ಸೋಮರಡ್ಡಿ ಅಳವಂಡಿ ಕೊಪ್ಪಳ
ಕಳೆದೆರಡು ವರ್ಷಗಳಿಂದ ಈ ಬಗ್ಗೆ ಚಕಾರ ಎತ್ತುತ್ತಲೇ ಇಲ್ಲ. ಅಷ್ಟೇ ಅಲ್ಲ ಭೂ ಸ್ವಾಧೀನಕ್ಕಾಗಿ ಕೆಕೆಆರ್ ಡಿಬಿಯಿಂದ ನೀಡಲಾಗಿದ್ದ ಅನುದಾನ ವಾಪಸ್ ಪಡೆದ ಮೇಲೆ ವಿಮಾನ ನಿಲ್ದಾಣ ಯೋಜನೆ ಜಾರಿಗೆ ಎಳ್ಳು ನೀರು ಬಿಟ್ಟಂತೆ ಕಾಣುತ್ತಿದೆ.
ಕೊಪ್ಪಳ ಬಳಿ ಈಗಾಗಲೇ ಇರುವ ಖಾಸಗಿ ಎಂಎಸ್ ಪಿಎಲ್ ವಿಮಾನ ತಂಗುದಾಣದಲ್ಲಿಯೇ ಉಡಾನ್ ಜಾರಿ ಮಾಡಿ ವಿಮಾನ ಸಂಚಾರಕ್ಕೆ ಮುಂದಾಗಲಾಗಿತ್ತು. ಆದರೆ ಎಂಎಸ್ ಪಿಎಲ್ ಕಂಪನಿಯ ಅಸಹಕಾರದಿಂದ ಅದು ಜಾರಿಯಾಗಲೇ ಇಲ್ಲ.ಇದಾದ ಮೇಲೆ ವಿಮಾನ ನಿಲ್ದಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿತು. ಕಳೆದ ಸರ್ಕಾರದ ಅವಧಿಯಲ್ಲಿ ಭೂಸ್ವಾಧೀನಕ್ಕೆ ಕೆಕೆಆರ್ ಡಿಬಿಯಲ್ಲಿ ಅನುದಾನ ನೀಡಲಾಯಿತು. ದುರಂತ ಎಂದರೆ ಸರ್ಕಾರ ಬದಲಾದ ತಕ್ಷಣ ಭೂ ಸ್ವಾಧೀನಕ್ಕೆ ನಿಗದಿಯಾಗಿದ್ದ ಅನುದಾನ ವಾಪಸ್ ಪಡೆಯಲಾಯಿತು. ಅದಾದ ನಂತರ ವಿಮಾನ ನಿಲ್ದಾಣ ಯೋಜನೆಯನ್ನೇ ಸಚಿವರು, ಶಾಸಕರು ಮರೆತೇ ಬಿಟ್ಟರು.
ಕೆಕೆಆರ್ ಡಿಬಿಯಲ್ಲಿ ಭೂ ಸ್ವಾಧೀನಕ್ಕೆ ನಿಗದಿಯಾಗಿದ್ದ ಅನುದಾನ ವಾಪಸ್ ಪಡೆದು ಬೇರೆ ಕಾಮಗಾರಿಗಳಿಗೆ ಬಳಕೆ ಮಾಡುವಲ್ಲಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಪ್ರಮುಖ ಪಾತ್ರ ವಹಿಸಿದರು. ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಪಡೆಯುವ ಕುರಿತು ಹೇಳಿದರಾದರೂ ಇದುವರೆಗೂ ಅದ್ಯಾವುದು ಜಾರಿಯಾಗಲೇ ಇಲ್ಲ.
ಷಡ್ಯಂತ್ರ ನಡೆದಿದೆಯೇ?:ಕೊಪ್ಪಳ ಬಳಿ ವಿಮಾನ ನಿಲ್ದಾಣ ಬರದಂತೆ ತಡೆಯುವ ಷಡ್ಯಂತ್ರವೂ ಇದೆ ಎನ್ನುವ ಮಾತು ಇದೆ. ಅಂಜನಾದ್ರಿ ಮತ್ತು ಹಂಪಿಗೆ ತೀರಾ ಹತ್ತಿರವಾಗುವುದರಿಂದ ಪಕ್ಕದ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಮಹತ್ವ ಕಡಿಮೆಯಾಗಬಹುದು ಎನ್ನುವ ಕಾರಣಕ್ಕಾಗಿಯೇ ತಡೆಯಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಕೊಪ್ಪಳ ಬಳಿ ವಿಮಾನ ನಿಲ್ದಾಣ ಇನ್ನೇನು ನಿರ್ಮಾಣವಾಗುತ್ತದೆ ಎನ್ನುವಷ್ಟರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ನನೆಗುದಿಗೆ ಬಿದ್ದಿತು. ಹೀಗಾಗಿ, ಈಗ ಹೋರಾಟ ರೂಪಿಸುವುದೊಂದೇ ಬಾಕಿಯಿದೆ ಎಂದು ವಿಮಾನ ನಿಲ್ದಾಣ ಹೋರಾಟ ಸಮಿತಿ ಸಂಚಾಲಕ ಆರ್.ಬಿ.ಪಾನಘಂಟಿ ತಿಳಿಸಿದ್ದಾರೆ.