ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಖಾಸಗಿಯಾಗಿ ನಾನೇಕೆ ಎಫ್ಎಸ್ಎಲ್ ತನಿಖೆ ಮಾಡಿಸಲಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

KannadaprabhaNewsNetwork | Updated : Dec 27 2024, 12:29 PM IST

 ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾನೇಕೆ ಎಫ್ಎಸ್ಎಲ್ ತನಿಖೆ ಮಾಡಿಸಬೇಕು  ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದರು.

 ಚಿಕ್ಕಮಗಳೂರು :  ಬೆಳಗಾವಿ ಸುವರ್ಣ ಸೌಧದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾನೇಕೆ ಎಫ್ಎಸ್ಎಲ್ ತನಿಖೆ ಮಾಡಿಸಬೇಕು. ನನ್ನ ಮೇಲೆ ಆರೋಪ ಮಾಡಿರುವುದು ಓರ್ವ ಮಂತ್ರಿ. ಎಫ್‌ಎಸ್‌ಎಲ್‌ ವರದಿ ಬರುವ ಮುನ್ನವೇ ನನ್ನನ್ನು ಬಂಧನ ಮಾಡಿಸಿದರೋ ಇಲ್ಲವೋ. ನನ್ನನ್ನು ಅರೆಸ್ಟ್ ಮಾಡಿಸಿರುವ ಕಾಣದ ಕೈಗಳು ಎಫ್ ಎಸ್ ಎಲ್ ಹಾಗೂ ಸಿಐಡಿ ತನಿಖೆ ಮೇಲೆಯೂ ಕೆಲಸ ಮಾಡಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿಯಾಗಿ ಕಾಲ್ ಲಿಸ್ಟ್ ತೆಗೆಸಲು ಬರುವುದಿಲ್ಲ. ಮಂತ್ರಿ ಓರ್ವರು ನನ್ನ ಮೇಲೆ ದೌರ್ಜನ್ಯ ಮಾಡಲು ಹಾಗೂ ಕೇಸ್ ಹಾಕಲು ಕಾರಣಕರ್ತರಾಗಿದ್ದಾರೆ. ಹೀಗಿರುವಾಗ ಸಿಐಡಿ ತನಿಖೆ ಹೇಗೆ ನಿಷ್ಪಕ್ಷವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಹೀಗಾಗಿಯೇ ನಾನು ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದ್ದೇನೆ ಎಂದರು.

ಗಾಂಧಿ ಕಾಲದ ಕಾಂಗ್ರೆಸ್‌ ಉಳಿದಿಲ್ಲ:

1924ರಲ್ಲಿ ಬೆಳಗಾವಿಯಲ್ಲಿ ಗಾಂಧಿ ಕಾಂಗ್ರೆಸ್ ಅಧಿವೇಶನ ನಡೆದು 100 ವರ್ಷಗಳಾಗಿದೆ. ಈಗ ಗಾಂಧಿ ಕಾಲದ ಕಾಂಗ್ರೆಸ್ ಉಳಿದಿಲ್ಲ. ಕರ್ನಾಟಕದಲ್ಲಿ ಈಗ ಇರೋದು ಗೂಂಡಾ ಕಾಂಗ್ರೆಸ್, ಇಂದಿನ ಕಾಂಗ್ರೆಸ್ಸಿನಲ್ಲಿ ಗಾಂಧಿ ತತ್ತ್ವಗಳು ಉಳಿದಿಲ್ಲ ಎಂದರು.

ಗಾಂಧಿ ಪ್ರಾಮಾಣಿಕರಾಗಿದ್ರೆ ಇಲ್ಲಿರೋರು ಭ್ರಷ್ಟಾಚಾರಿಗಳು, ಆಯಾಕಟ್ಟಿನ ಹುದ್ದೆಗಳಿಗೂ ಹರಾಜು ಹಾಕ್ತಿದ್ದಾರೆ. ರೇಟ್ ಫಿಕ್ಸ್ ಮಾಡಿದ್ದಾರೆ. ಗಾಂಧಿ ಅಹಿಂಸೆ ಸತ್ಯಾಗ್ರಹ ಮಾಡಿದ್ರೆ ಇವ್ರು ಡಿಜೆ ಹಳ್ಳಿ. ಕೆಜೆ ಹಳ್ಳಿ ಬೆಂಕಿ ಹಾಕಿದವರು. ಎಸ್‌ಡಿಪಿಐ, ಪಿಎಫ್‌ಐ ಹೆಸರಿನಲ್ಲಿ ಅಶಾಂತಿ ಹುಟ್ಸಿ ಗಲಭೆ ನಡೆಸುವವರು. ಹುಬ್ಬಳ್ಳಿ ಪೊಲೀಸ್‌ ಸ್ಟೇಷನ್ ಸುಡೋಕೆ ಬಂದ ಹಿಂಸಾ ಪ್ರವೃತ್ತಿಯವರಿಗೆ ಬೆಂಬಲಿಸುವ ಕಾಂಗ್ರೆಸ್ ಈಗ ಇರೋದು. ಆ ಗಾಂಧಿ ಸತ್ಯದ ಆಧಾರದಲ್ಲಿ ರಾಜಕಾರಣ ಮಾಡಿದ್ರೆ ಇವ್ರಿಗೆ ಸುಳ್ಳೆ ಆಧಾರ ಎಂದು ಆರೋಪಿಸಿದರು.

ಕಾಶ್ಮೀರವನ್ನು ತುಂಡರಿಸುವ ಕೆಲಸ ಮಾಡಿದ್ದಾರೆ ಎಂದರೆ ಕಾಂಗ್ರೆಸ್ಸಿಗರ ಮನಸ್ಥಿತಿ ಏನೆಂಬುದು ಅರ್ಥವಾಗುತ್ತದೆ. ಜನರಿಗೆ ಮೋಸ ಮಾಡುತ್ತಾರೆ ಕಾಂಗ್ರೆಸ್‌ ವಿಸರ್ಜಿಸಿ ಎಂದು ಅಂದು ಗಾಂಧೀಜಿಗೆ ಕಾಂಗ್ರೆಸ್ಸಿಗರು ಹೇಳಿದ್ದರು. ಗಾಂಧೀಜಿ ಸ್ಮರಣೆ ಮಾಡುವಾಗ ಕಾಂಗ್ರೆಸ್ ವಿಸರ್ಜನೆ ಬಗ್ಗೆ ಗಾಂಧೀಜಿ ಹೇಳಿದ ಮಾತನ್ನು ಮೊದಲು ಪಾಲಿಸಬೇಕು ಎಂದು ಒತ್ತಾಯಿಸಿದರು.ಅಂಬೇಡ್ಕರ್‌ಗೆ ಅಪಮಾನ:

ಅಮಿತ್ ಷಾ ಮಾತನಾಡಿದ್ದು ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಮಾಡಿದ ಅನ್ಯಾಯದ ಬಗ್ಗೆ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಸೋಲಿಸಿದ ಬಗ್ಗೆ. ಆದರೆ, ಕಾಂಗ್ರೆಸ್ಸಿಗರು ಅಮಿತ್ ಷಾ ಅವರು ಅಂಬೇಡ್ಕರ್ ಗೆ ಅಪಮಾನ ಮಾಡಿದ್ದಾರೆ ಎಂದು ವಿಡಿಯೋ ತಿರುಚಿದ್ದಾರೆ. ವಾಸ್ತವವಾಗಿ ಅಂಬೇಡ್ಕರ್ ಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರು ಮೃತಪಟ್ಟಾಗ 6-3 ಅಡಿ ಜಾಗ ಕೊಡದೇ ಇದ್ದಿದ್ದು ಕಾಂಗ್ರೆಸ್. ಅಂಬೇಡ್ಕರ್ ಶವ ಸಾಗಿಸಿದ ವಿಮಾನದ ಬಾಡಿಗೆ ಕಟ್ಟಿಸಿಕೊಂಡಿದ್ದು ಕಾಂಗ್ರೆಸ್. ಭಾರತ ರತ್ನ ಕೊಡದೆ ಅಪಮಾನ ಮಾಡಿದ್ದು ಕೂಡ ಇದೇ ಕಾಂಗ್ರೆಸ್. ಈಗ ಸತ್ಯದ ತಲೆ ಮೇಲೆ ಹೊಡೆದಂತೆ ಕಾಂಗ್ರೆಸ್ಸಿಗರ ವರ್ತನೆಗಳಿವೆ ಎಂದು ಕಿಡಿಕಾರಿದರು.