ಕನ್ನಡಪ್ರಭ ವಾರ್ತೆ ಆಲಮಟ್ಟಿ
ಜಲಾಶಯ ಭರ್ತಿ ಹಂತ ತಲುಪಿದ್ದರೂ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಸಲ್ಲಿಸುವ ಬಾಗಿನ ಅರ್ಪಣೆ ಮಾತ್ರ ಇನ್ನೂ ನಡೆದಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಆಲಮಟ್ಟಿಗೆ ಆಗಮಿಸಿ ಕೃಷ್ಣೆಗೆ ಬಾಗಿನ ಅರ್ಪಿಸಬೇಕು ಎಂಬ ಒತ್ತಾಯ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಬಲವಾಗಿ ಕೇಳಿಬರುತ್ತಿದೆ.
ಕಾವೇರಿಗೆ ಸಿಗುವಷ್ಟೇ ಗೌರವ ಕೃಷ್ಣೆಗೂ ಸಿಗಲಿ:ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನಾಡಿಯಾಗಿದ್ದು, ಲಕ್ಷಾಂತರ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ನೀಡುತ್ತಿದೆ. ಪ್ರತಿ ವರ್ಷ ಜಲಾಶಯ ಭರ್ತಿಯಾದಾಗ ಬಾಗಿನ ಅರ್ಪಿಸುವ ಪರಂಪರೆ ಇದೆ. 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಈ ಪರಂಪರೆ ಆರಂಭಿಸಿದ್ದರು.ಆದರೆ, ಕಾವೇರಿ ಜಲಾಶಯಗಳಿಗೆ ನೀಡುವ ಮಹತ್ವವನ್ನು ಕೃಷ್ಣಾ ನದಿಗೆ ನೀಡಲಾಗುತ್ತಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿದೆ.ರೈತ ಸಂಘಗಳ ಆಗ್ರಹ:ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೆಆರ್ಎಸ್ ಜಲಾಶಯ ಭರ್ತಿಯಾದಾಗ ಮುಖ್ಯಮಂತ್ರಿ ಯಾರೇ ಆಗಿದ್ದರೂ ಬಾಗಿನ ಅರ್ಪಿಸುವ ಸಂಪ್ರದಾಯವಿದೆ. ಅದೇ ರೀತಿಯಲ್ಲಿ ಆಲಮಟ್ಟಿಯಲ್ಲೂ ಕೃಷ್ಣೆಗೆ ಗೌರವ ಸಲ್ಲಿಸುವ ಪರಂಪರೆ ಮುಂದುವರಿಯಬೇಕು ಎಂದು ಆಗ್ರಹಿಸಿದರು.
ಯುಕೆಪಿ ಪ್ರಗತಿ ಪರಿಶೀಲನೆಗೆ ಬೇಡಿಕೆ:ಬಾಗಲಕೋಟೆ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಅರವಿಂದ ಮುಚಖಂಡಿ, ಮುಖ್ಯಮಂತ್ರಿ ಅವರು ಆಲಮಟ್ಟಿಗೆ ಬಂದಾಗ ಕೆಬಿಜೆಎನ್ಎಲ್ ಹಾಗೂ ಯುಕೆಪಿ ಮೂರನೇ ಹಂತ, ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗಳ ಪ್ರಗತಿ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೃಷ್ಣಾ ನದಿ ಇಲ್ಲಿನ ಜನರ ಬದುಕು, ಕೃಷಿ ಮತ್ತು ಆರ್ಥಿಕತೆಯೊಂದಿಗೆ ಬೆಸೆದುಕೊಂಡಿರುವುದರಿಂದ ಬಾಗಿನ ಅರ್ಪಣೆಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡದೆ, ಸರ್ಕಾರದ ಬದ್ಧತೆ ವ್ಯಕ್ತಪಡಿಸುವ ಕಾರ್ಯಕ್ರಮವಾಗಿ ಆಯೋಜಿಸಬೇಕು ಎಂಬ ಒತ್ತಾಯ ಬಲಗೊಳ್ಳುತ್ತಿದೆ.