ಸಿದ್ದರಾಮಯ್ಯರ ಮೌಲ್ಯಾಧಾರಿತ ರಾಜಕಾರಣ ಎಲ್ಹೋಯ್ತು?: ಗೋವಿಂದ ಕಾರಜೋಳ ಪ್ರಶ್ನೆ

KannadaprabhaNewsNetwork | Published : Jun 2, 2024 1:45 AM

ಸಾರಾಂಶ

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರು. ಆಂಧ್ರದ ಒಂಬತ್ತು ಖಾಸಗಿ ಕಂಪನಿಗಳಿಗೆ ಹೋಗಿವೆ. ನೆರೆರಾಜ್ಯಗಳ ಚುನಾವಣೆಗೆ ಬಳಕೆಯಾಗಿರುವ ಗುಮಾನಿ ಇದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಸಿದ್ದರಾಮಯ್ಯ ಜನತಾ ಪರಿವಾರದಲ್ಲಿ ಇದ್ದಾಗೆ ಮೌಲ್ಯಾಧಾರಿತ ರಾಜಕಾರಣ ಮಾಡಿದ್ದರು. ಅಂದಿನ ಅವರ ರಾಜಕೀಯ ಬದ್ಧತೆ ಎಲ್ಲಿ ಹೋಯ್ತೆಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾ ಕಾರ್ಯಾಲಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಸಣ್ಣ ರೈಲು ಅಪಘಾತಕ್ಕೆ ರಾಜೀನಾಮೆ ನೀಡಿದ್ದರು. ಟೆಲಿಫೋನ್ ಕದ್ದಾಲಿಕೆ ಆರೋಪ ಬಂದಾಗ ರಾಮಕೃಷ್ಣ ಹೆಗಡೆ ರಾಜಿನಾಮೆ ನೀಡಿದ್ದರು. ವಾಲ್ಮೀಕಿ ಅಭಿವೃದ್ಧಿ‌ ನಿಗಮದ 187 ಕೋಟಿ ರು ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯ ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ. ಪ್ರಕರಣ ಬಯಲಿಗೆ ಬಂದು ಇಷ್ಟು ದಿನ ಆದರೂ‌ ಸಿಎಂ,‌ಡಿಸಿಎಂ ಸೇರಿದಂತೆ‌ ಸಚಿವರು ಬಾಯಿ ಬಿಡುತ್ತಿಲ್ಲೆವೆಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗಿದ್ದು ಅಭಿವೃದ್ಧಿ ಶೂನ್ಯ. ಸರ್ಕಾರದ ಖಜಾನೆ ಹಗಲು ದರೋಡೆಯಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರು. ಆಂಧ್ರದ ಒಂಬತ್ತು ಖಾಸಗಿ ಕಂಪನಿಗಳಿಗೆ ಹೋಗಿವೆ. ನೆರೆರಾಜ್ಯಗಳ ಚುನಾವಣೆಗೆ ಬಳಕೆಯಾಗಿರುವ ಗುಮಾನಿ ಇದೆ ಎಂದರು.

ಯಾವುದೇ ಸರ್ಕಾರಿ ಅನುದಾನ ಬಳಕೆ ಮಾಡುವಾಗ ಒಂದೇ ಖಾತೆ ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಆದರೆ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣಕಾಸು ನಿರ್ವಹಣೆಗೆ ಉಪ ಖಾತೆ ತೆರೆಯುವಂತೆ ಸಚಿವರು ಮೌಖಿಕ ಆದೇಶ ನೀಡಿದ್ದರೆಂಬ ಸಂಗತಿ ಚಂದ್ರಶೇಖರ್ ಅವರ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದೆ. ಉಪ ಖಾತೆ ತೆರೆದ ಮೇಲೆ ಚೆಕ್ ಬುಕ್, ಪಾಸ್ ಬುಕ್ ಏಕೆ ಪಡೆದುಕೊಂಡಿಲ್ಲವೆಂದು ಕಾರಜೋಳ ಪ್ರಶ್ನಿಸಿದರು.

ಅನುದಾನದ ವಿಚಾರವಾಗಿ ಆರ್ಥಿಕ ವರ್ಷದ ಅಂತ್ಯಕ್ಕೆ ಆಡಿಟ್ ಮಾಡಿಸಲಾಗುತ್ತದೆ. ಆಡಿಟ್ ಮಾಡಿಸುವಾಗ ಹಣ ವರ್ಗಾವಣೆ ಬಯಲಿಗೆ ಬಾರದಿರುವುದು ಅನುಮಾನ ಮೂಡಿಸಿದೆ. ಸರ್ಕಾರದ ನೇರ ಪಾತ್ರವಿದೆ. ಸಚಿವ ಸಂಪುಟದ ಎಲ್ಲ ಸದಸ್ಯರು ಪ್ರಕರಣವ ಮುಚ್ಚಿ ಹಾಕಲುಯತ್ನಿಸುತ್ತಿದ್ದಾರೆ. ಎಸ್ಐಟಿ, ಸಿಓಡಿ ತನಿಖೆಯಿಂದ ನಿಸ್ಪಕ್ಷಪಾತ ತನಿಖೆ ಸಾಧ್ಯ ಇಲ್ಲ. ಯೂನಿಯನ್ ಬ್ಯಾಂಕ್ ಶೆಡ್ಯೂಲ್ಡ್ ಬ್ಯಾಂಕ್ ಆಗಿರುವುದರಿಂದ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದೆ. ಹಾಗಾಗಿ ಇಡೀ ಪ್ರಕರಣ ಕೇಂದ್ರದ ತನಿಖಾ ಸಂಸ್ಥೆಗಳಿಂದ ನಡೆಸಬೇಕೆಂದು ಕಾರಜೋಳ ಹೇಳಿದರು.

ದಾವಣಗೆರೆಯಲ್ಲಿ ಗುತ್ತಿಗೆದಾರ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದು, 80 ಲಕ್ಷ ಬಿಲ್‌ ಕೊಡಲು‌ ಕಮಿಷನ್ ಗೆ ಸತಾಯಿಸಿದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ರಾಜಿನಾಮೆ ನೀಡಿದ್ದರು. ಈ ವೇಳೆ ಸಿದ್ದರಾಮಯ್ಯ ಒಂದು ಹೆಜ್ಜೆ ಮುಂದೆ ಹೋಗಿ ಈಶ್ವರಪ್ಪಗೆ ಮರಣದಂಡನೆಗೆ ಗುರಿಪಡಿಸಬೇ ಕೆಂದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನದ ವಿಚಾರದಲ್ಲಿ ಸಿದ್ದರಾಮಯ್ಯ ಏಕೆ ಸುಮ್ಮನಿದ್ದಾರೆಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕ ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಾಯಕ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿವೆ. ಶೋಷಿತರ ಪರವಾಗಿ ಇರುವ ಸರ್ಕಾರವೆಂದು ಹೇಳುತ್ತಿರುವ ಸಿದ್ದರಾಮಯ್ಯ ವಾಲ್ಮೀಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬಳಕೆ ಮಾಡಬೇಕಾದ ಅನುದಾನವ ಬೇನಾಮಿ ಕಂಪನಿಗಳಿಗೆ ವರ್ಗಾವಣೆ ಮಾಡಿ ದರೋಡೆ ಮಾಡಿರುವುದು ಸರಿಯೇ? ಎಂದರು.

ಯಾವುದೇ ಬ್ಯಾಂಕ್ ಅಧಿಕಾರಿ ಹೀಗೆ ಮನಸೋ ಇಚ್ಛೆ ವರ್ಗಾವಣೆ ಮಾಡುವುದಿಲ್ಲ. ಸರ್ಕಾರ ಶಾಮಿಲಾಗಿಯೇ ಈ ಕೆಲಸ ಮಾಡಿದೆ. ಯೂನಿಯನ್ ಬ್ಯಾಂಕಿನವರೇ ಕೇಂದ್ರದ ಆರ್ಥಿಕ ಇಲಾಖೆಗೆ ಪತ್ರ ಬರೆದು ತನಿಖೆ ನಡೆಸುವಂತೆ ವಿನಂತಿಸಿದ್ದಾರೆ. ಸಿಬಿಐ ಎಂಟ್ರಿ ಆದರೆ ನಮ್ಮ ಬುಡಕ್ಕೆ ನೀರು ಬರುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಎಸ್‌ಐಟಿ ಮೂಲಕ ತನಿಖೆ ನಾಟಕವಾಡುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಖಜಾಂಚಿ ಮಾಧುರಿ ಗಿರೀಶ್, ಕಲ್ಲೇಶಯ್ಯ. ಚಾಲುಕ್ಯ ನವೀನ್, ನಾಗರಾಜ ಬೇದ್ರೆ ಇದ್ದರು.

Share this article