ಶಹಾಬಾದ್‌- ಫರ್ತಾಬಾದ್‌- ಜೇವರ್ಗಿ ರಸ್ತೆ ದುರಸ್ತಿ ಯಾವಾಗ?

KannadaprabhaNewsNetwork |  
Published : Jul 28, 2025, 12:30 AM IST
ಚಿತ್ರ ಸುದ್ದಿ ಶಹಾಬಾದ್‌ 1, ಶಹಾಬಾದ್‌ 3 ಮತ್ತು ಶಾಬಾದ್‌ 4ಶಹಾಬಾದಿಂದ ಜೇವರ್ಗಿ ಹೋಗುವ ರಸ್ತೆಯಲ್ಲಿ ಬೃಹತ್ ಆಕಾರದ ಗುಂಡಿಯಲ್ಲಿ ಒಂದೆ ಸ್ಥಳದಲ್ಲಿ ಲಾರಿಗಳು ಸಿಕ್ಕಿ ಬಿದ್ದಿರುವುದು . | Kannada Prabha

ಸಾರಾಂಶ

ರಾಜ್ಯ ಹೆದ್ದಾರಿ 150ರಲ್ಲಿ ಶಹಾಬಾದ್‍ನಿಂದ ಫರ್ತಾಬಾದ್‍ಗೆ ಸಂಪರ್ಕಿಸುವ 12ಕಿ.ಮೀ ರಸ್ತೆ ಯುದ್ದಕ್ಕೂ 3ರಿಂದ 4ಅಡಿ ತಗ್ಗುಗಳು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ರಚನೆಯಾಗಿ ಅಪಾಯಕಾರಿ ಸ್ಥಿತಿ ತಲುಪಿ ಶಿಥಿಲಗೊಂಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ/ಶಹಾಬಾದ್

ರಾಜ್ಯ ಹೆದ್ದಾರಿ 150ರಲ್ಲಿ ಶಹಾಬಾದ್‍ನಿಂದ ಫರ್ತಾಬಾದ್‍ಗೆ ಸಂಪರ್ಕಿಸುವ 12ಕಿ.ಮೀ ರಸ್ತೆ ಯುದ್ದಕ್ಕೂ 3ರಿಂದ 4ಅಡಿ ತಗ್ಗುಗಳು ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ರಚನೆಯಾಗಿ ಅಪಾಯಕಾರಿ ಸ್ಥಿತಿ ತಲುಪಿ ಶಿಥಿಲಗೊಂಡಿದೆ.

ಹೀಗಾಗಿ, ಈ ರಸ್ತೆ ಬಳಕೆದಾರರು, ವಾಹನ ಸವಾರರು, ಪ್ರಯಾಣಿಕರಿಗೆ ಈ ರಸ್ತೆ ಸವಾಲು ಒಡ್ಡಿದೆ. ಗಂಭೀರ ಅಪಾಯವನ್ನುಂಟುಮಾಡುವ ಹಾಗೂ ದೈನಂದಿನ ಸಾರಿಗೆಗೆ ಅಡ್ಡಿಯಾಗಿದ್ದರೂ ಈ ರಸ್ತೆ ದುರಸ್ತಿಗೆ ಜನನಾಯಕರು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ತಾತ್ಕಾಲಿಕ ಪ್ಯಾಚ್‍ವರ್ಕ್ ಹೊರತುಪಡಿಸಿದರೆ ಯಾವುದೇ ಶಾಶ್ವತ ಪರಿಹಾರ ನೀಡಿಲ್ಲ.

ಇತ್ತೀಚಿನ ಭಾರಿ ಮಳೆಯಿಂದಾಗಿ ಈ ರಸ್ತೆ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಉಕ್ಕಿ ಹರಿಯುವ ನೀರು ರಸ್ತೆಯನ್ನೇ ನುಂಗಿದೆ. ದೊಡ್ಡ ತಗ್ಗುಗಳು, ಕೆಸರುಮಯ ರಸ್ತೆಯಿಂದಾಗಿ ಇದು ಅಪಾಯಕಾರಿ ವಲಯವಾಗಿದೆ.

ಈ ರಸ್ತೆಯ ಹಾನಿಗೊಳಗಾದ ಒಂದು ಭಾಗದಲ್ಲಿ ಲಾರಿಯೊಂದು ಎರಡು ದಿನಗಳ ಕಾಲ ಸಿಲುಕಿಕೊಂಡಿತ್ತು, ಅದನ್ನು ತೆರವುಗೊಳಿಸಲು ಎರಡು ಕ್ರೇನ್‍ಗಳು ಬೇಕಾದವು. ರಸ್ತೆಯು ಭಾರಿ ವಾಹನಗಳಿಗೆ ಬಹುತೇಕ ದುಸ್ತರವಾಗಿದೆ.

ಈ ಮಾರ್ಗದಲ್ಲಿ ಹಲವಾರು ಬೃಹತ್ ಗುಂಡಿಗಳಿವೆ, ಕೆಲವು ಭಾಗಗಳು ಬಹುತೇಕ ಸಂಚಾರಕ್ಕೆ ಯೋಗ್ಯವಲ್ಲ. ಒಂದು ಘಟನೆಯಲ್ಲಿ, ಮಕ್ಕಳಿಂದ ತುಂಬಿದ ಶಾಲಾ ಬಸ್ ಗುಂಡಿಯಲ್ಲಿ ಸಿಲುಕಿಕೊಂಡಿತ್ತು, ಶಿಕ್ಷಕರು ಮತ್ತು ಸ್ಥಳೀಯರು ಮಧ್ಯಪ್ರವೇಶಿಸಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ದರು.

ಯಾವುದೇ ಆ್ಯಂಬೂಲೆನ್ಸ್‌ ಅಥವಾ ದೊಡ್ಡ ವಾಹನಗಳು ಆ ಪ್ರದೇಶವನ್ನು ತಲುಪಲು ಸಾಧ್ಯವಾಗದ ಕಾರಣ, ಅಸ್ವಸ್ಥ ರೋಗಿಯನ್ನು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಬೇಕಾಗಿದೆ.

ರಸ್ತೆಯ ಹದಗೆಟ್ಟ ಸ್ಥಿತಿಯು ಮಾರ್ಗದಲ್ಲಿನ ಎಲ್ಲಾ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳು, ಕಾರ್ಮಿಕರು ಮತ್ತು ರೈತರು ಸೇರಿದಂತೆ ನೂರಾರು ದೈನಂದಿನ ಪ್ರಯಾಣಿಕರಿಗೆ ಸಂಪರ್ಕ ಇಲ್ಲದಂತಾಗಿದೆ.

ಅಪಾಯಕಾರಿ ರಸ್ತೆ- ಸಂಚಾರಕ್ಕೆ ಸಂಚಕಾರ

ತೋನಸಿನಹಳ್ಳಿ ಇಂದ ಶಹಾಬಾದ್‌ಗೆ ವಿದ್ಯಾರ್ಥಿಗಳು, ಹಳ್ಳಿಯಿಂದ ಕೆಲಸಕ್ಕಾಗಿ ಕಲಬುರ್ಗಿಗೆ ಹೋಗುವ ಕಾರ್ಮಿರಿಗೆ ನಿತ್ಯ ಈ ರಸ್ತೆ ತಲೆ ನೋವಾಗಿದೆ. ಈ ರಸ್ತೆಯು ಸಂಪೂರ್ಣ ತಗ್ಗು ಗುಂಡಿಗಳಾಗಿವೆ, ಕೆಲವು ದ್ವಿಚಕ್ರ ವಾಹನದಿಂದ ಬಿದ್ದು, ಕೈ ಕಾಲಿಗೆ ಗಾಯವಾಗಿರುವಂತಹ ದಿನನಿತ್ಯ ಘಟನೆ ನಡೆಯುತ್ತಿವೆ ಅದೇ ರೀತಿ ಲಾರಿ ಟ್ರಾಕ್ಟರ್‌ಗಳು ಉರುಳುತ್ತಿವೆ ಬಸ್‌, ಆಟೋ ಕಾರುಗಳು ರಸ್ತೆಯಲ್ಲಿ ಸಿಕ್ಕಿಬಿಳುತ್ತಿವೆ, ಬೈಕ್ ಸವಾರರು ರಸ್ತೆ ಎಲ್ಲಿದೆ ಎಂದು ಹುಡುಕಿಕೊಂಡು ಹಾವಿನಂತೆ ತೆರಳುತ್ತಿದ್ದಾರೆ. ಪ್ರಯಾಣಿಕರು ವಾಹನ ಚಾಲಕರು ಹರ ಸಾಹಸಪಟ್ಟು ಶಹಾಬಾದ್‌ದಿಂದ ಜೇವರ್ಗಿ ರಸ್ತೆ ಮಾರ್ಗ ಸಂಚರಿಸಲಬೇಕಾಗಿದೆ. ಶಹಾಬಾದ್ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ತೋನಸನಹಳ್ಳಿ-ಫಿರೋಜಾಬಾದ್ ವರೆಗೆ ಗುಂಡಿಗಳು

ಶಹಾಬಾದ್ ನಿಂದ ತೋನಸನಹಳ್ಳಿ ಮಾರ್ಗದ ಫಿರೋಜಾಬಾದ್ ಕ್ರಾಸ್ ವರೆಗೆ ಗುಂಡಿಗಳೇ ಇದ್ದು, ಪ್ರಯಾಣಕ್ಕೆ ಯೋಗ್ಯವಾಗಿಲ್ಲ. ಪ್ರತಿಬಾರಿ ವಿವಿಧ ಪಕ್ಷ ಸಂಘಟನೆಗಳು, ಸಾರ್ವಜನಿಕರು, ತಾಳ್ಮೆ ಕಳೆದುಕೊಳ್ಳುವುದಕ್ಕೂ ಮುನ್ನ ಅಧಿಕಾರಿಗಳು ಗಮನಹರಿಸುವುದು ಉತ್ತಮ. ಹೋರಾಟ, ರಸ್ತೆ ತಡೆ ಮಾಡಿದಾಗ ಮಾತ್ರ ಮಣ್ಣು ತಂದು ಸುರಿಯುತ್ತಾರೆ. ಹಣದ ಕೊರತೆ ಇದೆ, ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಕೆಕೆಆರ್‌ಡಿಬಿಯಿಂದ ಹಣ ಬಿಡುಗಡೆ ಆದ ಮೇಲೆ ರಸ್ತೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ, ಮನವಿ ಪತ್ರ ಸ್ವೀಕರಿಸಿ ತೆರಳುವುದೇ ಆಗಿದೆ ಹೊರತು ದಶಕಗಳಿಂದ ರಸ್ತೆ ನಿರ್ಮಾಣವಾಗಿಲ್ಲ, ಇದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶಹಾಬಾದ್‌- ಜೇಲವರ್ಗಿ ಈ ರಸ್ತೆಯಲ್ಲಿನೀ ಹಿಂದೆ 2 ಲಾರಿ ತಗ್ಗಿನಲ್ಲಿ ಸಿಲುಕಿ ಉಂಟಾದ ಆಯೋಮಯ ಸ್ಥಿತಿಯಿಂದ ತಗ್ಗಿನಿಂದ ಲಾರಿ ಹೊರ ತರಲು ಎರಡು ದಿನಗಳು ಬೇಕಾದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು