ಶಿವಮೊಗ್ಗ: ಕಾಶ್ಮೀರದಲ್ಲಿ ಉಗ್ರರ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತಿರುವಾಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಮುಸಲ್ಮಾನರ ಚೇಲಾಗಳಂತೆ ಮಾತನಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಕೇವಲ ಮುಸ್ಲಿಂ ಓಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್ ಹಾಗೂ ಸಚಿವ ತಿಮ್ಲಾಪುರ ಅವರು ಉಗ್ರರ ದಾಳಿ ಭದ್ರತೆ ವೈಫಲ್ಯ ಎಂದು ಬಾಯಿಗೆ ಬಂದ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಸ್ವತಃ ಕಾಂಗ್ರೆಸ್ ವರಿಷ್ಠರೇ ಖಂಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಬಂಧಿಸಿದಂತೆ ಇದು ಪಕ್ಷದ ಅಭಿಪ್ರಾಯ ಅಲ್ಲ. ವ್ಯಕ್ತಿಗತ ಅಭಿಪ್ರಾಯ ಎನ್ನುತ್ತಿದ್ದಾರೆ. ಹಾಗಾದರೆ ಈ ಹೇಳಿಕೆ ಕೊಟ್ಟವರನ್ನು ಇನ್ನೂ ಏಕೆ ಪಕ್ಷದಲ್ಲಿ ಇಟ್ಟುಕೊಂಡಿದ್ದಾರೆ. ಕೂಡಲೇ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಿದ್ದರಾಮಯ್ಯ ಅವರು ಈ ರೀತಿಯ ನಡವಳಿಕೆಯಿಂದ ಕರ್ನಾಟಕದ ಮರ್ಯಾದೆಯನ್ನು ಪ್ರಪಂಚದ ಮುಂದೆ ಕಳೆದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನು ಮೀರಿ ಮಾತನಾಡುತ್ತಿರುವವರಿಗೆ ಅಭ್ಯಾಸ ವರ್ಗ ನಡೆಸಿ ಬುದ್ಧಿ ಹೇಳಬೇಕು. ಕಪ್ಪು ಬಾವುಟ ಪ್ರದರ್ಶನ ಎಲ್ಲ ಕಡೆ ನಡೆಯುತ್ತದೆ. ಆದರೆ, ಇದೇ ವಿಚಾರಕ್ಕೆ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇಷ್ಟು ಸಣ್ಣ ವಿಷಯವನ್ನು ತಿಳಿದುಕೊಳ್ಳದ ಇವರು ಭಾರತದ ಭದ್ರತಾ ವೈಫಲ್ಯದ ಬಗ್ಗೆ ಮಾತನಾಡುತ್ತಾರೆ. ಇನ್ನಾದರೂ ಅವರು ತಮ್ಮ ಬುದ್ಧಿ ತಿದ್ದಿಕೊಳ್ಳಲಿ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಜಾಧವ್, ಬಾಲು, ನಟರಾಜ್ ಭಾಗವತ್, ಶಿವಾಜಿ, ಎಂ.ಶಂಕರ್ ಸೇರಿದಂತೆ ಹಲವರಿದ್ದರು.
ಅವಕಾಶ ನೀಡಬೇಡಿ: ಕೆಎಸ್ಇ
ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಪ್ರತಿಭಟನೆಗೆ ಅವಕಾಶ ನೀಡದಂತೆ ಹೈಕೋರ್ಟ್ ಸೂಚನೆ ಇದೆ. ಈ ಹಿಂದೆ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಪ್ರತಿಭಟನೆ ನಡೆಸಿದ ಹಿನ್ನೆಲೆ ಕೋರ್ಟ್ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ಈಗಾಗಲೇ ಈ ಜಾಗವನ್ನು ಖಾತೆ ಮಾಡಿದ್ದು ತಪ್ಪಾಗಿದೆ ಎಂದು ಹಿಂದಿನ ಆಯುಕ್ತರೇ ಜಿಲ್ಲಾಧಿಕಾರಿಗಳಿಗೆ ದಾಖಲೆ ನೀಡಿದ್ದಾರೆ. ಹೀಗಿರುವಾಗ ಅದೇ ಜಾಗದಲ್ಲಿ ಪ್ರತಿಭಟನೆಗೆ ಹೇಗೆ ಅವಕಾಶ ನೀಡುತ್ತಾರೆ. ಇದನ್ನು ವಿರೋಧಿಸಿ ರಾಷ್ಟ್ರಭಕ್ತರ ಬಳಗದಿಂದ ಆಯುಕ್ತರಿಗೆ ದೂರು ನೀಡುತ್ತೇವೆ ಎಂದು ಎಚ್ಚರಿಸಿದರು.