5 ವರ್ಷ ಅಧಿಕಾರ ನಡೆಸಿದ ಜೆಡಿಎಸ್ ಯಜಮಾನರು ಏನು ಮಾಡುತ್ತಿದ್ದರು..?

KannadaprabhaNewsNetwork |  
Published : Dec 15, 2024, 02:01 AM IST
14ಕೆಎಂಎನ್ ಡಿ23 | Kannada Prabha

ಸಾರಾಂಶ

ಕಳೆದ ಎಂಟು ವರ್ಷಗಳ ಹಿಂದೆ ನಾನು ಶಂಕುಸ್ಥಾಪನೆ ಮಾಡಿದ್ದ ಹಲವು ಕಟ್ಟಡಗಳ ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳನ್ನು ನಾನೇ ಪೂರ್ಣಗೊಳಿಸಿ ಉದ್ಘಾಟಿಸುತ್ತಿದ್ದೇನೆ. 5 ವರ್ಷ ಅಧಿಕಾರ ನಡೆಸಿದ ಜೆಡಿಎಸ್‌ನ ಯಜಮಾನರು ಏನು ಮಾಡುತ್ತಿದ್ದರು...?

ಕನ್ನಡಪ್ರಭ ವಾರ್ತೆ ನಾಗಮಂಗಲ

ಕಳೆದ ಎಂಟು ವರ್ಷಗಳ ಹಿಂದೆ ನಾನು ಶಂಕುಸ್ಥಾಪನೆ ಮಾಡಿದ್ದ ಹಲವು ಕಟ್ಟಡಗಳ ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳನ್ನು ನಾನೇ ಪೂರ್ಣಗೊಳಿಸಿ ಉದ್ಘಾಟಿಸುತ್ತಿದ್ದೇನೆ. 5 ವರ್ಷ ಅಧಿಕಾರ ನಡೆಸಿದ ಜೆಡಿಎಸ್‌ನ ಯಜಮಾನರು ಏನು ಮಾಡುತ್ತಿದ್ದರು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.

ತಾಲೂಕಿನ ಕೋಟೆಬೆಟ್ಟದ ಶ್ರೀಕಂಬದನರಸಿಂಹಸ್ವಾಮಿ ದೇವಾಲಯದ ಬಳಿ ಪ್ರವಾಸೋದ್ಯಮ ಇಲಾಖೆಯ 2 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡ ಉದ್ಘಾಟಿಸಿ ಮಾತನಾಡಿ, ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೋಟಬೆಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂಬುದು ನನ್ನ ಕನಸಾಗಿತ್ತು ಎಂದರು.

ಅದಕ್ಕಾಗಿಯೇ ಕಳೆದ 2016ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಾತ್ರಿ ನಿವಾಸ ಕಟ್ಟಡಕ್ಕೆ ಸೇರಿದಂತೆ ತಾಲೂಕಿನ ಕೆ.ಮಲ್ಲೇನಹಳ್ಳಿ, ಬೋಗಾದಿ, ಹುಲಿಕೆರೆ ಹಾಗೂ ತುಪ್ಪದಮಡು ಸಮೀಪ ವಿದ್ಯಾರ್ಥಿ ನಿಲಯಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದರು.

ಕಳೆದ 5 ವರ್ಷದಲ್ಲಿ ಹೊಸ ಕಟ್ಟಡಗಳನ್ನು ಮಂಜೂರು ಮಾಡಿಸುವುದಿರಲಿ, ನಾನು ಶಂಕುಸ್ಥಾಪನೆ ಮಾಡಿದ್ದ ಕಟ್ಟಡಗಳಲ್ಲಿ ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕೆಲಸಗಳಿಗೆ ಕೊರತೆಯಿದ್ದ ಅನುದಾನ ಮಂಜೂರು ಮಾಡಿಸಿ ಅವುಗಳನ್ನು ಉದ್ಘಾಟಿಸಲು ಅಂದಿನ ಶಾಸಕರಿಗೆ ಆಗಿಲ್ಲ. ಅಂದು ಎಚ್.ಡಿ.ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಕೂಡ ಕೋಟೆಬೆಟ್ಟದ ಯಾತ್ರಿ ನಿವಾಸ ಕಟ್ಟಡದ ಕಾಂಪೌಂಡ್‌ಗೆ ಅನುದಾನ ನೀಡಲಿಲ್ಲ ಎಂದು ಕುಟುಕಿದರು.

ಕ್ಷೇತ್ರದ ಕಂಬದನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೋಗುವ ಬೆಟ್ಟದ ಮೇಲಿನ ರಸ್ತೆ ಅಭಿವೃದ್ಧಿ ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು ನಾನೆ. ತಾಲೂಕಿನಲ್ಲಿ ನಾನು ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದ್ದರೂ ಕೂಡ ಹಳ್ಳಿಗಳಲ್ಲಿ ರೈತರು ದನಕರುಗಳ ವ್ಯಾಪಾರ ಮಾಡುವ ಸಮಯದಲ್ಲಿ ಹಲ್ಲು ಹಿಡಿದು ನೋಡುವಂತೆ ಜನರು ನನ್ನನ್ನು ಪರೀಕ್ಷೆ ಮಾಡುವುದನ್ನು ಬಿಟ್ಟಿಲ್ಲ ಎಂದರು.

ದೇವಲಾಪುರ ಹೋಬಳಿಯ ಹಲವು ರಸ್ತೆ ಅಭಿವೃದ್ಧಿಗೆ 30 ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದೇನೆ. ಇನ್ನೂ 100 ಕೋಟಿ ಕೊಟ್ಟರೂ ಹಾಳಾಗಿರುವ ರಸ್ತೆಗಳನ್ನು ತಕ್ಷಣಕ್ಕೆ ಅಭಿವೃದ್ಧಿ ಪಡಿಸಲು ಆಗುವುದಿಲ್ಲ. ಹಾಗಾಗಿ ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯ ಕ್ರಮವಹಿಸಲಾಗುವುದು. ತಾಲೂಕಿನ ಜನರು ಯಾರ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಕೆಆರ್‌ಐಡಿಎಲ್ ಸಂಸ್ಥೆಯವರು ಯಾತ್ರಿ ನಿವಾಸ ನೂತನ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಸ್ಥಳೀಯ ಕಂಬದ ನರಸಿಂಹಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನವರು ಸರ್ಕಾರಕ್ಕೆ ಕಟ್ಟಬೇಕಿರುವ ಹಣವನ್ನು ಭರಿಸಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತೇವೆಂದು ಭರವಸೆ ನೀಡಿದರೆ ಈ ಯಾತ್ರಿ ನಿವಾಸ ಕಟ್ಟಡವನ್ನು ಒಂದು ವರ್ಷದ ಅವಧಿಗೆ ಟ್ರಸ್ಟ್‌ಗೆ ವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುತ್ತೇನೆ. ನಂತರ ಮೂರು ಅಥವಾ ಐದು ವರ್ಷದ ಅವಧಿಗೆ ನವೀಕರಿಸಿಕೊಳ್ಳಬಹುದು ಎಂದರು.

ಈ ವೇಳೆ ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ಕೆಆರ್‌ಐಡಿಎಲ್ ಇಇ ಸೋಮಶೇಖರ್, ಎಇಇ ಚೈತ್ರ, ಎಇಗಳಾದ ಶರತ್, ರೇಖೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಿನೇಶ್, ಪುರಸಭೆ ಸದಸ್ಯ ಸಂಪತ್‌ಕುಮಾರ್, ನರಸಿಂಹಮೂರ್ತಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ