷ್ಠಾನದ ಸಭೆ ಕೂಡ ಕೆಡಿಪಿ ಸಭೆಗಳಂತಾಗುತ್ತದೆಯೇ ಹೊರತು ದುರುಪಯೋಗ ತಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ಬಹಿರಂಗ ಸತ್ಯ.
ಇದೀಗ ಸರ್ಕಾರವೇ ದುರುಪಯೋಗ ತಡೆಯಲು ಇ-ಕೆವೈಸಿ, ಬಯೋಮೆಟ್ರಿಕ್ ಪದ್ಧತಿ ಜಾರಿಗೊಳಿಸುತ್ತಿದೆ. ಹಾಗಾದರೆ 3 ವರ್ಷದಿಂದ ಅನುಷ್ಠಾನ ಸಮಿತಿ ಮಾಡಿರುವ ಕೆಲಸಗಳೇನು? ಬರೀ ಅಧಿಕಾರಿಗಳನ್ನು ದಬಾಯಿಸಲು ಸರ್ಕಾರ ನೇಮಿಸಿದೆಯೇ? ಸರ್ಕಾರದಿಂದ ಗೌರವಧನ ಪಡೆದು ದುರುಪಯೋಗ ತಡೆಯುವಲ್ಲಿ ಸಾಧ್ಯವಾಗದಿದ್ದರೆ ಮತ್ತೇಕೆ ಬೇಕು ಈ ಸಮಿತಿಗಳು? ಎಂಬೆಲ್ಲ ಪ್ರಶ್ನೆಗಳನ್ನು ಪ್ರಜ್ಞಾವಂತರು ಕೇಳುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಲ್ಲಿ ಆಗುತ್ತಿರುವ ದುರುಪಯೋಗದ ಬಗ್ಗೆ ನೋಡಿದರೆ ಅನುಷ್ಠಾನ ಸಮಿತಿಗಳು ಇಷ್ಟು ಏನು ಮಾಡಿದವು ಎಂಬ ಪ್ರಶ್ನೆ ಕಾಡುತ್ತಿದೆ. ಈ ರೀತಿ ಸಮಿತಿ ಮಾಡುವ ಬದಲು ಅವುಗಳನ್ನು ಕೈ ಬಿಟ್ಟು ಶಾಸಕರಿಗೆ, ಸಚಿವರಿಗೆ ಜವಾಬ್ದಾರಿ ನೀಡಿದರೆ ಒಳಿತು ಎಂದೆನಿಸುತ್ತದೆ.