ಉದ್ಯೋಗ ಖಾತ್ರಿ ಯೋಜನೆ ಹೆಸರು ಬದಲಿಸೋದೇಕೆ?

KannadaprabhaNewsNetwork |  
Published : Jan 07, 2026, 01:45 AM IST
6ಕೆಡಿವಿಜಿ8-ದಾವಣಗೆರೆ ತಾ. ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ ಹಾಗೂ ಕುಂದು ಕೊರತೆಗಳ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. ..............6ಕೆಡಿವಿಜಿ9, 10, 11, 12-ದಾವಣಗೆರೆ ತಾ. ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉದ್ಯೋಗ ಖಾತರಿ ಕೂಲಿ ಕಾರ್ಮಿಕರ ಕುಂದು ಕೊರತೆಗಳ ಆಲಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ. | Kannada Prabha

ಸಾರಾಂಶ

ಪುರುಷ- ಮಹಿಳೆಯರೆನ್ನದೇ ಸಮಾನ ವೇತನ ನೀಡುವ ಮೂಲಕ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೃಷಿ, ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಇಂಥ ಯೋಜನೆ ಹೆಸರನ್ನೇ ಕೇಂದ್ರ ಸರ್ಕಾರ ಬದಲಿಸಲು ಹೊರಟಿದ್ದು ಸರಿಯಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಗ್ರಾಮೀಣ ಜನರ ಬದುಕನ್ನು ಹಸನಾಗಿಸಿದ ಯೋಜನೆಯಿದು: ಸಂಸದೆ ಡಾ.ಪ್ರಭಾ

- ಹೊನ್ನೂರಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ- ಕುಂದುಕೊರತೆ ಪರಿಶೀಲನಾ ಸಭೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪುರುಷ- ಮಹಿಳೆಯರೆನ್ನದೇ ಸಮಾನ ವೇತನ ನೀಡುವ ಮೂಲಕ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕೃಷಿ, ಕೂಲಿ ಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಇಂಥ ಯೋಜನೆ ಹೆಸರನ್ನೇ ಕೇಂದ್ರ ಸರ್ಕಾರ ಬದಲಿಸಲು ಹೊರಟಿದ್ದು ಸರಿಯಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಪಂ, ತಾಪಂ, ಗ್ರಾಪಂ ಸಹಯೋಗದಲ್ಲಿ ಮನರೇಗಾ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ ಹಾಗೂ ಕುಂದು ಕೊರತೆಗಳ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಕಾಮಗಾರಿ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಬೇಕಿಲ್ಲ. ಗ್ರಾ.ಪಂ.ನಲ್ಲಿ ಗ್ರಾಮಸಭೆ ಮೂಲಕ ಗ್ರಾಪಂ ಸದಸ್ಯರು ತೀರ್ಮಾನ ಕೈಗೊಳ್ಳುವ ಮಹತ್ತರ ಯೋಜನೆ ಇದಾಗಿದೆ. ಗ್ರಾ.ಪಂ.ನಿಂದ ಗ್ರಾಮಸಭೆಗಳಲ್ಲೇ ನಮ್ಮ ಹಳ್ಳಿಯಲ್ಲಿ ಇಷ್ಟು ಶೌಚಾಲಯ ಆಗಬೇಕು, ಇಷ್ಟು ಶಾಲೆಗಳ ಅಭಿವೃದ್ಧಿ ಆಗಬೇಕು, ನಮ್ಮ ಹೊಲದ ರಸ್ತೆ ಅಭಿವೃದ್ಧಿಪಡಿಸಬೇಕು, ಜಲಮೂಲಗಳ ಶುದ್ಧೀಕರಣ, ಹೂಳೆತ್ತಿ ಅಂತರ್ಜಲ ಹೆಚ್ಚಳದ ಮೂಲಕ ಸ್ವಾವಲಂಬಿ ಹಳ್ಳಿಯ ರೂಪುರೇಷೆ ಹಾಕಿಕೊಂಡು, ಪಂಚಾಯಿತಿಯಲ್ಲಿ ತೀರ್ಮಾನ ಕೈಗೊಂಡರೆ, ಜನರು ಉದ್ಯೋಗ ಖಾತ್ರಿಯಲ್ಲಿ ಹಳ್ಳಿಯನ್ನು ಕಟ್ಟುವ ಕೆಲಸವೇ ವೈಶಿಷ್ಟ್ಯ ಎಂದರು.

ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಗ್ರಾ.ಪಂ.ಗಳಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೊನ್ನೂರು ಗ್ರಾಪಂ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ಇಲ್ಲಿನ ಗ್ರಾಪಂ ಉದ್ಯೋಗ ಖಾತ್ರಿಯಲ್ಲಿ ನಂ.1 ಸ್ಥಾನ ಪಡೆದಿದೆ. ಮನರೇಗಾದಿಂದ ದೇಶದಲ್ಲಿ 5- 6 ಕೋಟಿ ಜನ ಕೂಲಿ ಕಾರ್ಮಿಕರು ಆರ್ಥಿಕ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು ಎಂದು ಹೇಳಿದರು.

ಇದೀಗ ಕೇಂದ್ರ ಸರ್ಕಾರ ಮನೇರಗಾ ಹೆಸರನ್ನೇ ಬದಲಾಯಿಸಿ, ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಆವೀಜಿಕ ಮಿಷನ್ ವಿಬಿ-ಜಿ ರಾಮ್ ಜಿ ಕಾಯ್ದೆ-2005 ಎಂಬುದಾಗಿ ಬದಲಿಸಿದೆ. ಹಳ್ಳಿಗಳ ಅಧಿಕಾರವನ್ನೇ ಕಸಿದು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ. ಮಹಿಳಾ ಮತ್ತು ಪುರುಷರಿಗೆ ಸಮಾನ ಕೆಲಸ ಕೊಡುವ ಯೋಜನೆವೊಂದಿದ್ದರೆ ಅದು ‘ಮನರೇಗಾ’ ಯೋಜನೆ ಎಂದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ದೇಶದಲ್ಲಿ ದುಡಿಯುವ ವರ್ಗಕ್ಕೆ ಕೆಲಸ ಕೊಡಲು 2005ರಲ್ಲಿ ಡಾ.ಮನಮೋಹನ್ ಸಿಂಗ್‌ ಅವರ ಯುಪಿಎ ಸರ್ಕಾರ ಮನರೇಗಾ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗಕ್ಕೆ ಕೆಲಸ ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಿತು. ಆದರೆ, ಅಂತಹ ಮಹತ್ವದ ಯೋಜನೆ ಹೆಸರನ್ನೇ ಬದಲಿಸುವ ದುಸ್ಸಾಹಸ ಕೇಂದ್ರ ಸರ್ಕಾರ ಮಾಡಿದೆ ಎಂದು ಆಕ್ಷೇಪಿಸಿದರು.

ಮನರೇಗಾ ಜಾರಿಗೊಳ್ಳುವ ಪೂರ್ವದಲ್ಲಿ ಇಲ್ಲಿನ ಹಳ್ಳಿ ಜನ ಮಹಾರಾಷ್ಟ್ರ, ಕೇರಳ ಸೇರಿದಂತೆ ಹೊರ ರಾಜ್ಯ ಹಾಗೂ ರಾಜ್ಯದ ಕಾಫಿನಾಡು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದರು. ಯಾವಾಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ‘ಮನರೇಗಾ’ ಯೋಜನೆ ಜಾರಿಗೊಳಿಸಿತೋ, ಅಂದಿನಿಂದ ಹಳ್ಳಿ ಜನರು ಆರ್ಥಿಕವಾಗಿ ಸಬಲರಾದರು. ಆದರೆ, ಈಗ ಕೇಂದ್ರ ಸರ್ಕಾರ ‘ಮನರೇಗಾ’ ಹೆಸರು ಬದಲಾಯಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ತಾಪಂ ಇಒ ರಾಮ ಭೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು. ಇದೇ ವೇಳೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಕೆ.ಎಸ್.ಬಸವಂತಪ್ಪ, ಜಿಪಂ ಸಿಇಒ ಗಿತ್ತೆ ಮಾಧವ ಗ್ರಾಮೀಣ ಕೂಲಿ ಕಾರ್ಮಿಕರ ಅಹವಾಲು ಆಲಿಸಿದರು.

- - -

(ಟಾಪ್‌ ಕೋಟ್‌) ಶಾಸಕ ಕೆ.ಎಸ್. ಬಸವಂತಪ್ಪ ಹಳ್ಳಿ ಜನರ ದನಿಯಾಗಿ, ಕಷ್ಟ-ಸುಖಗಳನ್ನು ಹಂಚಿಕೊಂಡಿದ್ದಾರೆ. ಬಡವರ ಕಷ್ಟ- ಸುಖಗಳನ್ನು ಚೆನ್ನಾಗಿ ಅರಿತಿದ್ದಾರೆ. ಮಾಯಕೊಂಡ ಕ್ಷೇತ್ರ ಕಾರ್ಯಕ್ರಮದಲ್ಲಿ ಭಾಗಿಯಾದಾಗ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿದೆ. ಸ್ವಉದ್ಯೋಗದಲ್ಲಿ ನೀವು ಹೇಗೆ ಆರ್ಥಿಕವಾಗಿ ಸಬಲರಾಗಬಹುದು ಎಂಬ ಬಗ್ಗೆ ತಿಳಿಸಿದ್ದಾರೆ.

- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ, ದಾವಣಗೆರೆ ಕ್ಷೇತ್ರ.

- - -

-6ಕೆಡಿವಿಜಿ8, 10:

ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರ ಆರೋಗ್ಯ ಶಿಬಿರ ಹಾಗೂ ಕುಂದು ಕೊರತೆಗಳ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕುಂದು ಕೊರತೆಗಳನ್ನು ಆಲಿಸಿದದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ