ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡುವುದಕ್ಕೆ ಹೊರಟಿರುವ ಕಾಗೇರಿ ಅವರಿಂದ ಜಿಲ್ಲೆಯ ಯಾವ ಮಾನ ಗೌರವ ಹೆಚ್ಚಾಗಿದೆ ಅಥವಾ ನನ್ನಿಂದ ಯಾವ ಕಾರಣಕ್ಕೆ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗಿದೆ ಎಂಬುವುದನ್ನು ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯ ಜನತೆಯ ಮುಂದೆ ಸ್ಪಷ್ಟಪಡಿಸಬೇಕು - ಶಿವರಾಮ ಹೆಬ್ಬಾರ್
ಯಲ್ಲಾಪುರ : ಮಾಡಬಾರದ್ದನ್ನೆಲ್ಲಾ ಮಾಡಿಕೊಂಡು ಕ್ಷೇತ್ರದ ಹಾಗೂ ಜಿಲ್ಲೆಯ ಮಾನವನ್ನು ಹರಾಜು ಹಾಕಿದ್ದಾರೆ ಎಂಬ ಮಾತಿನ ಅರ್ಥದ ಬಗ್ಗೆ ಕಾಗೇರಿ ಅವರೇ ಸ್ಪಷ್ಟಪಡಿಸಬೇಕು. ಉತ್ತರ ಕನ್ನಡ ಜಿಲ್ಲೆಯನ್ನು ಇಬ್ಭಾಗ ಮಾಡುವುದಕ್ಕೆ ಹೊರಟಿರುವ ಕಾಗೇರಿ ಅವರಿಂದ ಜಿಲ್ಲೆಯ ಯಾವ ಮಾನ ಗೌರವ ಹೆಚ್ಚಾಗಿದೆ ಅಥವಾ ನನ್ನಿಂದ ಯಾವ ಕಾರಣಕ್ಕೆ ಜಿಲ್ಲೆಯ ಗೌರವಕ್ಕೆ ಧಕ್ಕೆಯಾಗಿದೆ ಎಂಬುವುದನ್ನು ಕಾಗೇರಿ ಅವರು ಉತ್ತರ ಕನ್ನಡ ಜಿಲ್ಲೆಯ ಜನತೆಯ ಮುಂದೆ ಸ್ಪಷ್ಟಪಡಿಸಬೇಕು ಎಂದು ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಲೋಕಸಭಾ ಚುನಾವಣೆ ಅಭ್ಯರ್ಥಿ ಕಾಗೇರಿ ಅವರು ಉದ್ದೇಶಪೂರ್ವಕವಾಗಿ ಜಿಲ್ಲೆಯಲ್ಲಿ ನಡೆಯುವ ಪಕ್ಷದ ಸಭೆ, ಸಮಾರಂಭ ಹಾಗೂ ಪತ್ರಿಕೆಗಳಲ್ಲಿನ ಜಾಹಿರಾತಿನಲ್ಲಿ ನನ್ನ ಭಾವಚಿತ್ರವನ್ನು ತೆಗೆದು ಹಾಕಿಸಿದ್ದಾರೆ. ಅವರಿಗೆ ಈ ರೀತಿಯಲ್ಲಿ ಮಾತನಾಡುವ ಯಾವ ಅಧಿಕಾರವಿದೆ. ಚುನಾವಣೆ ಸಂದರ್ಭದಲ್ಲಿ ನನ್ನ ಹಾಗೂ ನಿಮ್ಮ ಸಮಸ್ಯೆ ಒಂದೇ ಆಗಿತ್ತು. ಆದರೂ ನಾನು ಸಹಿಸಿಕೊಂಡು ಬಂದಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಕ್ಕೆ ಸತತ ಒಂದು ತಿಂಗಳ ಕಾಲ ಅವಿರತವಾಗಿ ಅಪಪ್ರಚಾರ ನಡೆಸಿ ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕೆಲವು ಪ್ರಮುಖರಲ್ಲಿ ಒಬ್ಬರಾದ ನರಸಿಂಹ ಕೋಣೆಮನೆ ಅವರ ಸಹೋದರ ಹರಿಪ್ರಕಾಶ ಕೋಣೆಮನೆಗೆ ಸಹ ರಾಜ್ಯ ವಕ್ತಾರ ಜವಾಬ್ದಾರಿಯನ್ನು ನೀಡುವಾಗ ಕಾಗೇರಿ ಅವರು ಏಕೆ ಪ್ರಶ್ನಿಸಲಿಲ್ಲ? ಪಕ್ಷಕ್ಕೆ ದ್ರೋಹ ಮಾಡಿರುವವರಿಗೆ ಜವಾಬ್ದಾರಿ ಬಹುಮಾನ ನೀಡಿರುವುದರ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದ್ದಾರೆ.
ಸಹೋದರಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಸೋಲಿಗೆ ಹೆಬ್ಬಾರ್ ಕಾರಣ ಎಂದು ಹೇಳಿದ್ದಾರೆ. ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಶಕ್ತಿ ಅಭ್ಯರ್ಥಿಯ ಸೋಲಿಸುವ ಮಟ್ಟಿಗೆ ಇದೆ ಎಂದರೆ ಸಹೋದರಿ ರೂಪಾಲಿ ನಾಯ್ಕ ಅವರು ಮುಂದಿನ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವುದಕ್ಕೆ ಕಷ್ಟವಾಗಲಿದೆ ಎಂದು ತಿಳಿದುಕೊಳ್ಳಬೇಕು. ದ್ವೇಷವನ್ನು ಹರಡುವ ಮಾತುಗಳೇ ಬಂಡವಾಳ ಮಾಡಿಕೊಂಡಿರುವ ಸ್ನೇಹಿತ ಬಸವನಗೌಡ ಪಾಟೀಲ್ ಯತ್ನಾಳ ಅವರೇ ನನ್ನಿಂದ ಪಕ್ಷಕ್ಕೆ ಎಷ್ಟು ಹಾನಿ ಉಂಟಾಗಿದೆಯೋ ಅದರ ನೂರು ಪಟ್ಟು ಹಾನಿ ಕಳೆದ 1 ವರ್ಷಗಳಿಂದ ತಮ್ಮ ಮಾತುಗಳಿಂದ ಪಕ್ಷಕ್ಕೆ ಉಂಟಾಗಿದೆ. ಆದರೂ ನಮ್ಮ ಜಿಲ್ಲೆಯ ರಾಜಕೀಯದ ಚಿತ್ರಣದ ಬಗ್ಗೆ ಗೊತ್ತಿರದ ತಾವು ತಿಳಿಯದೆ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲಾ ಎಂದು ಕಿವಿಮಾತು ಹೇಳಿದ್ದಾರೆ.
ಕಳೆದ 6 ಲೋಕಸಭಾ ಚುನಾವಣೆಗಳಲ್ಲಿ ಪಕ್ಷದಲ್ಲೇ ಉಳಿದುಕೊಂಡು ಯಾರು ಯಾರು ಏನು ಮಾಡಿದ್ದಾರೆ ಎಂಬ ಇತಿಹಾಸ ಗೊತ್ತಿಲ್ಲದ ವ್ಯಕ್ತಿ ನಾನಲ್ಲ. ಕೆಲವರು ಆಡದೇ ಮಾಡುತ್ತಾರೆ, ಕೆಲವರು ಆಡಿ ಮಾಡುತ್ತಾರೆ. ಆಡದೇ ಮಾಡುವವರು ಬುದ್ಧಿವಂತರಾಗುತ್ತಾರೆ. ಆಡಿ ಮಾಡುವವರನ್ನು ಬುದ್ಧಿವಂತರು ಎಂದು ಅನಿಸಿಕೊಳ್ಳುವುದಿಲ್ಲ, ಇದನ್ನು ಸಹ ಕಾಗೇರಿ ಅವರು ಅರಿತುಕೊಂಡರೇ ಒಳ್ಳೆಯದು ಎನ್ನುವ ಎಚ್ಚರಿಕೆ ನೀಡಿದ್ದಾರೆ.
ಹೆಬ್ಬಾರ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಂದಾಗ ನಾನೇ ಅವರನ್ನು ಮಂತ್ರಿ ಮಾಡಿದ್ದು ಎಂದು ಕಾಗೇರಿ ಅವರು ಹೇಳಿದ್ದಾರೆ. ನಮ್ಮ 17 ಶಾಸಕರ ರಾಜೀನಾಮೆಯ ಫಲವೇ ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿ ಮುಖ್ಯಮಂತ್ರಿಗಳಾಗಿದ್ದು. ಕಾಗೇರಿ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗಿದ್ದು. ನಮ್ಮ ತ್ಯಾಗದ ಫಲವೇ ತಾವೆಲ್ಲರೂ ಅಧಿಕಾರವನ್ನು ಅನುಭವಿಸಿದ್ದೀರಿ ಎಂದು ಕಾಗೇರಿ ಅವರು ಅರಿತುಕೊಳ್ಳಬೇಕು. ಕಾಗೇರಿ ಅವರು ಈ ರೀತಿಯಲ್ಲಿ ಹೇಳಿಕೆಯನ್ನು ನೀಡಿದರೆ ನಾನೂ ತಕ್ಕ ಉತ್ತರ ನೀಡುತ್ತೇನೆ ಎಂದು ನೆನಪಿರಲಿ ಎಂದಿದ್ದಾರೆ.