ಹಳ್ಳದಲ್ಲಿ ಗೋದಿ ಚೀಲ ಪತ್ತೆ, ಸೂಕ್ತ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Oct 05, 2025, 01:01 AM IST
ಪೋಟೊ4ಕೆಎಸಟಿ1: ಕುಷ್ಟಗಿ ಪಟ್ಟಣದ ಸಮೀಪದ ಕುರುಬನಾಳ ಹಳ್ಳದಲ್ಲಿ ಕಂಡು ಬಂದಿರುವ ಕುಷ್ಟಗಿ ತಾಲೂಕು ಎಮ್ಎಸ್ಪಿಟಿಎಸ್ ಕೇಂದ್ರಕ್ಕೆ ಸೇರಿರುವ ಗೋಧಿ ಚೀಲಗಳು. | Kannada Prabha

ಸಾರಾಂಶ

ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಕುಷ್ಟಗಿ: ತಾಲೂಕಿನ ಎಂಎಸ್‌ಪಿಟಿಎಸ್‌ (ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಪೂರಕ ಆಹಾರ ತಯಾರಿಕಾ ಕೇಂದ್ರ) ಕೇಂದ್ರಕ್ಕೆ ಸೇರಿದ ಎರಡು ಚೀಲ ಗೋದಿ ಪಟ್ಟಣದ ಸಮೀಪದ ಕುರುಬನಾಳ ಹಳ್ಳದಲ್ಲಿ ಪತ್ತೆಯಾಗಿದ್ದು, ಇದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕುರುಬನಾಳ ರಸ್ತೆಯಲ್ಲಿನ ಹಳ್ಳವೊಂದರಲ್ಲಿ ಎರಡು ಚೀಲ ಗೋದಿ ಪತ್ತೆಯಾಗಿದ್ದಲ್ಲದೆ ಹಳ್ಳದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರವಾಗಿರುವ ಈ ಗೋದಿ ಚೀಲಗಳು ಈ ಹಳ್ಳಕ್ಕೆ ಹೇಗೆ ಬಂತು ಯಾರು ತಂದು ಹಾಕಿದ್ದಾರೆ ಎಂಬ ಅನುಮಾನ ಕಾಡುತ್ತಿದ್ದು, ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಸರ್ಕಾರ ಮಹಿಳಾ ಮತ್ತು ಮಕ್ಕಳ ಪೌಷ್ಟಿಕತೆಯ ಸಲುವಾಗಿ ವಿತರಿಸಿದ ಆಹಾರವಾಗಿರುವ ಈ ಗೋದಿ ಮೂಟೆ ಸಮೇತ ಹಳ್ಳದಲ್ಲಿ ಎಸೆದು ಹೋಗಲು ಕಾರಣವೇನು. ಈ ಗೋದಿ ಚೀಲಗಳ ಮೇಲೆ ಕುಷ್ಟಗಿ ತಾಲೂಕು ಎಂಎಸ್ಪಿಟಿಸಿ ಎಂದು ಸ್ಪಷ್ಟವಾಗಿ ನಮೂದಿಸಿದ್ದು, ಇಂತಹ ಕೆಲಸ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಿದೆ.

ವಿಡಿಯೋ ವೈರಲ್: ಕುಷ್ಟಗಿ ಪಟ್ಟಣದ ನಿವಾಸಿಗಳು ವಾಯುವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಸಮೀಪದ ಕುರುಬನಾಳ ಹಳ್ಳದಲ್ಲಿ ಈ ಗೋದಿ ಚೀಲಗಳು ಕಂಡು ಬಂದಿದ್ದು, ಗೋದಿ ಚೀಲ ಹಾಗೂ ಹಳ್ಳದಲ್ಲಿ ಹರಿಯುವ ಗೋದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ವೈರಲ್ ಆಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಅಂಗನವಾಡಿ ಕೇಂದ್ರಗಳಿಗೆ ಗೋದಿ ಪೂರೈಕೆಯಾಗುತ್ತಿತ್ತು, ಇತ್ತೀಚಿಗೆ ಪೌಡರ್ ರೂಪದಲ್ಲಿ ಆಹಾರ ತಯಾರಿಸುವ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿದ್ದು, ಈ ಗೋದಿ ಚೀಲಗಳು ಈಗ ಎಲ್ಲಿಂದ ಬಂದವು ಎಂಬದನ್ನು ಇಲಾಖೆಯ ಅಧಿಕಾರಿಗಳು ಹಾಗೂ ಎಂಎಸ್ಪಿಟಿಎಸ್ ಕೇಂದ್ರದವರು ಉತ್ತರಿಸಬೇಕಾಗಿದೆ.

ಆಹಾರ ಇಲಾಖೆ ಅಧಿಕಾರಿಗಳ ಭೇಟಿ: ಹಳ್ಳದಲ್ಲಿ ಎಸೆಯಲಾಗಿರುವ ಗೋದಿಯ ವಿಷಯ ತಿಳಿದು ಸ್ಥಳಕ್ಕೆ ಆಹಾರ ಇಲಾಖೆ ಶಿರಸ್ತೆದಾರ ಚನ್ನಬಸಪ್ಪ ಹಾಗೂ ಆಹಾರ ನಿರೀಕ್ಷಕ ರಮೇಶ ತಾಳಕೇರಿ ಭೇಟಿ ನೀಡಿ ಗೋದಿ ಸಂಗ್ರಹಿಸುವ ಕೆಲಸ ಮಾಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಅಂಗನವಾಡಿ ಕೇಂದ್ರಗಳಿಗೆ ಪೌಡರ್ ರೂಪದಲ್ಲಿಯೆ ಆಹಾರ ಸರಬರಾಜು ಆಗುತ್ತಿದೆ. ಹಳ್ಳದಲ್ಲಿ ಎಸೆಯಲಾಗಿರುವ ಗೋದಿ ಕುರಿತು ಎಂಎಸ್ಪಿಟಿಎಸ್ ಕೇಂದ್ರದವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು ಉತ್ತರ ನೀಡದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಕ್ರಮಕ್ಕೆ ಮುಂದಾಗುತ್ತೇನೆದೆಂದು ಕುಷ್ಟಗಿ ಸಿಡಿಪಿಒ ಯಲ್ಲಮ್ಮ ಹಂಡಿ ತಿಳಿಸಿದ್ದಾರೆ.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’