ಕನ್ನಡಪ್ರಭ ವಾರ್ತೆ ಕೋಲಾರಮಂತ್ರಿಯಾದವರು ಕೆಲಸ ಮಾಡಬೇಕೇ ಹೊರತು, ನನಗೆ ಅದೇ ಖಾತೆ ಬೇಕು ಇದೇ ಖಾತೆ ಬೇಕು ಎಂದು ಪಟ್ಟು ಹಿಡಿಯುವುದು ತಪ್ಪು. ಕೆಲಸ ಮಾಡಲು ಯಾವ ಖಾತೆಯಾದರೂ ಒಂದೇ ಎಂದು ಶಾಸಕ ಕೊತ್ತೂರು ಮಂಜುನಾಥ್ ಆಭಿಪ್ರಾಯಪಟ್ಟರು. ನಗರದ ಜಿಪಂ ಸಭಾಂಗಣದಲ್ಲಿ ದಿಶಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಸಣ್ಣಪುಟ್ಟ ವಿಚಾರಗಳು ಇರುತ್ತವೆ, ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ. ಇಷ್ಟು ದಿನ ಇದ್ದ ಎಲ್ಲಾ ಮಂತ್ರಿಗಳ ಪೈಕಿ ರಾಮಲಿಂಗಾರೆಡ್ಡಿ ಅವರು ಅತ್ಯುತ್ತಮ ಸಚಿವರು. ಅವರಿಗೆ ಗನ್ಮ್ಯಾನ್ ಆಗಲಿ, ಪಿಎ ಆಗಲಿ ಇಲ್ಲ. ಯಾರು ಫೋನ್ ಮಾಡಿದರೂ ಶೇ.೧೦೦ರಷ್ಟು ಅವರೇ ಕರೆ ಸ್ವೀಕರಿಸುತ್ತಾರೆ. ಒಂದು ವೇಳೆ ಬ್ಯುಸಿ ಇದ್ದರೂ ಖುದ್ದಾಗಿ ಅವರೇ ಕಾಲ್ಬ್ಯಾಕ್ ಮಾಡುತ್ತಾರೆ. ಅವರು ಅತ್ಯಂತ ಬುದ್ಧಿವಂತ ಸಚಿವರಾಗಿದ್ದು, ಕಳೆದ ರಾತ್ರಿ ಸಿಎಂ ಶಿವಕುಮಾರ್ ಮನವೊಲಿಸಿದ್ದಾರೆ ಎಂದರು.ಕೋಲಾರ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲೆಯ ನಾಲ್ಕೂ ಜನ ಶಾಸಕರು ಒಗ್ಗಟ್ಟಾಗಿ ಹೈಕಮಾಂಡ್ಗೆ ಪತ್ರ ಬರೆದು ಗಮನ ಸೆಳೆದಿದ್ದೇವೆ. ಈ ಬಾರಿ ಜಿಲ್ಲೆಗೆ ಸಚಿವ ಸ್ಥಾನ ಸಿಗುವ ಸಂಪೂರ್ಣ ಭರವಸೆ ಇದೆ. ನಮ್ಮ ನಾಲ್ಕು ಜನ ಶಾಸಕರಲ್ಲಿ ಯಾರಿಗೆ ಕೊಟ್ಟರೂ ನಮಗೆ ಯಾವುದೇ ತಕರಾರಿಲ್ಲ, ಎಲ್ಲರಿಗೂ ಸಮ್ಮತಿ ಇದೆ. ಸೀನಿಯಾರಿಟಿ ಮೇಲೆ ಎಸ್.ಎನ್. ನಾರಾಯಣಸ್ವಾಮಿ, ಜನರಲ್ ಕೋಟಾದಲ್ಲಿ ನಂಜೇಗೌಡ ಹಾಗೂ ಅಲೆಮಾರಿ ಕೋಟಾದಲ್ಲಿ ನಾನಿದ್ದೇನೆ ಎಂದರು. ಅಲ್ಲದೆ, ಕಳೆದ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಬಾರಿಯೂ ಅವರಿಗೆ ಕೊಡಬೇಡಿ ಎಂದು ನಾವು ಹೇಳುತ್ತಿಲ್ಲ, ಆದರೆ ಕೋಲಾರಕ್ಕೂ ಸಚಿವ ಸ್ಥಾನ ನೀಡಿ ಎನ್ನುವುದು ನಮ್ಮ ಒತ್ತಾಯ ಎಂದರು.