ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

KannadaprabhaNewsNetwork | Published : Apr 22, 2024 2:03 AM

ಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ಟಿ.ಡಿ.ರಾಜೇಗೌಡ, ಸುಧೀರ್‌ಕುಮಾರ್, ಅಂಶುಮಂತ್, ಬಿ.ಸಿ.ಗೀತಾ, ಹೇಮಲತಾ ಇದ್ದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಏಕೆ ಮಾಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪ್ರಶ್ನಿಸಿದರು.

ಪಟ್ಟಣದ ಜೆಸಿ ವೃತ್ತದಲ್ಲಿ ಕಾಂಗ್ರೆಸ್ ಪಕ್ಷ ಭಾನುವಾರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುಪಿಎ ಸರ್ಕಾರವಿದ್ದಾಗ ಕಾಫಿ ಬೆಳೆಗಾರರಿಗೆ ವಿದರ್ಭ ಪ್ಯಾಕೇಜ್ ನೀಡಿ ಬೆಳೆಗಾರರ ಪರವಾಗಿತ್ತು.

ಯುಪಿಎ ಅವಧಿಯಲ್ಲಿಯೇ ನಾನು ಗೋರಖ್‌ ಸಿಂಗ್ ಅವರನ್ನು ಮಲೆನಾಡು ಭಾಗಕ್ಕೆ ಕರೆಯಿಸಿ ಅಡಕೆ ಬೆಳೆಗೆ ಇರುವ ರೋಗದ ಕುರಿತು ಸಾಧಕ ಬಾಧಕ ನೋಡಲು ತಿಳಿಸಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಗೋರಖ್‌ ಸಿಂಗ್ ವರದಿ ಜಾರಿಗೆ ಪ್ರಯತ್ನ ಪಡಲಿಲ್ಲ. ಅಡಕೆ ಅಧ್ಯಯನ ಕೇಂದ್ರ ಕ್ಷೇತ್ರದಲ್ಲಿ ಇದ್ದರೂ ಸಹ ಅದರ ಅಭಿವೃದ್ಧಿಗೆ ಮುಂದಾಗಿಲ್ಲ. ಕ್ಷೇತ್ರದ ಸಂಸದರು ಕೃಷಿ ಸಚಿವರಾಗಿದ್ದರೂ ಸಹ ಇದರ ಪ್ರಯತ್ನಕ್ಕೆ ಕೈಜೋಡಿಸಿಲ್ಲ ಎಂದು ದೂರಿದರು.

ಕ್ಷೇತ್ರದಲ್ಲಿ ಪ್ರಮುಖವಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ, ಮಲ್ಟಿಸೆಷ್ಪಾಲಿಟಿ ಆಸ್ಪತ್ರೆಗಳ ನಿರ್ಮಾಣವನ್ನು ಮಾಡಬೇಕಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮಹತ್ವವನ್ನು ಮತದಾರರಿಗೆ ಬಿಡಿಸಿ ಹೇಳಿ ಮತವನ್ನು ಕೇಳಬೇಕಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ ಕೇಳಬೇಕಿದೆ. ಜನರ ಸಮಸ್ಯೆಗೆ ಸ್ಪಂದಿಸುವ ನನಗೆ ಮತ ನೀಡಿ ಎಂದು ಮನವಿ ಮಾಡಿದರು.

ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿರುವುದು ಕೇವಲ ಕಾಂಗ್ರೆಸ್ ಪಕ್ಷವಾಗಿದ್ದು, ಬಿಜೆಪಿಯವರು ದೇಶಕ್ಕಾಗಿ ಏನೂ ಮಾಡಿಲ್ಲ. ಬಿಜೆಪಿಯವರು ಸಾವಿರ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಕೇಂದ್ರ ಸರ್ಕಾರವು ಅಂಬಾನಿ, ಆದಾನಿಯಂತಹ ಶ್ರೀಮಂತರ ಸಾಲ ಮನ್ನಾ ಮಾಡುವ ಉದ್ದೇಶದಿಂದ ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಹೊರೆ ಹೊರಿಸಿದೆ. ಕಾಂಗ್ರೆಸ್ ಪಕ್ಷ ಎಂದರೆ ಹೋರಾಟ, ಸಿದ್ಧಾಂತ ಪಕ್ಷ. ಬಿಜೆಪಿ ಎಂದಿಗೂ ರೈತರ, ಜನಸಾಮಾನ್ಯರ ಪರ ನಿಲ್ಲುವುದಿಲ್ಲ ಎಂಬುದು ಅರಿಯಬೇಕಿದೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ, ಕೆಪಿಸಿಸಿ ವಕ್ತಾರ ಸುಧೀರ್‌ಕುಮಾರ್ ಮುರೊಳ್ಳಿ, ಸದಸ್ಯ ಪಿ.ಆರ್.ಸದಾಶಿವ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ, ಚುನಾವಣಾ ವೀಕ್ಷಕ ಭಾರ್ಗವ್, ಮುಖಂಡರಾದ ಇಫ್ತೆಖಾರ್ ಆದಿಲ್, ಹೇಮಲತಾ, ಚಂದ್ರಮ್ಮ, ಹಿರಿಯಣ್ಣ, ಮಹಮ್ಮದ್ ಹನೀಫ್, ಎಂ.ಎಸ್.ಅರುಣೇಶ್, ಎಂ.ಎಸ್.ಜ ಯಪ್ರಕಾಶ್, ಸಚಿನಾ ಮೀಗಾ, ನಟರಾಜ್ ಗೇರುಬೈಲು, ಆಶಾ, ಇಬ್ರಾಹಿಂ ಶಾಫಿ, ಶಶಿಕಲಾ, ಬಿ.ಕೆ.ಮಧುಸೂದನ್, ರಾಜೇಶ್ ಕೇಶವತ್ತಿ, ಕಾರ್ತಿಕ್ ಹುಣಸೇಕೊಪ್ಪ ಮತ್ತಿತರರಿದ್ದರು.ಕಾಂಗ್ರೆಸ್‌ ಆಚೆ ಓಡಿಸಿ... ಬಿಜೆಪಿ ಗೆಲ್ಲಿಸಿ: ಎಂ.ಪಿ. ಕುಮಾರಸ್ವಾಮಿ ಎಡವಟ್ಟುಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಭೆಯಲ್ಲಿ ಮಾತನಾಡಿದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಭಾಷಣದ ಕೊನೆಯ ಭಾಗದಲ್ಲಿ ಮತ ಯಾಚನೆ ಮಾಡುವ ಸಂದರ್ಭದಲ್ಲಿ ವಿಷಯಗಳನ್ನು ಪ್ರಸ್ತಾಪಿಸಿ ಈ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವನ್ನು ಪರ್ಮನೆಂಟ್ ಆಗಿ ಆಚೆ ಓಡಿಸಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಎರಡೆರಡು ಬಾರಿ ಮನವಿ ಮಾಡಿದರು.

ಕುಮಾರಸ್ವಾಮಿ ಅವರ ಮಾತನ್ನು ಕೇಳಿದ ವೇದಿಕೆಯಲ್ಲಿ ಗಣ್ಯರು, ಮುಂಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಷಣದಲ್ಲಾದ ಯಡವಟ್ಟನ್ನು ಹೇಳಿದರು. ತಕ್ಷಣ ಎಚ್ಚೆತ್ತ ಎಂಪಿಕೆ ನಾನು ಇಪ್ಪತ್ತು ವರ್ಷ ಬಿಜೆಪಿಯಲ್ಲಿದ್ದೆ ಆದ್ದರಿಂದ ಅದೇ ನೆನಪಾಗುತ್ತದೆ ಎಂದರು. ಕೆಲವು ಕಾಂಗ್ರೆಸ್ ಕಾರ್ಯಕರ್ತರು ವೇದಿಕೆ ಮುಂಭಾಗಕ್ಕೆ ಬಂದು ಎಂಪಿಕೆ ಮಾತಿಗೆ ಆಕ್ಷೇಪಿಸಿದರು.

ಅಷ್ಟರಲ್ಲಾಗಲೇ ಕುಮಾರಸ್ವಾಮಿ ತಮ್ಮ ಮಾತನ್ನು ಬದಲಿಸಿ ಮುಂದಿನ ಆರೇಳು ತಿಂಗಳಲ್ಲಿ ಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಹೇಳಿ ತಮ್ಮ ಮಾತು ಮೊಟಕುಗೊಳಿಸಿದರು. ನಂತರ ವೇದಿಕೆಗೆ ಬಂದ ಕೆಪಿಸಿಸಿ ವಕ್ತಾರ ಸುಧೀರ್ ಮುರೊಳ್ಳಿ ಕುಮಾರಸ್ವಾಮಿ ಅವರ ಮನಃಸ್ಥಿತಿ ಸಂಪೂರ್ಣ ಕಾಂಗ್ರೆಸ್ ಪರವಾಗಿದ್ದು, ಮಾತಿನಲ್ಲಿ ತಪ್ಪಾಗಿದೆ. ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿ ಎಂಪಿಕೆ ಯಡವಟ್ಟಿಗೆ ತೆರೆ ಎಳೆದರು.